ಅನಾದಿ ಕಾಲದ ಕಥೆ
Team Udayavani, Oct 21, 2017, 10:24 AM IST
ಕೆಲವು ಚಿತ್ರಗಳು ಆರಂಭವಾಗೋದು, ಚಿತ್ರೀಕರಣ ಮುಗಿಸೋದು ಗೊತ್ತೇ ಆಗೋದಿಲ್ಲ. ಸದ್ದಿಲ್ಲದೇ ಮುಗಿಸಿ, ಬಿಡುಗಡೆಯ ಹಂತಕ್ಕೆ ಬಂದಾಗಲಷ್ಟೇ ಹೀಗೊಂದು ಚಿತ್ರ ಬರುತ್ತಿದೆ ಎಂಬುದು ಗೊತ್ತಾಗುತ್ತದೆ. ಈಗ “ಅನಾದಿ’ ಎಂಬ ಚಿತ್ರ ಕೂಡಾ ಸದ್ದಿಲ್ಲದೇ ಆರಂಭವಾಗಿ, ಬಹುತೇಕ ಚಿತ್ರೀಕರಣ ಕೂಡಾ ಮುಗಿಸಿದೆ. ಇತ್ತೀಚೆಗೆ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಅಂದಹಾಗೆ, ಕೀರ್ತಿವರ್ಧನ್ ಈ ಚಿತ್ರದ ನಿರ್ದೇಶಕರು.
ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಕತೆ ಸಿದ್ಧಪಡಿಸಿಕೊಂಡು ನಾಯಕ ಯಾರಾಗಬಹುದೆಂದು ಯೋಚಿಸುತ್ತಿದ್ದಾಗ ನಿರ್ಮಾಪಕರು, “ನೀವೇ ಆಗಿ’ ಎಂದರಂತೆ. ಅದರ ಪರಿಣಾಮ ಕೀರ್ತಿವರ್ಧನ್ “ಅನಾದಿ’ಯಲ್ಲಿ ನಾಯಕರಾಗಿದ್ದಾರೆ. ಅಷ್ಟಕ್ಕೂ ಅನಾದಿ ಟೈಟಲ್ ಕಥೆಗೆ ಹೇಗೆ ಹೊಂದಿಕೆಯಾಗುತ್ತದೆ ಎಂದು ನೀವು ಕೇಳಬಹುದು. ನಿರ್ದೇಶಕರು ಹೇಳುವಂತೆ, ಇದು ಅಮಾಯಕ ಹುಡುಗನೊಬ್ಬನ ಕಥೆಯಂತೆ.
“ಅನಾದಿ ಕಾಲದಿಂದಲೂ ಈ ಸಮಾಜದಲ್ಲಿ ಅಮಾಯಕರಿಗೆ ಬದುಕು ಒಂದು ಸವಾಲು. ಬದುಕಿನ ಪ್ರತಿ ಹೆಜ್ಜೆಗೂ ಅವರು ಸವಾಲು ಎದುರಿಸುತ್ತಲೇ ಇರಬೇಕಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎನ್ನುವುದು ನಿರ್ದೇಶಕರ ಮಾತು. ಚಿತ್ರದಲ್ಲಿ ನಾಯಕಿಗೂ ಪ್ರಮುಖ ಪಾತ್ರವಿದ್ದು, ನಾಯಕನಿಗೆ ಧೈರ್ಯ ತುಂಬಾ ಪಾತ್ರವಂತೆ. ಚಿತ್ರದಲ್ಲಿ ಶಶಿಕಲಾ ಹಾಗೂ ದಿವ್ಯಶ್ರೀ ನಾಯಕಿಯರಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಕೀರ್ತಿರಾಜ್ ಕೂಡಾ ಪ್ರಮುಖ ಪಾತ್ರ ಮಾಡಿದ್ದು ಅವರಿಲ್ಲಿ ಎಸಿಪಿ ಪಾತ್ರ ಮಾಡಿದ್ದು, ಪ್ರೀತಿಯಲ್ಲಿ ಬಿದ್ದ ಪ್ರೇಮಿಗಳಿಗೆ ಹಾಗೂ ಅವರ ತಂದೆ ತಾಯಂದಿರಿಗೆ ಒಳ್ಳೆಯ ಸಂದೇಶ ಕೊಡುವ ಪಾತ್ರವಂತೆ. ಚಿತ್ರವನ್ನು ನಂದಕುಮಾರ್ ನಿರ್ಮಿಸಿದ್ದಾರೆ. ಆರ್ಕೆಸ್ಟ್ರಾ ಹಿನ್ನೆಲೆಯಿಂದ ಬಂದ ಅವರಿಗೆ ಒಳ್ಳೆಯ ಸಿನಿಮಾ ಮಾಡಬೇಕೆಂಬ ಆಸೆ ಇತ್ತಂತೆ. ಆ ಆಸೆಯನ್ನು “ಅನಾದಿ’ ಮೂಲಕ ಈಡೇರಿಸಿಕೊಂಡಿದ್ದಾರೆ. ಚಿತ್ರಕ್ಕೆ ಮಧುಸೂದನ್ ಛಾಯಾಗ್ರಹಣ, ಹೇಮಂತ್ ಕುಮಾರ್ ಸಂಗೀತ ಹಾಗೂ ವಿನಯ್ ಸಂಕಲನವಿದೆ.