ಒಂದೇ ದಿನ ‘ಸೀತಾರಾಮ ..’ ‘ಐ ಲವ್ ಯು’ ಕಾರ್ಯಕ್ರಮ!
Team Udayavani, Jan 17, 2019, 11:10 AM IST
ರಚಿತಾ ರಾಮ್ ನಾಯಕಿಯಾಗಿರುವ ಸಾಲು ಸಾಲು ಸಿನಿಮಾಗಳು ಈ ವರ್ಷ ಬಿಡುಗಡೆಯಾಗಲಿದೆ ಎಂಬ ವಿಚಾರ ನಿಮಗೆ ಗೊತ್ತೆ ಇದೆ. ‘ಸೀತಾರಾಮ ಕಲ್ಯಾಣ’ ಚಿತ್ರ ಬಿಡುಗಡೆಯಾಗುವ ಮೂಲಕ ರಚಿತಾ ಅವರ ಈ ವರ್ಷ ಸಿನಿ ಅಕೌಂಟ್ ಆರಂಭವಾಗುತ್ತಿದೆ. ಆ ನಂತರ ‘ನಟಸಾರ್ವಭೌಮ’. ಅದರ ಬೆನ್ನಲ್ಲೇ ‘ಐ ಲವ್ ಯು’ ಚಿತ್ರಗಳು ಬಿಡುಗಡೆಯಾಗಲಿದೆ.
ಸಿನಿಮಾ ಬಿಡುಗಡೆಗೆ ಮೊದಲು ಸಿನಿಮಾ ತಂಡಗಳು ದೊಡ್ಡ ಕಾರ್ಯಕ್ರಮ ಮಾಡಿ, ಸಿನಿಮಾ ಪ್ರಚಾರ ಕೈಗೊಳ್ಳುವುದು ವಾಡಿಕೆ. ಈಗ ರಚಿತಾ ನಾಯಕಿಯಾಗಿರುವ ಎರಡು ಚಿತ್ರಗಳು ಒಂದೇ ದಿನ ಕಾರ್ಯಕ್ರಮ ಆಯೋಜಿಸಿದೆ. ಈ ಮೂಲಕ ರಚಿತಾಗೆ ಯಾವ ಕಾರ್ಯಕ್ರಮಕ್ಕೆ ಹೋಗೋದು ಎಂಬ ಗೊಂದಲವೂ ಉಂಟಾಗಿದೆ.
ನಿಮಗೆ ಗೊತ್ತಿರುವಂತೆ ಎ.ಹರ್ಷ ನಿರ್ದೇಶನದ, ನಿಖೀಲ್ ಕುಮಾರ್ ನಾಯಕರಾಗಿರುವ ‘ಸೀತಾರಾಮ ಕಲ್ಯಾಣ’ ಚಿತ್ರ ಇದೇ ಜ.25 ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಗೆ ಮೊದಲು ಚಿತ್ರತಂಡ ಜನವರಿ 19 ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಇವೆಂಟ್ ಮಾಡುತ್ತಿದೆ. ಈ ಮೂಲಕ ಆ ಭಾಗದ ಜನರ ಮುಂದೆ ಚಿತ್ರತಂಡ ತಮ್ಮ ಸಿನಿ ಮಾಹಿತಿ ಹಂಚಿಕೊಳ್ಳಲಿದೆ.
