ಚಿಣ್ಣರ ಪ್ರಯತ್ನದ “ನಿರ್ಮಲ’ ಚಿತ್ರಕ್ಕೆ ಚಿತ್ರೋತ್ಸವದಲ್ಲಿ ವೇದಿಕೆ
Team Udayavani, Feb 27, 2020, 7:00 AM IST
ನಿರ್ಮಾಪಕರು ಮತ್ತು ಛಾಯಾಗ್ರಾಹಕರನ್ನು ಹೊರತುಪಡಿಸಿದರೆ, ಸಂಪೂರ್ಣ ಮಕ್ಕಳೇ ಸೇರಿಕೊಂಡು ಸಿದ್ದಪಡಿಸಿರುವ “ನಿರ್ಮಲ’ ಚಿತ್ರ 12ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತ ಅಭಿಯಾನ, ಬಯಲು ಮುಕ್ತ ದೇಶವನ್ನಾಗಿ ಮಾಡುವ ವಿಷಯವನ್ನು ಹೊಂದಿರುವ “ನಿರ್ಮಲ’ ಚಿತ್ರದ ಮಕ್ಕಳ ಸಾಮಾಜಿಕ ಕಳಕಳಿ, ಸಮಾಜದ ಪರಿವರ್ತನೆಗೆ ಹೇಗೆ ಕಾರಣವಾಗುತ್ತದೆ ಎನ್ನುವುದನ್ನು ಕಥಾ ಹಂದರಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.
“ನಿರ್ಮಲ’ ಚಿತ್ರದ ಶೀರ್ಷಿಕೆಗೆ “ಮುಗ್ಧ ಮನಸುಗಳ ಕನಸು’ ಎಂಬ ಅಡಿಬರಹವಿದ್ದು, ಬಹುತೇಕ 14-15 ವಯಸ್ಸಿನ ಒಳಗಿನ ಮಕ್ಕಳು ಸೂಕ್ತ ತರಬೇತಿಯನ್ನು ಪಡೆದುಕೊಂಡು ಈ ಚಿತ್ರವನ್ನು ತಯಾರು ಮಾಡಿದ್ದಾರೆ. ರವಿ ಸಾಹಿತ್ಯದ ಎರಡು ಹಾಡುಗಳಿಗೆ ವರ್ಣಶ್ರೀ ಮುರೂರು ಸಂಗೀತ ಸಂಯೋಜಿಸಿದ್ದಾರೆ. ಸರಿಗಮಮ ಖ್ಯಾತಿಯ ಜ್ಯೋತಿಕಾ ಹಾಗೂ ನಿಖೀತಾ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಚಿತ್ರಕ್ಕೆ ಬಾಲ ಪ್ರತಿಭೆಗಳಾದ ಲೋಹಿತ್ ಚಂದನ್ ಸಂಕಲನ, ಭಾವನಾ ನಾಯಕ್ ನೃತ್ಯ, ಅಂಕಿತಾ ನಾಯ್ಡು ಪ್ರಚಾರ ಕಲೆ, ಮಿಥಿಲೇಶ್-ಆರ್ಯನ್ ಕಲಾ ನಿರ್ದೇಶನ , ಪುಣ್ಯಶ್ರೀ ವಸ್ತ್ರಾಲಂಕಾರ ಮತ್ತು ಲೋಹಿತ್ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ.
ಇನ್ನು ಚಿಣ್ಣರ ಇಂಥದ್ದೊಂದು ವಿಭಿನ್ನ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತು ಹಿರಿಯರ ಸಾಲಿನಲ್ಲಿ ವಿ. ಪವನ ಕುಮಾರ್ ಛಾಯಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಹಿರಿಯ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಬಿ.ಹೆಚ್.ಉಲ್ಲಾಸ್ ಗೌಡ ಮತ್ತು ಅವಿನಾಶ್ ನಿರ್ಮಾಪಕರಾಗಿ “ನಿರ್ಮಲ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಾಮನಗರ, ಚನ್ನಪಟ್ಟಣ, ಬಿಡದಿ ಮೊದಲಾದ ಕಡೆಗಳಲ್ಲಿ “ನಿರ್ಮಲ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.