ಸಾರ್ವಜನಿಕರಿಗೆ ಚೆಂದದ ಹಾಡು ಕೇಳುವ ಸುವರ್ಣಾವಕಾಶ!
Team Udayavani, Nov 22, 2019, 7:30 PM IST
ಕನ್ನಡ ಚಿತ್ರರಂಗದ ಪಾಲಿಗಿದು ಹೊಸ ಅಲೆಯ ಸಿನಿಮಾಗಳ ಜಮಾನ. ಹೊಸಬರ ತಂಡಗಳು ಹೊಸತನ ಕಥೆಗಳೊಂದಿಗೆ ಬರುತ್ತಿರೋದರಿಂದ ಇಂತಾ ಸಿನಿಮಾಗಳತ್ತ ಪ್ರೇಕ್ಷಕರೂ ಕೂಡಾ ಚಿತ್ತ ಹರಿಸುತ್ತಿದ್ದಾರೆ. ಈ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವಂತಿರೋ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೀಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾಥ್ ಕೊಟ್ಟಿದ್ದಾರೆ. ಇದಕ್ಕಾಗಿ ಪುನೀತ್ ಒಂದು ಹಾಡನ್ನು ಹಾಡಿದ್ದಾರೆ. ಅದರ ವೀಡಿಯೋ ಸಾಂಗ್ ಒಂದು ಬಿಡುಗಡೆಯಾಗಿ ಇದೀಗ ಸಖತ್ ವೈರಲ್ ಆಗಿ ಬಿಟ್ಟಿದೆ.
ಅದು ಪಡ್ಡೆ ಹುಡುಗರ ಪ್ರೇಮ ಬಾಧೆಯೊಂದಿಗೆ ಬದುಕಿನ ವಾಸ್ತವಾಂಶಗಳನ್ನು ಮುಖಾಮುಖಿಯಾಗಿಸಿದಂತಿರೋ ಹಾಡು. ಏನು ಸ್ವಾಮಿ ಮಾಡೋಣ ಆಗಿ ಹೋಯ್ತು ಅಧ್ವಾನ ಹಾಕಿಬಿಟ್ಲು ಕಿಟಕಿ ಬಾಗ್ಲನ್ನ ಎಂಬ ಈ ಹಾಡು ಪುನಿತ್ ಅವರ ಮಧುರ ಕಂಠದಲ್ಲಿ ಮೂಡಿ ಬಂದಿದೆ. ಮಿದುನ್ ಮುಕುಂದನ್ ಸಂಗೀತ ಸಂಯೋಜನೆಯ ಈ ಹಾಡಿಗೆ ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಒದಗಿಸಿದ್ದಾರೆ. ನಾಗೇಂದ್ರ ಪ್ರಸಾದ್ ಈಗಾಗಲೇ ಎಲ್ಲ ವೆರೈಟಿ ಸಾಂಗುಗಳನ್ನು ಬರೆಯೋದರಲ್ಲಿಯೂ ಸೈ ಅನ್ನಿಸಿಕೊಂಡಿರುವ ಗೀತರಚನೆಕಾರ. ಅವರು ಈ ಹಾಡನ್ನು ಕೂಡಾ ಅಷ್ಟೇ ಮಜವಾಗಿ ಬರೆದಿದ್ದಾರೆ.
ಪ್ರೇಮ ವೈಫಲ್ಯ, ಮುನಿಸುಗಳೆಲ್ಲವೂ ಪಡ್ಡೆ ಹುಡುಗರನ್ನು ಇನ್ನಿಲ್ಲದಂತೆ ಕಾಡುತ್ತವೆ. ಅದಕ್ಕೆ ಮುಲಾಮು ನೀವುವಂಥಾ ಯಾವುದೇ ಹಾಡುಗಳು ಬಂದರೂ ಅದು ಅವರ ಪಾಲಿಗೆ ರಾಷ್ಟ್ರಗೀತೆಯಂತಾಗಿ ಫೇಮಸ್ ಆಗೋದು ಗ್ಯಾರೆಂಟಿ. ಈ ಹಾಡು ಕೂಡಾ ಅದರಂತೆಯೇ ಮೂಡಿ ಬಂದಿದೆ. ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಈಗಾಗಲೇ ನಾನಾ ಥರದಲ್ಲಿ ಪ್ರೆಕ್ಷಕರನ್ನು ಆವರಿಸಿಕೊಂಡಿದೆ. ಹೊಸತನದ ಛಾಯೆಯ ಮೂಲಕವೇ ಗೆಲ್ಲುವ ಭರವಸೆಯನ್ನೂ ಮೂಡಿಸಿದೆ. ಈಗ ಬಂದಿರೋ ಪುನೀತ್ ಹಾಡಿರೋ ಹಾಡು ಅದನ್ನು ಮತ್ತಷ್ಟು ಮಿರುಗಿಸುವಂತೆ ಮೂಡಿ ಬಂದಿದೆ.