ಬುದ್ಧಿವಂತನಿಗೆ ಶ್ರೀನಗರ ಕಿಟ್ಟಿ ವಿಲನ್!
Team Udayavani, Feb 5, 2021, 4:29 PM IST
ಉಪೇಂದ್ರ ನಾಯಕರಾಗಿರುವ “ಬುದ್ಧಿವಂತ-2′ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಈಗ ಚಿತ್ರತಂಡದಿಂದ ಹೊಸ ಅಪ್ಡೇಟ್ ಬಂದಿದೆ. ಅದು ಚಿತ್ರದ ವಿಲನ್ ಕುರಿತಾಗಿ. ಹೌದು, “ಬುದ್ಧಿವಂತ-2′ ಚಿತ್ರದಲ್ಲಿ ವಿಲನ್ ಆಗಿ ಯಾರು ನಟಿಸಿದ್ದಾರೆ ಎಂಬ ಕುತೂಹಲವಿತ್ತು. ಈಗ ಆ ಕುತೂಹಲಕ್ಕೆ ತೆರೆಬಿದ್ದಿದ್ದು, ಶ್ರೀನಗರ ಕಿಟ್ಟಿ ನಟಿಸಿದ್ದಾರೆ.
ಚಿತ್ರದಲ್ಲಿ ಅವರು ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಈಗಾಗಲೇ ಕಿಟ್ಟಿ “ಅವತಾರ್ ಪುರುಷ’ ಚಿತ್ರದಲ್ಲೂ ಪ್ರಮುಖ ಪಾತ್ರ ಮಾಡಿದ್ದಾರೆ.
ಇನ್ನು, ಉಪೇಂದ್ರ ಈ ಹಿಂದೆ “ಬುದ್ಧಿವಂತ’ ಸಿನಿಮಾ ಮಾಡಿದ್ದು, ಆ ಚಿತ್ರ ಹಿಟ್ ಆಗಿತ್ತು. ಈಗ ಚಿತ್ರತಂಡ “ಬುದ್ಧಿವಂತ-2′ ಮಾಡುತ್ತಿದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ನಡಿ ಟಿ.ಆರ್.ಚಂದ್ರಶೇಖರ್ ನಿರ್ಮಿಸಿರುವ ಈ ಚಿತ್ರವನ್ನು ಜಯರಾಂ ನಿರ್ದೇಶಿಸಿದ್ದಾರೆ. ಸೋನಾಲ್ ಮೊಂತೆರೋ ಈ ಚಿತ್ರದ ನಾಯಕಿ. ಶೀಘ್ರದಲ್ಲಿಯೇ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.