ಇತ್ತ ಕಡೆ ಆರ್.ಚಂದ್ರು ನಿರ್ಮಾಣ, ನಿರ್ದೇಶನದ, ಉಪೇಂದ್ರ ನಾಯಕರಾಗಿರುವ ‘ಐ ಲವ್ ಯು’ ಚಿತ್ರದ ಆಡಿಯೋ ಬಿಡುಗಡೆ ಜನವರಿ 19 ರಂದು ದಾವಣಗೆರೆಯಲ್ಲಿ ನಡೆಯಲಿದೆ. ಈ ಎರಡೂ ಚಿತ್ರಗಳಿಗೂ ರಚಿತಾ ರಾಮ್ ನಾಯಕಿ. ಸಹಜವಾಗಿಯೇ ರಚಿತಾ ಅಭಿಮಾನಿಗಳಲ್ಲಿ ಯಾವ ಕಾರ್ಯಕ್ರಮಕ್ಕೆ ರಚಿತಾ ಹೋಗುತ್ತಾರೆಂಬ ಕುತೂಹಲವಿದೆ. ಏಕೆಂದರೆ ಎರಡು ಕೂಡಾ ರಚಿತಾ ರಾಮ್ ಸಿನಿಮಾಗಳೆ.
ಈ ಬಗ್ಗೆ ರಚಿತಾ ರಾಮ್ ಅವರನ್ನು ಕೇಳಿದರೆ, ಮೊದಲು ಯಾವ ಸಿನಿಮಾ ಬಿಡುಗಡೆಯಾಗುತ್ತದೆಯೋ ಆ ಸಿನಿಮಾಕ್ಕೆ ನನ್ನ ಮೊದಲ ಆದ್ಯತೆ ಎಂಬ ಉತ್ತರ ಬರುತ್ತದೆ. ಈ ಬಗ್ಗೆ ಮಾತನಾಡುವ ರಚಿತಾ, ‘ನಾನು ಕೂಡಾ ಸಾಕಷ್ಟು ಗೊಂದಲದಲ್ಲಿದ್ದೇನೆ.
ಆದರೆ, ಪ್ರೊಫೆಶನಲ್ ಆಗಿ ನಾನು ಯೋಚಿಸಿದರೆ ಯಾವ ಸಿನಿಮಾ ಮೊದಲು ಬಿಡುಗಡೆಯಾಗುತ್ತದೋ ಆ ಸಿನಿಮಾಕ್ಕೆ ಮೊದಲ ಆದ್ಯತೆ ಕೊಡಬೇಕು. ಆ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ. ಆ ನಿಟ್ಟಿನಲ್ಲಿ ಹೇಳುವುದಾದರೆ ‘ಸೀತಾರಾಮ ಕಲ್ಯಾಣ’ ಮೊದಲು ಬಿಡುಗಡೆಯಾಗುತ್ತಿದೆ. ಜ.25 ರಂದು ಚಿತ್ರ ತೆರೆಗೆ ಬರುತ್ತದೆ. ಬಿಡುಗಡೆಯ ಹಂತದಲ್ಲಿರುವ ಚಿತ್ರವನ್ನು ಪ್ರಮೋಶನ್ ಮಾಡಬೇಕು. ಆ ನಂತರ ‘ನಟಸಾರ್ವಭೌಮ’ ಚಿತ್ರ ಬಿಡುಗಡೆಯಾಗಲಿದೆ.
ಆ ಚಿತ್ರ ತೆರೆಕಂಡ ನಂತರ ‘ಐ ಲವ್ ಯು’ ಬರಲಿದೆ. ಹೀಗಾಗಿ, ಮೊದಲು ಬಿಡುಗಡೆಯಾಗುವ ಚಿತ್ರಕ್ಕೆ ಮೊದಲ ಆದ್ಯತೆ ಕೊಡಬೇಕೆಂದಿದ್ದೇನೆ. ಎಲ್ಲವೂ ನನ್ನ ಸಿನಿಮಾಗಳೇ. ನಾನು ಖುಷಿಯಿಂದ ಒಪ್ಪಿಕೊಂಡ ಸಿನಿಮಾಗಳು. ಅವುಗಳ ಪ್ರಚಾರದಲ್ಲಿ, ಸಮಯಕ್ಕೆ ಸರಿಯಾಗಿ ಭಾಗಿಯಾಗುತ್ತೇನೆ’ ಎನ್ನುವುದು ರಚಿತಾ ರಾಮ್ ಮಾತು.