ಉಪ್ಪಿ-ಕ್ರೇಜಿಸ್ಟಾರ್ ಚಿತ್ರ ಮತ್ತೆ ಶುರು
Team Udayavani, Aug 24, 2020, 6:56 PM IST
ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಉಪೇಂದ್ರ ಕಾಂಬಿನೇಶನ್ನಲ್ಲಿ ಸಿನಿಮಾವೊಂದು ಸೆಟ್ಟೇರಿದ ವಿಚಾರ ನಿಮಗೆ ನೆನಪಿರಬಹುದು. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಆರಂಭವಾದ ಈ ಚಿತ್ರವನ್ನು ಆರ್. ಎಸ್.ಪ್ರೊಡಕ್ಷನ್ಸ್ನಡಿ ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಈ ಚಿತ್ರದ ಚಿತ್ರೀಕರಣ ಕೂಡಾ ನಿಂತು ಹೋಗಿತ್ತು. ಈಗ ಮತ್ತೆ ಚಿತ್ರೀಕರಣ ಆರಂಭವಾಗಿದೆ. ಇಂದಿನಿಂದ ನಗರದ ಅಶೋಕ ಹೋಟೆಲ್ನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಸಿದ್ಧವಾಗಿದೆ. ರವಿಚಂದ್ರನ್, ಉಪೇಂದ್ರ ಹಾಗೂ ನಾಯಕಿಯರು ಈ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ತುಂಬಾ ಅದ್ಧೂರಿಯಾಗಿಯೇ ಚಿತ್ರೀಕರಣ ಮಾಡಲು ನಿರ್ಮಾಪಕ ಕನಕಪುರ ಶ್ರೀನಿವಾಸ್ ನಿರ್ಧರಿಸಿದ್ದಾರೆ.
ಅದ್ಧೂರಿ ಸೆಟ್ಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದು, ದಿನವೊಂದಕ್ಕೆ 20 ಲಕ್ಷ ರೂಪಾಯಿ ಖರ್ಚಿನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಬಾರಿ ಈ ಚಿತ್ರದಲ್ಲಿ ಒಂದು ಬದಲಾವಣೆಯಾಗಿದೆ. ಅದೇನೆಂದರೆ ಚಿತ್ರದ ಟೈಟಲ್. ಹೌದು, ಈ ಚಿತ್ರಕ್ಕೆ “ರವಿಚಂದ್ರ’ ಎಂದು ಶೀರ್ಷಿಕೆ ಇಡಲಾಗಿತ್ತು. ಆದರೆ, ಈಗ ಚಿತ್ರದ ಶೀರ್ಷಿಕೆ ಬದಲಾಗಿದೆ. ಬದಲಾಗಿದೆ ಅನ್ನೋದಕ್ಕಿಂತ ಚಿತ್ರತಂಡ “ರವಿಚಂದ್ರ’ ಟೈಟಲ್ ಅನ್ನು ಕೈ ಬಿಟ್ಟಿದೆ. ಈಗ ಬೇರೆ ಶೀರ್ಷಿಕೆ ಇಡಲು ಚಿತ್ರತಂಡ ಮುಂದಾಗಿದೆ. ಮೂಲಗಳ ಪ್ರಕಾರ, ಚಿತ್ರಕ್ಕೆ “ವೇದವ್ಯಾಸ’ ಎಂಬ ಟೈಟಲ್ ಪಕ್ಕಾ ಆಗಿದೆ. ಎಲ್ಲಾ ಓಕೆ, ಈ ಟೈಟಲ್ ಕೈ ಬಿಡಲು ಕಾರಣವೇನು ಎಂದು ನೀವು ಕೇಳಬಹುದು. ಇದಕ್ಕೆ ನಿರ್ದೇಶಕ ಓಂ ಪ್ರಕಾಶ್ ರಾವ್ ಹೇಳುವುದು ಹೀಗೆ:
“ರವಿಚಂದ್ರ’ ಅಣ್ಣಾವ್ರ ಮಾಡಿದ ಸಿನಿಮಾದ ಟೈಟಲ್. ನಮ್ಮದು ರೀಮೇಕ್ ಸಿನಿಮಾ. ರೀಮೇಕ್ ಸಿನಿಮಾಕ್ಕೆ ರವಿಚಂದ್ರ ಟೈಟಲ್ ಬೇಡ ಎಂದು ಕೈ ಬಿಟ್ಟೆವು. ಈಗ ವೇದವ್ಯಾಸ ಇಡುವ ಯೋಚನೆ ಇದೆ. ಆದರೆ, ಅದಿನ್ನೂ ಅಂತಿಮವಾಗಿಲ್ಲ. ಎಲ್ಲವೂ ಸೆಪ್ಟೆಂಬರ್ 18ಕ್ಕೆ ಫೈನಲ್ ಆಗಲಿದೆ’ ಎನ್ನುವುದು ಓಂಪ್ರಕಾಶ್ ರಾವ್ ಮಾತು.
ಅಂದಹಾಗೆ, ಇದು ತೆಲುಗಿನ “ಬಲುಪು’ ಚಿತ್ರದ ರೀಮೇಕ್ ಆಗಿದೆ. ಮತ್ತೆ ಚಿತ್ರೀಕರಣ ಆರಂಭವಾಗುತ್ತಿರುವ ಬಗ್ಗೆ ಮಾತನಾಡುವ ನಿರ್ಮಾಪಕ ಕನಕಪುರ ಶ್ರೀನಿವಾಸ್, “ಮತ್ತೆ ಅದ್ದೂರಿಯಾಗಿ ಚಿತ್ರೀಕರಣ ಆರಂಭಿಸುತ್ತಿದ್ದೇವೆ. ಅಶೋಕ ಹೋಟೆಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ’ ಎನ್ನುತ್ತಾರೆ. ಈ ಚಿತ್ರದಲ್ಲಿ ಸಾನ್ವಿ, ನಿಮಿಕಾ ಹಾಗೂ ಅದಿತಿ ಆರ್ಯ ನಟಿಸುತ್ತಿದ್ದಾರೆ.