ಅತ್ಮದ ಹೊಸ ಅನುಭವ!
Team Udayavani, Mar 24, 2018, 9:42 PM IST
ದೆವ್ವದ ಸಿನಿಮಾಗಳೆಂದರೆ, ಅಲ್ಲಿ ಸಡನ್ ಆಗಿ ವಿರೂಪಗೊಂಡ ದೆವ್ವವೊಂದು ಎದುರಾಗುತ್ತೆ, ಭಯಾನಕವಾಗಿ ಹೆದರಿಸುತ್ತೆ, ಜೋರಾಗಿ ಅರಚುತ್ತೆ, ಬೆಚ್ಚಿ ಬೀಳಿಸುತ್ತೆ. ಸಾಮಾನ್ಯವಾಗಿ ದ್ವೇಷ ಕಟ್ಟಿಕೊಂಡು ಸೇಡು ತೀರಿಸಿಕೊಳ್ಳುವ ದೆವ್ವಗಳ ಆರ್ಭಟವೇ ಹೆಚ್ಚು. ಕೆಲವು ಹೆದರಿಸೋ ದೆವ್ವ, ಇನ್ನೂ ಕೆಲವು ಹೆದರೋ ದೆವ್ವ, ಕಾಮಿಡಿ ದೆವ್ವ, ಅಳುವ ದೆವ್ವ, ಅಳಿಸೋ ದೆವ್ವಗಳ ಕಥೆಗಳದ್ದೇ ಕಾರುಬಾರು! ಆದರೆ, “ಅತೃಪ್ತ’ದಲ್ಲಿರೋ ದೆವ್ವದ “ಅಭಿರುಚಿ’ಯೇ ಬೇರೆ!! ಇಲ್ಲಿರೋ ದೆವ್ವ ಬೆಚ್ಚಿ ಬೀಳಿಸೋದಿಲ್ಲ.
ನೋಡುಗರ ಕಣ್ಣಿಗೂ ಕಾಣಿಸೋದಿಲ್ಲ. ಆದರೆ, ಅದೊಂದು ರೀತಿಯ “ಅನುಭವ’ದ ದೆವ್ವ. ವಿಕೃತ ಮನಸ್ಥಿತಿಯ ಆತ್ಮವೊಂದು “ಅನುಭವಿ’ಸಲು ಹೋರಾಡುವ ಪ್ರಯತ್ನದ ರೋಚಕತೆಯನ್ನು ನಿರ್ದೇಶಕರಿಲ್ಲಿ ಮಜವಾಗಿ ತೋರಿಸಿದ್ದಾರೆ. ಇಲ್ಲಿ ನಿರ್ದೇಶಕರು ತೋರಿಸಿದ ಮಜ ಎನ್ನುವುದಕ್ಕಿಂತ ಆ “ಮಜ’ ಅನುಭವಿಸಲು ಹೋರಾಟ ನಡೆಸುವ ಆತ್ಮದ ಪರಿಕಲ್ಪನೆಯನ್ನು ಹೊಸದಾಗಿ ಕಟ್ಟಿಕೊಟ್ಟಿದ್ದಾರೆ. ಅದು ನೋಡುಗರಿಗೆ ಒಂದಷ್ಟು ಖುಷಿಕೊಡುತ್ತದೆ. ಒಂದು ದೆವ್ವ ಸೇಡು ತೀರಿಸಿಕೊಳ್ಳುವುದು ಓಕೆ, ಅನುಭವಿಸುವ ವಿಷಯ ಯಾಕೆ ಎಂಬ ಪ್ರಶ್ನೆಗೆ, “ಅತೃಪ್ತ’ ನೋಡಿದರೆ ಆ “ಅನುಭವ’ದ ಉತ್ತರ ಸಿಗುತ್ತೆ.
