ಹುತಾತ್ಮ ಯೋಧ ಗುರು ಕುಟುಂಬಕ್ಕೆ “ಶಿವಸೈನ್ಯ’ ಸಹಾಯಹಸ್ತ
Team Udayavani, Feb 19, 2019, 5:30 AM IST
ನಟ ಶಿವರಾಜಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇಂದಿಗೆ ಮೂವತ್ತಮೂರು ವರ್ಷ. ಇನ್ನು ಶಿವರಾಜಕುಮಾರ್ ಚಿತ್ರರಂಗ ಪ್ರವೇಶಿಸಿದ ಫೆ. 19ನ್ನು ಪ್ರತಿವರ್ಷ ಅವರ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳ ಮೂಲಕ ಅದ್ಧೂರಿಯಾಗಿ ಆಚರಿಸುತ್ತ ಬಂದಿದ್ದಾರೆ. ಹಾಗೆಯೇ, ಈ ಫೆ. 19ನ್ನು ಕೂಡ ಶಿವಣ್ಣ ಅಭಿಮಾನಿಗಳ “ಶಿವಸೈನ್ಯ’ ತಂಡ ವಿಶೇಷವಾಗಿ ಆಚರಿಸಲು ಸುಮಾರು ಒಂದು ತಿಂಗಳ ಮುಂಚೆಯೇ ಸಾಕಷ್ಟು ಪ್ಲಾನ್ ಮಾಡಿಕೊಂಡಿತ್ತು.
ಆದರೆ, ಇತ್ತೀಚೆಗೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಸಿಆರ್ಪಿಎಫ್ ಯೋಧರ ಹತ್ಯೆಯ ದುಃಖದಲ್ಲಿ ದೇಶವೇ ಮುಳುಗಿರುವಾಗ, ಇಂಥ ಸಮಯದಲ್ಲಿ ತಮ್ಮ ಸಂಭ್ರಮಾಚರಣೆ ಮಾಡದಿರುವ ನಿರ್ಧರಿಸಿರುವ “ಶಿವಸೈನ್ಯ’ ತಂಡ, ಸಂಭ್ರಮಾಚರಣೆಯನ್ನು ಕೇವಲ ಸಾಮಾಜಿಕ ಜಾಲತಾಣಗಳಿಗಷ್ಟೇ ಮೀಸಲಿಟ್ಟು, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ದೇಣಿಗೆ ಸಂಗ್ರಹಿಸುವ ಮೂಲಕ ಆರ್ಥಿಕ ನೆರವು ನೀಡಲು ಮುಂದಾಗಿದೆ.
ಇನ್ನು ಇತ್ತೀಚೆಗಷ್ಟೇ “ರಾಂಧವ’ ಚಿತ್ರತಂಡ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಒಂದು ಲಕ್ಷ ರೂಗಳ ಆರ್ಥಿಕ ನೆರವನ್ನು ನೀಡಿತ್ತು. ನಟಿ ಸುಮಲತಾ ಅಂಬರೀಶ್ ಅರ್ಧ ಎಕರೆ ಭೂಮಿಯನ್ನು ಗುರು ಕುಟುಂಬಕ್ಕೆ ನೀಡುವುದಾಗಿ ಘೋಷಿಸಿದ್ದರು. ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ಗುರು ಕುಟುಂಬಕ್ಕೆ ಧನಸಹಾಯ ನೀಡಿದ್ದರು. ಕಳೆದವಾರ ತೆರೆಕಂಡಿದ್ದ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರತಂಡ ತನ್ನ ಒಂದು ದಿನದ ಗಳಿಕೆಯ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡುವುದಾಗಿ ಘೋಷಿಸಿತ್ತು.