ಕೆಜಿಎಫ್ಗೆ ತಮನ್ನಾ
Team Udayavani, Aug 6, 2018, 5:59 PM IST
“ಕೆಜಿಎಫ್’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ತಿಗೊಂಡು, ಇನ್ನೊಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಅದೂ ಮುಗಿದು ಬಿಟ್ಟರೆ, ಚಿತ್ರೀಕರಣ ಸಂಪೂರ್ಣವಾದಂತೆ. ಆದರೆ, ಆ ಹಾಡಿಗೆ ಯಾರನ್ನು ಕರೆತರಬೇಕು, ಯಾರಿಂದ ಕುಣಿಸಬೇಕು ಎಂದು ಚಿತ್ರತಂಡ ತಲೆ ಕೆಡಿಸಿಕೊಂಡಿತ್ತು. ಈಗ ಆ ಗೊಂದಲ ಬಗೆಹರಿದಿದ್ದು, ಯಶ್ ಜೊತೆಗೆ ಹೆಜ್ಜೆ ಹಾಕುವುದಕ್ಕೆ ಟಾಲಿವುಡ್ ನಟಿ ತಮನ್ನಾ ಭಾಟಿಯಾ ಬರುತ್ತಿದ್ದಾರೆ.
ಹೌದು, “ಕೆಜಿಎಫ್’ ಚಿತ್ರದಲ್ಲಿ ರೆಟ್ರೋ ಹಾಡಿನ ಚಿತ್ರೀಕರಣ ಬಾಕಿ ಇದ್ದು, ಆ ಹಾಡಿನಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಅದಕ್ಕೆ ಸರಿಯಾಗಿ ನಾಲ್ವರು ಜನಪ್ರಿಯ ನಟಿಯರ ಹೆಸರು ಕೇಳಿ ಬಂದಿತ್ತು. ತಮನ್ನಾ ಭಾಟಿಯಾ ಜೊತೆಗೆ ಕಾಜಲ್ ಅಗರ್ವಾಲ್, ಲಕ್ಷ್ಮೀ ರೈ ಮತ್ತು ನೂರಾ ಫತೇಹಿ ಹೆಸರು ಕೇಳಿಬಂದಿತ್ತು. ಈ ನಾಲ್ವರಲ್ಲಿ ತಮನ್ನಾ ಭಾಟಿಯಾ ಫೈನಲ್ ಆಗಿದ್ದು, ಸದ್ಯದಲ್ಲೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನಲ್ಲಿ ಇದೇ ವಾರ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಮೂರು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಈ ಹಾಡಿಗೆಂದೇ ವಿಶೇಷವಾದ ಸೆಟ್ ನಿರ್ಮಿಸಲಾಗುತ್ತಿದ್ದು, ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ, “ಪರೋಪಕಾರಿ’ ಚಿತ್ರಕ್ಕೆ ಎಲ್.ಆರ್. ಈಶ್ವರಿ ಅವರು ಹಾಡಿದ “ಜೋಕೆ ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು …’ ಹಾಡನ್ನು ಈ ಚಿತ್ರಕ್ಕಾಗಿ ರೀಮಿಕ್ಸ್ ಮಾಡಲಾಗುತ್ತಿದ್ದು, ಆ ಹಾಡಿಗೆ ತಮನ್ನಾ ಹೆಜ್ಜೆ ಹಾಕುತ್ತಿದ್ದಾರೆ.
ತಮನ್ನಾ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ ನಿಖಿಲ್ ಕುಮಾರ್ ಅಭಿನಯದ “ಜಾಗ್ವಾರ್’ ಚಿತ್ರದ ಐಟಂ ಡ್ಯಾನ್ಸ್ವೊಂದರಲ್ಲೂ ಕಾಣಿಸಿಕೊಂಡಿದ್ದರು. ಈಗ ಎರಡನೆಯ ಬಾರಿಗೆ ಕನ್ನಡ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. “ಕೆಜಿಎಫ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಬಹುತೇಕ ಮುಗಿದಿದ್ದು, ಸೆಪ್ಟೆಂಬರ್ ಕೊನೆಯ ಹೊತ್ತಿಗೆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಚಿಸುತ್ತಿದೆ.
“ಕೆಜಿಎಫ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ ಪ್ರಶಾಂತ್ ನೀಲ್. ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದು, ಮಿಕ್ಕಂತೆ ಅಚ್ಯುತ್ ಕುಮಾರ್, ವಸಿಷ್ಠ ಸಿಂಹ ಮುಂತಾದವರು ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಮತ್ತು ಭುವನ್ ಗೌಡ ಛಾಯಾಗ್ರಹಣವಿರುವ ಈ ಚಿತ್ರವನ್ನು ಹೊಂಬಾಳೆ ಪ್ರೊಡಕ್ಷನ್ಸ್ನಡಿ ವಿಜಯ್ಕುಮಾರ್ ಕಿರಗಂದೂರು ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್