ಕನ್ನಡ ಚಿತ್ರರಂಗದಲ್ಲಿ ನೀರವ ಮೌನ
Team Udayavani, Nov 27, 2018, 11:39 AM IST
ಕನ್ನಡ ಚಿತ್ರರಂಗದಲ್ಲಿ ನೀರವ ಮೌನ ಆವರಿಸಿದೆ. ಮನೆಯ ಯಜಮಾನನ್ನು ಕಳೆದುಕೊಂಡ ಸೂತಕದಲ್ಲಿದೆ ಚಂದನವನ. ಆ ಸೂತಕದ ಛಾಯೆ ಅಂಬರೀಶ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಚಿತ್ರರಂಗದ ಮಂದಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಚಿತ್ರರಂಗದಲ್ಲಿ ಏನೇ ಸಮಸ್ಯೆ ಆದರೂ “ರೆಬೆಲ್ಸ್ಟಾರ್ ಇದ್ದಾರೆ, ಅವರು ಸರಿ ಮಾಡ್ತಾರೆ’ ಎಂದು ನಿಟ್ಟುಸಿರು ಬಿಡುತ್ತಿದ್ದ ಮಂದಿಗೆ ಮುಂದೆ ಹೇಗೋ ಎಂಬ ಪ್ರಶ್ನೆ ಕಾಡುತ್ತಿದೆ.
ಚಿತ್ರರಂಗದ ಹಾಗೂ ಚಿತ್ರರಂಗದ ಮಂದಿಯ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸುತ್ತಾ ಅಂಬರೀಶ್ ಚಿತ್ರರಂಗದ ಟ್ರಬಲ್ಶೂಟರ್ ಎನಿಸಿಕೊಂಡಿದ್ದೇ ಈ ಪ್ರಶ್ನೆಗೆ ಕಾರಣ. ಕಲರ್ಫುಲ್ ವ್ಯಕ್ತಿತ್ವದ, ಖಡಕ್ ನುಡಿಯ, ಮೃದು ಮನಸಿನ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿದ್ದಾರೆ, ಎಲ್ಲರ ಜೊತೆ ಆತ್ಮೀಯವಾಗಿ ಬೆರೆಯುತ್ತಿದ್ದಾರೆಂಬುದೇ ಒಂದು ಹೆಮ್ಮೆಯಾಗಿತ್ತು.
ಅದಕ್ಕೆ ಪೂರಕವಾಗಿ ಅಂಬಿ ಕೂಡಾ ಮುನಿಸಿಕೊಳ್ಳದೇ, ತುಂಬಾ ಪ್ರೀತಿಯಿಂದಲೇ ಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಅಂಬರೀಶ್ಗೆ ಸ್ಟಾರ್ಗಳು ಎಷ್ಟು ಆತ್ಮೀಯರಾಗಿದ್ದರೋ, ಚಿತ್ರರಂಗಕ್ಕೆ ಆಗಷ್ಟೇ ಬಂದ ಹೊಸಬರು ಕೂಡಾ ಅಂಬಿಯವರನ್ನು ಪ್ರೀತಿಸುತ್ತಿದ್ದರು. ಆ ಪ್ರೀತಿಗೆ ಕಾರಣ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದ ಹೊಸಬರಿಗೆ ಅಂಬರೀಶ್ ನೀಡುತ್ತಿದ್ದ ಪ್ರೋತ್ಸಾಹ. ಹೊಸಬರ ಅದೆಷ್ಟೋ ಸಿನಿಮಾ ಕಾರ್ಯಕ್ರಮಗಳಿಗೆ ಹೋಗಿ ಪ್ರೋತ್ಸಾಹ ನೀಡುತ್ತಿದ್ದರು.
ತಮ್ಮ ಸಿನಿಮಾ ಮುಹೂರ್ತದ ಮೊದಲ ಆಹ್ವಾನ ಪತ್ರಿಕೆಯನ್ನು ಅಂಬರೀಶ್ ಅವರಿಗೆ ನೀಡಬೇಕು, ಅವರಿಂದ ಆಶೀರ್ವಾದ ಪಡೆಯಬೇಕು ಎಂದು ಬಯಸುತ್ತಿದ್ದ ಹೊಸಬರ ಮುಖ ಮಂಕಾಗಿದೆ. ನೀವೆಷ್ಟು ಸಂಪಾದಿಸಿದ್ದೀರಿ ಎನ್ನುವುದಕ್ಕಿಂತ ನೀವು ಸಂಪಾ ದಿಸಿದ ಅಭಿಮಾನ, ಸ್ನೇಹ, ಆತ್ಮೀಯತೆ ಎಂಥದ್ದು ಎಂಬುದು ಮುಖ್ಯವಾಗುತ್ತದೆ.
ಅಂಬರೀಶ್ ಸಂಪಾದಿಸಿದ ಜನರ ಸ್ನೇಹ, ಅಭಿಮಾನ, ಪ್ರೀತಿ ಯಾವ ಮಟ್ಟದ್ದು, ಅವರ ವ್ಯಕ್ತಿತ್ವ ಏನು ಎಂಬುದಕ್ಕೆ ಅಂಬರೀಶ್ ಅವರ ಅಂತಿಮ ಯಾತ್ರೆ ಸಾಕ್ಷಿಯಾಯಿತು. ಶನಿವಾರ ರಾತ್ರಿ ಅಂಬರೀಶ್ ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಅವರ ಅಂತಿಮ ದರ್ಶನ ಪಡೆಯಲು ಲಕ್ಷೋಪಾದಿಯಲ್ಲಿ ಅಭಿಮಾನಿಗಳು, ಆಪ್ತರು, ಹಿತೈಷಿಗಳು ಆಗಮಿಸಿದರು. ಅದಕ್ಕೆ ಕಾರಣ ಅಂಬಿ ಅವರ ನೇರನಡೆ, ನುಡಿ ಹಾಗೂ ವರ್ಣರಂಜಿತ ವ್ಯಕ್ತಿತ್ವ.
ಅದರಲ್ಲೂ ಚಿತ್ರರಂಗದ ಮಂದಿ ಅಂಬರೀಶ್ ಅವರ ಮೇಲಿಟ್ಟಿರುವ, ಪ್ರೀತಿ, ಅಭಿಮಾನ ಅವರ ಅಂತ್ಯಕ್ರಿಯೆಯಲ್ಲಿ ಎದ್ದು ಕಾಣುತ್ತಿತ್ತು. ತಮ್ಮ ಕುಟುಂಬದ ಯಜಮಾನನ್ನು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡಬೇಕು ಎಂಬ ಭಾವದೊಂದಿಗೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲರೂ ತೊಡಗಿಸಿಕೊಂಡಿದ್ದರು. ಪ್ರತಿಯೊಬ್ಬರು ಯಜಮಾನನ್ನು ಕಳೆದುಕೊಂಡ ನೋವು, ಅನಾಥ ಭಾವದೊಂದಿಗೆ ರೆಬೆಲ್ಸ್ಟಾರ್ಗೆ ಅಂತಿಮ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!