“ರಾಜರಥ’ ಮೂಲಕ ಕನ್ನಡಕ್ಕೆ ತಮಿಳು ನಟ ಆರ್ಯ!
Team Udayavani, Aug 21, 2017, 12:07 PM IST
ತಮಿಳಿನ ಜನಪ್ರಿಯ ನಟ ಆರ್ಯ, ಇದೀಗ ಸ್ಯಾಂಡಲ್ವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. “ರಂಗಿತರಂಗ’ ಖ್ಯಾತಿಯ ಭಂಡಾರಿ ಸಹೋದರರ ಹೊಸ ಚಿತ್ರವಾದ “ರಾಜರಥ’ ಚಿತ್ರದಲ್ಲಿ ಅವರು ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಈಗಾಗಲೇ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ.
“ರಾಜರಥ’ ಚಿತ್ರ ಶುರುವಾಗಿ ಹಲವು ತಿಂಗಳುಗಳೇ ಆಗಿವೆ. ಇದೀಗ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಸದ್ಯದಲ್ಲೇ ಮುಕ್ತಾಯವಾಗಲಿದೆ. ಈ ಮಧ್ಯೆ ಆರ್ಯ ಬಂದು ಚಿತ್ರತಂಡನ್ನು ಸೇರಿಕೊಂಡಿದ್ದಾರೆ. ಈ ಚಿತ್ರದಲ್ಲಿ ಆರ್ಯ ಅವರ ಪಾತ್ರ ಏನು ಎಂಬುದನ್ನು ಚಿತ್ರತಂಡದವರು ಬಹಿರಂಗಗೊಳಿಸಿಲ್ಲ. ಆರ್ಯ ಅವರ ಪಾತ್ರವನ್ನು ರಹಸ್ಯವಾಗಿಟ್ಟಿರುವ ಚಿತ್ರತಂಡವು ಮುಂದಿನ ದಿನಗಳಲ್ಲಿ ಬಹಿರಂಗಗೊಳಿಸಲಿದೆಯಂತೆ.
“ರಾಜರಥ’ ಚಿತ್ರದಲ್ಲಿ ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ, ರವಿಶಂಕರ್ ಮುಂತಾದವರು ನಟಿಸುತ್ತಿದ್ದು, ಚಿತ್ರಕ್ಕೆ ಅನೂಪ್ ಭಂಡಾರಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುವುದರ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದರು. ಚಿತ್ರವನ್ನು ಅಜಯ್ ರೆಡ್ಡಿ, ಅಂಜು ವಲ್ಲಭ್, ವಿಷ್ಣು ಡಾಕಪ್ಪಗರಿ, ಸತೀಶ್ ಶಾಸ್ತ್ರೀ ಮುಂತಾದವರು ನಿರ್ಮಿಸುತ್ತಿದ್ದಾರೆ.