ಸಿಂಪಲ್ ಕಥೆಯನ್ನು ಕುತೂಹಲಕಾರಿಯಾಗಿ ನಿರೂಪಿಸಲಾಗಿದೆಯಾದರೂ, ಮೊದಲರ್ಧ ನೋಡುಗರಿಗೆ ಒಂದಷ್ಟು ತಾಳ್ಮೆಗೆಡಿಸುವುದು ಸುಳ್ಳಲ್ಲ. ಆದರೆ, ದ್ವಿತಿಯಾರ್ಧಕ್ಕೂ ಮುನ್ನ, ಕಥೆಗೆ ಸಿಗುವ ಟ್ವಿಸ್ಟು ನೋಡುಗರಲ್ಲಿ ಮತ್ತಷ್ಟು ಕುತೂಹಲಕ್ಕೀಡು ಮಾಡುತ್ತ ಹೋಗುತ್ತದೆ. ಎಲ್ಲಾ ದೆವ್ವದ ಚಿತ್ರಗಳಲ್ಲೂ ಹಿನ್ನೆಲೆ ಸಂಗೀತಕ್ಕೆ ಪ್ರಾಶಸ್ತ್ಯ ಇದ್ದೇ ಇರುತ್ತೆ. ಇಲ್ಲಿ ಕೊಂಚ ಜಾಸ್ತಿಯೇ ಇದೆ. ಹಾಗಾಗಿ, ನೋಡುವ ಕೆಲ ಮನಸ್ಸುಗಳಿಗೆ “ತೃಪ್ತ’ ಭಾವಕ್ಕೇನೂ ಕೊರತೆ ಇಲ್ಲ. ದೆವ್ವದ ಕಥೆಗಳಿಗೆ ಪಾಳುಬಿದ್ದ ಮನೆ, ಕಾಡು, ಇತ್ಯಾದಿ ಭಯಾನಕ ತಾಣಗಳೇ ಬೇಕಿಲ್ಲ ಎಂಬುದನ್ನು ಇಲ್ಲಿ ತೋರಿಸಿರುವುದು ವಿಶೇಷ. ಒಂದೇ ಫ್ಲ್ಯಾಟ್ನಲ್ಲಿ ನಡೆಯುವ ಕಥೆಯಲ್ಲಿ ನಿರ್ದೇಶಕರು ಅಲ್ಲಲ್ಲಿ, ಬೆಚ್ಚಿಬೀಳಿಸುವ ಪ್ರಯತ್ನ ಮಾಡದಿದ್ದರೂ ಕೊನೆಯವರೆಗೂ ಕುತೂಹಲ ಕಾಯ್ದಿರಿಸಿಕೊಂಡು ಬಂದಿದ್ದಾರೆ.
ಅದೇ ಚಿತ್ರದ ಪ್ಲಸ್ಸು. ಹಾಗಂತ, ಇಲ್ಲಿರುವ ದೆವ್ವ ಜೋರಾಗಿ ಚೀರುವುದಿಲ್ಲ, ಹಾರಾಡುವುದೂ ಇಲ್ಲ. ಯಾವಾಗ, ತನಗೆ ಸಿಗದಿದ್ದದ್ದು ಕೈ ತಪ್ಪುತ್ತೆ ಅಂತ ಗೊತ್ತಾದಾಗ ಮಾತ್ರ ತನ್ನ ಆರ್ಭಟವನ್ನು ಒಂದಷ್ಟು ಜೋರು ಮಾಡುತ್ತೆ. ಯಾಕೆ ಹಾಗೆ ಮಾಡುತ್ತೆ ಎಂಬ ಕುತೂಹಲವಿದ್ದರೆ, ಅತೃಪ್ತ ಆತ್ಮದ ಒಡನಾಟವನ್ನೊಮ್ಮೆ ಅನುಭವಿಸಿ ಬರಬಹುದು. ಜಾನಕಿ ಮತ್ತು ಆಕಾಶ್ ಅವರದು ಆರು ವರ್ಷಗಳ ಅನನ್ಯ ಪ್ರೀತಿ. ಮದುವೆ ಆದ ಎರಡೇ ವಾರದಲ್ಲಿ ಆಕಾಶ್ ಕೊಲೆಯಾಗಿರುತ್ತೆ. ಹೆಂಡತಿಯೇ ಕೊಲೆಗಾತಿ ಎಂಬ ಕಾರಣಕ್ಕೆ ಅವಳನ್ನು ಪೊಲೀಸರು ತನಿಖೆಗೆ ಕರೆತರುತ್ತಾರೆ. ಕೊಲೆ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ, ಪ್ಲ್ರಾಶ್ಬ್ಯಾಕ್ ಶುರುವಾಗುತ್ತೆ. ಆಗಷ್ಟೇ ಮದುವೆಯಾದ ಆ ಜೋಡಿ, ಒಂದು ಫ್ಲ್ಯಾಟ್ಗೆ ಹೋಗುತ್ತೆ. ಆ ಮನೆಯಲ್ಲೊಂದು ಅತ್ಮದ ವಾಸ. ಇನ್ನೇನು ಹನಿಮೂನ್ಗೆ ಹೊರಡುವ ಖುಷಿಯಲ್ಲಿರುವ ಜೋಡಿಗೆ ವಿಚಿತ್ರ ಘಟನೆಗಳು ಎದುರಾಗುತ್ತವೆ. ಅದರಲ್ಲೂ ಆ ಮನೆಯಲ್ಲಿರೋ ಆತ್ಮಕ್ಕೆ ಜಾನಕಿಯನ್ನು ಅನುಭವಿಸುವ ಮನಸ್ಸು. ಅಷ್ಟಕ್ಕೂ ಆ ಆತ್ಮ ಯಾವುದು, ಯಾಕಾಗಿ, ಜಾನಕಿಯನ್ನು ಅನುಭವಿಸಲು ಯತ್ನಿಸುತ್ತದೆ, ಆ ಆತ್ಮಕ್ಕೆ ತೃಪ್ತಿ ಸಿಗುತ್ತಾ, ಇಲ್ಲವಾ? ಎಂಬುದೇ ಸಸ್ಪೆನ್ಸ್.
ಇಲ್ಲಿ ಅರ್ಜುನ್ ಯೋಗಿ ಸಿಕ್ಕ ಪಾತ್ರವನ್ನು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಶ್ರುತಿರಾಜ್ ಕೂಡ ನಿರ್ದೇಶಕರು ಹೇಳಿಕೊಟ್ಟಿದ್ದನ್ನು ಚಾಚೂ ತಪ್ಪದೆ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳಿಗೆ ಹೆಚ್ಚೇನೂ ಮಹತ್ವ ಇಲ್ಲ. ಚಿತ್ರದಲ್ಲಿ ಇಷ್ಟವಾಗೋದು ಹಿನ್ನೆಲೆ ಸಂಗೀತ ಮತ್ತು ಎಫೆಕ್ಟ್. ಅದಕ್ಕೆ ತಕ್ಕಂತೆಯೇ ದೃಶ್ಯಗಳಿಗೆ ವೇಗ ಅಳವಡಿಸಿರುವ ಸಂಕಲನಕಾರ ಶಿವಪ್ರಸಾದ್ ಅವರ ಕೆಲಸವೂ ಗಮನಸೆಳೆಯುತ್ತೆ. ಉಳಿದಂತೆ, ಎರಡೂ¾ರು ಕೋಣೆಗಳಲ್ಲೇ ವಿಚಿತ್ರ “ಅನುಭವ’ ಕಟ್ಟಿಕೊಡಲು ಪ್ರಯತ್ನಿಸಿರುವ ರವಿಕಿಶೋರ್ ಅವರ ಛಾಯಾಗ್ರಹಣವೂ ಇಷ್ಟವಾಗುತ್ತೆ.
ತ್ರ : ಅತೃಪ್ತ
ನಿರ್ಮಾಣ : ರಘುನಾಥರಾವ್
ನಿರ್ದೇಶನ : ನಾಗೇಶ್ ಕ್ಯಾಲನೂರು.
ತಾರಾಗಣ : ಅರ್ಜುನ್ ಯೋಗಿ, ಶ್ರುತಿರಾಜ್, ಮುನಿ ಇತರರು.
ವಿಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