ಚಾಮುಂಡಿ ಸನ್ನಿಧಿಯಲ್ಲಿ ಮದಗಜ
Team Udayavani, Jan 17, 2019, 10:42 AM IST
ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರದ ಸ್ಕ್ರಿಪ್ಟ್ ಪೂಜೆ ವಿಶೇಷವಾಗಿ ನೆರವೇರಿದೆ. ಸಂಕ್ರಾಂತಿ ಹಬ್ಬದ ದಿನದಂದು ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಿತ್ರದ ಸ್ಕ್ರಿಪ್ಟ್ ಪೂಜೆ ಹಾಗು ಚಿತ್ರದ ಗೀತೆಯೊಂದರ ಪಲ್ಲವಿ ರಚಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ನಟ ಶ್ರೀಮುರಳಿ, ನಿರ್ದೇಶಕ ಎಸ್. ಮಹೇಶ್ಕುಮಾರ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ಗೀತರಚನೆಕಾರ ಚೇತನ್ಕುಮಾರ್ ಅವರು ಈ ಸಂದರ್ಭದಲ್ಲಿ ದೇವಿಗೆ ಪೂಜೆ ಸಲ್ಲಿಸಿ, ಚಿತ್ರಕ್ಕೆ ಚಾಲನೆ ನೀಡಿದರು.
ಮುಂಜಾನೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಿ ಸನ್ನಿಧಿಯಲ್ಲೇ ಗೀತರಚನೆಕಾರ ಚೇತನ್ಕುಮಾರ್ ಅವರು ಚಿತ್ರದ ಹಾಡಿನ ಪಲ್ಲವಿ ಬರೆಯುವ ಮೂಲಕ ಹಾಡಿಗೆ ಚಾಲನೆ ಕೊಟ್ಟರು. ‘ಶತ್ರು ಧಮನವನ್ನು ಮಾಡೋ ಸೈನ್ಯವನೇ ಇಳಿಸೋ ವೈರತ್ವ ದರ್ಪ ಹೊರೆ, ಸೂರ್ಯ ಇರೋವರೆಗೂ ಭೂಮಿ ನೆನೆಯಲಿ, ಮೊಳಗಲಿ ಕೀರ್ತಿ ಜಯಿಸೋ ದೊರೆ, ಗಜಗಳ ಪಳಗಿಸೋ ನಿನ್ನಯ ಭುಜಬಲ, ಮದವನ್ನು ಕರಗಿಸೋ ನಿನ್ನಯ ಮನೋಬಲ, ಛಲದಂಕ ಮಲ್ಲ ನೀನೇ ಮದಗಜ…’ ಎಂಬ ಚಿತ್ರದ ಶೀರ್ಷಿಕೆ ಗೀತೆ ಹಾಡು ನಾಯಕನ ಪರಿಚಯಿಸುವ ಗೀತೆಯ ಪಲ್ಲವಿಯನ್ನು ಚೇತನ್ಕುಮಾರ್ ಬರೆದಿದ್ದು ವಿಶೇಷ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತವಿದೆ.