ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ 1.80 ಕೋಟಿ ವಂಚನೆ: ನಿರ್ಮಾಪಕ ಸೆರೆ
Team Udayavani, Jul 16, 2022, 12:58 PM IST
ಬೆಂಗಳೂರು: ಮುಂದಿನ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ 1.80 ಕೋಟಿ ರೂ. ವಂಚಿಸಿದ್ದ ಆರೋಪದ ಮೇಲೆ ನಟ, ನಿರ್ಮಾಪಕ ವಿರೇಂದ್ರಬಾಬುನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಮೂಲದ ಬಸವರಾಜ್ ಬಿ.ಗೋಸಾಲ್ ಕೊಟ್ಟ ದೂರಿನ ಆಧಾರದ ಮೇಲೆ ವೀರೇಂದ್ರ ಬಾಬು ಸೇರಿ 7 ಮಂದಿ ವಿರುದ್ಧ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ವೀರೇಂದ್ರ ಬಾಬು ಹಾಗೂ ಇತರರು ಆರ್ಯನ್ ಇನ್ಫೋಟೆಕ್ ಸಂಸ್ಥೆ, ವಿ-ಕೇರ್ ಆನ್ಲೈನ್ ಲರ್ನಿಂಗ್ ಆ್ಯಪ್, ಎಎನ್ಎನ್ ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ರಕ್ಷಣಾ ಪಡೆ ಎಂಬ ಸಂಘ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಕರ್ನಾಟಕ ರಕ್ಷಣಾ ಪಡೆ ಮೂಲಕ ಹಲವಾರು ಜನರಿಗೆ ತಾಲೂಕು ಮಟ್ಟದಲ್ಲಿ ಸದಸ್ಯ ಸ್ಥಾನ ನೀಡುವುದಾಗಿ, ಕಾರ್ಯದರ್ಶಿ, ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಸಂಚಾಲಕ ಹುದ್ದೆ ನೀಡುವುದಾಗಿ ಲಕ್ಷಾಂತರ ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿದ್ದಾರೆ. ಆದರೆ, ಯಾವುದೇ ಸ್ಥಾನ-ಮಾನ ನೀಡಲಿಲ್ಲ.
ರಾಷ್ಟ್ರೀಯ ಜನ ಹಿತ ಪಕ್ಷ ಸ್ಥಾಪಿಸಿಕೊಂಡು ಸದಸ್ಯರಿಗೆ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಟಿಕೆಟ್ ಕೊಡುವುದಾಗಿ ನಂಬಿಸಿ ಹಣ ಸಂಗ್ರಹಿಸಿದ್ದಾರೆ. ಕೋರ್ ಕಮಿಟಿ ಮಾಡಿ ಸದಸ್ಯರಿಗೆ ಪ್ರತಿ ತಿಂಗಳು 10 ಸಾವಿರ ರೂ. ವೇತನ ಕೊಡುವುದಾಗಿ ಸುಳ್ಳು ಭರವಸೆ ಕೊಟ್ಟಿದ್ದಾರೆ.
ವೀರೇಂದ್ರ ಬಾಬು ಸ್ವಯಂ ಕೃಷಿ ಸಂಸ್ಥೆ ಮೂಲಕ ಜೂಮ್ ಮೀಟಿಂಗ್ನಲ್ಲಿ ಪ್ರತಿದಿನ ಜನರಿಗೆ ಪ್ರೋತ್ಸಾಹಿಸಿ ತಮ್ಮ ವಯಕ್ತಿಕ ಹಾಗೂ ಸಂಸ್ಥೆಯ ಖಾತೆಗಳಿಗೆ ಹಣ ಹಾಕಿಸಿಕೊಳ್ಳುತ್ತಿದ್ದರು. ನನ್ನಿಂದ ಹಾಗೂ ನನ್ನ ಸ್ನೇಹಿತರಿಂದ 1.80 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಬಸವರಾಜ್ ಆರೋಪಿಸಿದ್ದಾರೆ.