ಯಜಮಾನನ ಕೈಯಲ್ಲಿ ಉದ್ಘರ್ಷ ಟ್ರೇಲರ್
Team Udayavani, Mar 7, 2019, 9:56 AM IST
ಏಕಕಾಲಕ್ಕೆ 4 ಭಾಷೆಯ ಟ್ರೇಲರ್ ರಿಲೀಸ್ ಚಂದನವನದ ಸಸ್ಪೆನ್ಸ್ ಚಿತ್ರಗಳ ಮಾಸ್ಟರ್ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ “ಉದ್ಘರ್ಷ’ ಚಿತ್ರದ ಮೊದಲ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ಇತ್ತೀಚೆಗೆ ತೆರೆಕಂಡ ದರ್ಶನ್ ಅಭಿನಯದ “ಯಜಮಾನ’ ಚಿತ್ರದಲ್ಲಿ ಖಳನಾಯಕ ನಾಗಿ ಅಬ್ಬರಿಸಿ ಕನ್ನಡ ಚಿತ್ರ ಪ್ರೇಕ್ಷಕರ ಮನ ಗೆದ್ದಿದ್ದ ನಟ ಅನೂಪ್ ಸಿಂಗ್ ಠಾಕೂರ್ ಚೊಚ್ಚಲ ಬಾರಿಗೆ “ಉದ್ಘರ್ಷ’ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಹಾಗಾಗಿ ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ಶುಭ ಹಾರೈಸಲು ದರ್ಶನ್ ಆಗಮಿಸಿದ್ದರು.
ಅಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ನಟಿಯರಾದ ಪ್ರೇಮಾ, ಸುಮನ್ ನಗರ್ ಕರ್, ನಟ ಆದಿತ್ಯ, ಲಹರಿ ವೇಲು ಇತರರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಚಿತ್ರಕ್ಕಾಗಿ ನಾಯಕ ಅನೂಪ್ ಸಿಂಗ್ ಹಾಕಿರುವ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾ ಸಿದರು. “ಕನ್ನಡ ಬರದಿದ್ದರೂ, ಅನೂಪ್, ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿರುವುದನ್ನು ನೋಡಿದಾಗ ಅವರ ಶ್ರದ್ದೆ ಗೊತ್ತಾಗುತ್ತದೆ.
ತಮ್ಮ ಪಾತ್ರಕ್ಕಾಗಿ ಸಾಕಷ್ಟು ಹೋಮ್ವರ್ಕ್ ಮಾಡಿದ್ದಾರೆ. ಚಿತ್ರ ಅವರಿಗೆ ದೊಡ್ಡ ಗೆಲುವು ತಂದುಕೊಡಲಿ’ ಎಂದರು.
“”ನಮ್ಮೂರ ಮಂದಾರ ಹೂವೆ’ ಚಿತ್ರದ ಸಂದರ್ಭದಲ್ಲಿ ಲೈಟ್ ಬಾಯ್ ಆಗಿದ್ದ ನನಗೆ ಪ್ರೀಮಿಯರ್ ಶೋಗೆ ಟಿಕೆಟ್ ನೀಡಲಾಗಿತ್ತು. ಅಲ್ಲಿಯವರೆಗೂ ಪ್ರೀಮಿಯರ್ ಶೋ ಅಂದರೆ ಏನು ಅಂತ ಗೊತ್ತಿರಲಿಲ್ಲ’ ಎಂದು ತಮ್ಮ ಹಿಂದಿನ ದಿನಗಳನ್ನು ದರ್ಶನ್ ಮೆಲುಕು ಹಾಕಿದರು. “ಚಿತ್ರಮಂದಿರದಲ್ಲಿ ಪ್ರೇಕ್ಷಕರಿಂದ ಚಿತ್ರಕ್ಕೆ ಚಪ್ಪಾಳೆ, ಶಿಳ್ಳೆ ಸಿಕ್ಕಾಗ ಮಾತ್ರ ನಿರ್ದೇಶಕರ ಶ್ರಮ ನಿಜವಾಗಿಯೂ ಸಾರ್ಥಕವಾಗುತ್ತದೆ. ಚಿತ್ರದ ಟ್ರೇಲರ್ ನೋಡಿದಾಗ ಈ ಚಿತ್ರ ಕೂಡ ಅಂತಹ ಚಪ್ಪಾಳೆ-ಶಿಳ್ಳೆ ಗಿಟ್ಟಿಸಿಕೊಳ್ಳುವ ಲಕ್ಷಣ ಕಾಣುತ್ತಿದೆ’ ಎಂದು ದರ್ಶನ್ ಅಭಿಪ್ರಾಯಪಟ್ಟರು.
ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, “ನನ್ನ ಹಿಂದಿನ ಚಿತ್ರಗಳಂತೆ “ಉದ್ಘರ್ಷ’ದಲ್ಲೂ ಕ್ಷಣ ಕ್ಷಣಕ್ಕೆ ಕೂತೂಹಲ ಮೂಡಿಸುವಂತಹ ವಿಶೇಷ ಸಸ್ಪೆನ್ಸ್, ಥ್ರಿಲ್ಲರ್, ಆ್ಯಕ್ಷನ್ ಸನ್ನಿವೇಶಗಳಿವೆ. ಒಂದು ದಿನದಲ್ಲಿ ನಡೆಯುವ ಘಟನೆಯೊಂದನ್ನು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ನನಗೂ ಇದೊಂದು ಹೊಸ ಅನುಭವ. ಪ್ರೇಕ್ಷಕರಿಗೂ ಹೊಸ ಅನುಭವ ನೀಡಲಿದೆ’ ಎಂಬ ಭರವಸೆ ಕೊಟ್ಟರು ದೇಸಾಯಿ.
ದೇವರಾಜ್ ಆರ್. ನಿರ್ಮಾಣದ “ಉದ್ಘರ್ಷ’ ಚಿತ್ರದಲ್ಲಿ ನಾಯಕ ಅನೂಪ್ ಸಿಂಗ್ ಠಾಕೂರ್ ಅವರೊಂದಿಗೆ “ಕಬಾಲಿ’ ಖ್ಯಾತಿಯ ಸಾಯಿ ಧನ್ಸಿಕಾ, ತಾನ್ಯಾ ಹೋಪ್,ಬಹುಭಾಷಾ ನಟರಾದ ಕಬೀರ್ ಸಿಂಗ್ ದುಹಾನ್, ಪ್ರಭಾಕರ್, ಕಿಶೋರ್, ಹರ್ಷಿಕಾ ಸೇರಿದಂತೆ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಬಾಲಿವುಡ್ನ ಸಂಜಯ್ ಚೌಧರಿ ಸಂಗೀತ ನೀಡಿದ್ದಾರೆ.
ಸದ್ಯ ಬಿಡುಗಡೆಯಾಗಿರುವ “ಉದ್ಘರ್ಷ’ ಚಿತ್ರದ ಟ್ರೇಲರ್ ಗೆ ಕಿಚ್ಚ ಸುದೀಪ್ ಇಂಗ್ಲೀಷ್ನಲ್ಲಿ ಹಿನ್ನೆಲೆ ಧ್ವನಿ ನೀಡಿ¨ªಾರೆ. ಖಳನಟ ಕಬೀರ್ ಸಿಂಗ್ ಅವರ ಒಂದು ಡೈಲಾಗ್ ಬಿಟ್ಟರೆ, ಸಂಪೂರ್ಣ ಟ್ರೇಲರ್ ಹಿನ್ನೆಲೆ ಸಂಗೀತ, ಸುದೀಪ್ ಹಿನ್ನೆಲೆ ಧ್ವನಿಯಲ್ಲೇ ಸಾಗುತ್ತದೆ. “ಉದ್ಘರ್ಷ’ ಚಿತ್ರ ತಮಿಳಿನಲ್ಲಿ “ಉಚ್ಚಕಟ್ಟಂ’ ಎಂಬ ಹೆಸರಿನಿಂದ ರಿಲೀಸ್ ಆಗಲಿದ್ದು, ಉಳಿದಂತೆ ತೆಲುಗು, ಮಲಯಾಳಂನಲ್ಲಿ “ಉದ್ಘರ್ಷ’ ಹೆಸರಿನಿಂದಲೇ ತೆರೆಗೆ ಬರುತ್ತಿದೆ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ರಿಲೀಸ್ ಆಗಿರುವ ಟ್ರೇಲರ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆ ಸಿಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರ ತಂಡ, ಇದೇ ತಿಂಗಳ ಅಂತ್ಯದಲ್ಲಿ ಚಿತ್ರ ವನ್ನು ನಾಲ್ಕೂ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದೆ.