ಸಂತು ನಿರ್ದೇಶನದಲ್ಲಿ ಶರಣ್
Team Udayavani, Dec 4, 2017, 11:07 AM IST
ನಿರ್ದೇಶಕ ಹರಿ ಸಂತೋಷ್ “ಕಾಲೇಜ್ ಕುಮಾರ್’ ಚಿತ್ರದ ಬಳಿಕ ಯಾವ ಚಿತ್ರಕ್ಕೆ ಕೈ ಹಾಕುತ್ತಾರೆ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಅವರೀಗ ಶರಣ್ ಅವರಿಗೊಂದು ಚಿತ್ರ ಮಾಡುತ್ತಿರುವುದು ಪಕ್ಕಾ ಆಗಿದೆ. ಈ ಹಿಂದೆ ಹರಿ ಸಂತೋಷ್, ರಾಜವರ್ಧನ್ ಅವರಿಗೊಂದು ಚಿತ್ರ ಮಾಡುತ್ತಾರೆ ಎನ್ನಲಾಗಿತ್ತು. ಆ ಚಿತ್ರ ಸೆಟ್ಟೇರುವುದು ನಿಜ. ಆದರೆ, ಅದಕ್ಕೂ ಮೊದಲು ಶರಣ್ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಸಂತು.
ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಇನ್ನು, ಈ ಚಿತ್ರಕ್ಕೆ ತರುಣ್ ಶಿವಪ್ಪ ನಿರ್ಮಾಪಕರು. “ರೋಸ್’, “ಲೀಡರ್’ ನಿರ್ಮಿಸಿದ್ದ ತರುಣ್ ಶಿವಪ್ಪ ಅವರಿಗೆ ಇದು ಮೂರನೇ ನಿರ್ಮಾಣದ ಚಿತ್ರ. ಈ ಚಿತ್ರಕ್ಕೆ ತರುಣ್ ಸುಧೀರ್ ಅವರು ಕಥೆ ಬರೆದಿದ್ದಾರೆ. ಹರಿ ಸಂತೋಷ್ ಆ ಚಿತ್ರದ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯಕ್ಕೆ ಶರಣ್ ಹೀರೋ ಅನ್ನೋದಷ್ಟೇ ಪಕ್ಕಾ. ಉಳಿದಂತೆ ನಾಯಕಿ, ಕಲಾವಿದರು, ತಂತ್ರಜ್ಞರ ಮಾಹಿತಿ ಸದ್ಯಕ್ಕಿಲ್ಲ.
ಈ ಹಿಂದೆ ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನದಲ್ಲಿ ಶರಣ್ ಅಭಿನಯಿಸುತ್ತಿದ್ದು, ಆ ಚಿತ್ರಕ್ಕೂ ತರುಣ್ ಶಿವಪ್ಪ ಅವರೇ ನಿರ್ಮಾಪಕರು, ತರುಣ್ ಸುಧೀರ್ ಅವರು ಕಥೆ ಬರೆಯುತ್ತಿದ್ದಾರೆ ಅಂತ ಸುದ್ದಿಯಾಗಿತ್ತು. ಹಾಗಾದರೆ, ಈಗ ಎಲ್ಲವೂ ಅದೇ ಇದೆ. ಆದರೆ, ಮಂಜುಸ್ವರಾಜ್ ಮಾತ್ರ ಬದಲಾಗಿದ್ದಾರೆ. ಹರಿಸಂತೋಷ್ ಅವರೇನಾದರೂ ಮಂಜುಸ್ವರಾಜ್ ಅವರ ಜಾಗಕ್ಕೆ ಬಂದಿದ್ದಾರಾ?
ಅಥವಾ ಮಂಜುಸ್ವರಾಜ್ಗೆ ಇನ್ನೊಂದು ಸಿನಿಮಾವನ್ನು ತರುಣ್ ಶಿವಪ್ಪ ಮಾಡ್ತಾರಾ ಸದ್ಯಕ್ಕೆ ಆ ಬಗ್ಗೆ ಮಾಹಿತಿ ಇಲ್ಲ. ಆದರೆ, ತರುಣ್ ಸುಧೀರ್ ಕಥೆ ಬರೆದಿದ್ದು, ಶರಣ್ ಅಭಿನಯಿಸುತ್ತಿದ್ದಾರೆ. ಹರಿ ಸಂತೋಷ್ ನಿರ್ದೇಶಿಸುತ್ತಿದ್ದಾರೆ. ತರುಣ್ ಶಿವಪ್ಪ ನಿರ್ಮಾಣ ಮಾಡುತ್ತಿದ್ದಾರೆಂಬುದಷ್ಟೇ ಈ ಹೊತ್ತಿನ ಸುದ್ದಿ. ಇದೊಂದು ಕಾಮಿಡಿ ಜಾನರ್ನ ಸಿನಿಮಾ ಆಗಿದ್ದು, ಜನವರಿ 15 ರ ಬಳಿಕ ಚಿತ್ರಕ್ಕೆ ಚಾಲನೆ ಸಿಗಲಿದೆ.