`ಚಾಲಿಪೋಲಿಲು’ ಸೃಷ್ಟಿಕರ್ತನ ಸವರ್ಣದೀರ್ಘ ಸಂಧಿ!
Team Udayavani, Oct 16, 2019, 1:25 PM IST
ತುಳುನಾಡಿನಿಂದ ಬಂದು ಕನ್ನಡ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ದೊಡ್ಡ ಮಟ್ಟದಲ್ಲಿಯೇ ಹೆಸರು ಮಾಡಿದವರು ಸಾಕಷ್ಟಿದ್ದಾರೆ. ಇದೀಗ ತುಳು ಚಿತ್ರ ಚಾಲಿಪೋಲಿಲು ಮೂಲಕ ದಾಖಲೆಯನ್ನೇ ಬರೆದಿದ್ದ ನಿರ್ದೇಶಕ ವೀರೇಂದ್ರ ಶೆಟ್ಟಿ ಕೂಡಾ ಸವರ್ಣದೀರ್ಘ ಸಂಧಿ ಎಂಬ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿದ್ದಾರೆ. ವಿಶೇಷವೆಂದರೆ ನಿರ್ದೇಶನದ ಜೊತೆಗೆ ನಾಯಕರಾಗಿಯೂ ಅವತರಿಸಿರೋ ಅವರ ಎಂಟ್ರಿ ಭರ್ಜರಿಯಾಗಿಯೇ ಇದೆ!
ಮೂಲತಃ ಪತ್ರಕರ್ತರಾಗಿದ್ದ ವೀರೇಂದ್ರ ಶೆಟ್ಟಿ ಹೊಸತೇನನ್ನೋ ಸೃಷ್ಟಿಸುವ ಹಂಬಲದಿಂದಲೇ ಚಿತ್ರರಂಗಕ್ಕೆ ಆಗಮಿಸಿದ್ದವರು. ಹಾಗೆ ಬಂದಿದ್ದ ಶೆಟ್ಟರು ನಿರ್ದೇಶನ ಮಾಡಿದ್ದ ಮೊದಲ ತುಳು ಚಿತ್ರ ಚಾಲಿಪೋಲಿಲು. ಇದು ಬಿಡುಗಡೆಯಾಗಿ ತುಳು ಚಿತ್ರರಂಗದಲ್ಲಿ ಹೊಸ ಶಖೆಯನ್ನೇ ಸೃಷ್ಟಿಸಿ ಬಿಟ್ಟಿತ್ತು. ಗಳಿಕೆ ಸೇರಿದಂತೆ ಎಲ್ಲದರಲ್ಲಿಯೂ ಚಾಲಿಪೋಲಿಲು ಸೃಷ್ಟಿಸಿದ್ದ ಹವಾ ಸಣ್ಣ ಮಟ್ಟದ್ದಲ್ಲ. ಅಂಥಾ ಅನುಭವವನ್ನಿಟ್ಟುಕೊಂಡೇ ವೀರೇಂದ್ರ ಶೆಟ್ಟಿ ನಟ, ನಿರ್ದೇಶಕ ಮತ್ತು ನಿರ್ಮಾಪಕನಾಗಿಯೂ ಆಗಮಿಸಿದ್ದಾರೆ.
ಸವರ್ಣದೀರ್ಘ ಸಂಧಿ ಎಂಬ ಶೀರ್ಷಿಕೆಯೇ ಎಲ್ಲರಲ್ಲೊಂದು ಬೆರಗು ಮೂಡಿಕೊಳ್ಳಲು ಕಾರಣವಾಗಿತ್ತು. ಆ ನಂತರದಲ್ಲಿ ಎರಡು ಟ್ರೇಲರ್ಗಳು ಬಂದ ಮೇಲಂತೂ ಈ ಸಿನಿಮಾ ಮೇಲೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರು ಆಕರ್ಷಿತರಾಗಿದ್ದರು. ಆ ಟ್ರೇಲರ್ಗಳು ಅಷ್ಟೊಂದು ಪ್ರಾಮಿಸಿಂಗ್ ಆಗಿದ್ದವು. ಇತ್ತೀಚೆಗಷ್ಟೇ ಹಾಡುಗಳೂ ಬಿಡುಗಡೆಗೊಂಡಿವೆ. ಒಂದಕ್ಕಿಂತ ಒಂದು ಮೋಹಕವಾಗಿರೋ ಆ ಹಾಡುಗಳೂ ಸಹ ಸವರ್ಣದೀರ್ಘ ಸಂಧಿಯ ಆಕರ್ಷಣೆಯನ್ನು ಹೆಚ್ಚಿಸಿವೆ. ಲೂಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್ ಕುಮಾರ್, ಮನೋಮೂರ್ತಿ ಮತ್ತು ವೀರೇಂದ್ರ ಶೆಟ್ಟಿ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಿರುವ ಈ ಚಿತ್ರದ ಅಸಲೀ ಮಜಾ ಇದೇ ಹದಿನೆಂಟರಂದು ನಿಮ್ಮೆಲ್ಲರ ಮುಂದೆ ಅನಾವರಣಗೊಳ್ಳಲಿದೆ.