ಔಷಧಿ ದಂಧೆ ಸುತ್ತ “ಥಿಯರಿ’; ಮೈಸೂರು ಟೆಕ್ಕಿಗಳ ಪ್ರಾಕ್ಟಿಕಲ್ ಚಿತ್ರ
Team Udayavani, Jul 19, 2018, 12:44 PM IST
ಚಿತ್ರರಂಗಕ್ಕೆ ಬರುವ ಹೊಸಬರು ಹೊಸ ಹೊಸ ಕಾನ್ಸೆಪ್ಟ್ನೊಂದಿಗೆ ಬರುತ್ತಿದ್ದಾರೆ. ಹೊಸ ತರಹದ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದರೆ ಗೆಲ್ಲಬಹುದೆಂಬ ನಂಬಿಕೆ ಅವರದು. ಅದೇ ನಂಬಿಕೆಯೊಂದಿಗೆ ಈಗ ಹೊಸಬರ ತಂಡವೊಂದು “ಥಿಯರಿ’ ಎಂಬ ಸಿನಿಮಾ ಮಾಡಿದೆ. ಮೈಸೂರಿನ ಟೆಕ್ಕಿಗಳು ಸೇರಿಕೊಂಡು ಈ ಕಥೆ ಮಾಡಿದ್ದಾರೆ.
ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಷಯಗಳನ್ನಿಟ್ಟುಕೊಂಡು ಕಥೆ ಮಾಡಲಾಗಿದೆಯಂತೆ. ಕೊಲೆ, ಔಷಧಿ ದಂಧೆ ಸೇರಿದಂತೆ ಹಲವು ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಇಂದಿನ ಯುವ ಪೀಳಿಗೆ ಕಾಸಿನಾಸೆಗೆ ಏನೆಲ್ಲಾ ಮಾಡುತ್ತಾರೆ, ಔಷಧಿ ದಂಧೆಯಿಂದ ಏನೆಲ್ಲಾ ಸಮಸ್ಯೆಗಳಾಗುತ್ತದೆ ಎಂಬುದನ್ನು ತೋರಿಸಲು ಹೊರಟಿದೆ “ಥಿಯರಿ’ ತಂಡ. ಪ್ರಾಕ್ಟಿಕಲ್ ಆದ ಈ ಅಂಶವನ್ನು ಥಿಯರಿ ಮೂಲಕ ತೋರಿಸಲು ಹೊರಟಿದ್ದೇವೆ ಎನ್ನುವುದು ಚಿತ್ರತಂಡದ ಮಾತು.
ಪವನ್ ಶಂಕರ್ ಈ ಸಿನಿಮಾದ ನಿರ್ದೇಶಕರು. ಎಸ್.ಬಿ.ಶಿವು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇಲ್ಲಿ ನಾಯಕ-ನಾಯಕಿ ಬದಲಾಗಿ ಎಲ್ಲಾ ಪಾತ್ರಗಳು ಪ್ರಮುಖವಾಗಿವೆಯಂತೆ. ಚಿತ್ರದಲ್ಲಿ ಯದು ಶ್ರೇಷ್ಠ, ತೇಜಸ್ವಿನಿ ಮುಂಡಾಸಾದ್, ದೀಪಕ್ಗೌಡ, ಸಂತೋಷ್ ಪ್ರಭು, ಜಯನ್, ಆತ್ಮಾನಂದ ವಾಸನ್, ನಾಗಾರ್ಜುನ್ ಆರಾಧ್ಯ, ಡಾ.ಚಿದಾನಂದ ಸೊರಬ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಇನೋಷ್ ಓಲಿವೆರಾ ಹಾಗೂ ಮಧುಸೂಧನ್ ಭಟ್ ಛಾಯಾಗ್ರಹಣ, ರಂಜಿತ್ ಸೇತು ಸಂಕಲನವಿದೆ. ಚಿತ್ರ ಆಗಸ್ಟ್ನಲ್ಲಿ ಬಿಡುಗಡೆಯಾಗಲಿದೆ.