ತ್ರಿಪುರ ಸುಂದರಿ ಹಿಂದೆ ಯಾರಿದ್ದಾರೆ?
Team Udayavani, Jan 28, 2019, 5:40 AM IST
ಕನ್ನಡದಲ್ಲಿ ಈಗಾಗಲೇ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಚಿತ್ರಗಳು ಸಾಕಷ್ಟು ಬಂದಿವೆ. ಆ ಸಾಲಿಗೆ “ತ್ರಿಪುರ ‘ ಚಿತ್ರ ಹೊಸ ಸೇರ್ಪಡೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರಮಂದಿರಕ್ಕೆ ಬರಲು ತಯಾರಿ ನಡೆಸುತ್ತಿದೆ. ಈ ಚಿತ್ರಕ್ಕೆ ಕೆ.ಶಂಕರ್ ನಿರ್ದೇಶಕರು. ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನೂ ಅವರೇ ಬರೆದಿದ್ದಾರೆ. ಎಲ್.ಮಂಜುನಾಥ್ ನಿರ್ಮಾಪಕರು.
“ತ್ರಿಪುರ’ ಎಂಬ ಒಂದು ಹೆಣ್ಣಿನ ಹಿಂದೆ ಬಿದ್ದವರ ಕಥೆ ಏನಾಗುತ್ತದೆ ಎಂಬ ಒನ್ಲೈನ್ ಇಟ್ಟುಕೊಂಡು, ಹಾಸ್ಯದ ಮೂಲಕ ಸಣ್ಣ ಸಂದೇಶ ಸಾರುವ ಚಿತ್ರವಿದು. ವಿಶೇಷವೆಂದರೆ, ಚಿತ್ರದಲ್ಲಿ ಐತಿಹಾಸಿಕ ಕಥೆಯೂ ಬಂದು ಹೋಗಲಿದೆ. ಅದರ ಕಥೆ ಏನೆಂಬುದು ಗೌಪ್ಯ. ಬೆಂಗಳೂರು, ಮಂಗಳೂರು, ಮೈಸೂರು, ನಂದಿಬೆಟ್ಟ ಸೇರಿದಂತೆ ಇತರೆ ಕಡೆ ಚಿತ್ರಿಕರಿಸಲಾಗಿದೆ. ಸದ್ಯಕ್ಕೆ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.
ಚಿತ್ರದಲ್ಲಿ ಅಶ್ವಿನಿಗೌಡ, ಶ್ರೀಧರ್, ಧರ್ಮ, ಟೆನ್ನಿಸ್ ಕೃಷ್ಣ, ಲಕ್ಷ್ಮಣ್ರಾವ್, ಕಿಲ್ಲರ್ ವೆಂಕಟೇಶ್, ಡಿಂಗ್ರಿ ನಾಗರಾಜ್, ಬೇಬಿ ಆದ್ಯ, ರಮಾನಂದ್, ಸುಂದರ ಶ್ರೀ ಇತರರು ನಟಿಸಿದ್ದಾರೆ. ಈ ಚಿತ್ರಕ್ಕೆ ಗೌರಿ ವೆಂಕಟೇಶ್ ಛಾಯಗ್ರಹಣ ಮಾಡಿದ್ದಾರೆ. ಡಿ.ಆರ್.ಹೇಮಂತ್ ಅವರ ಸಂಗೀತವಿದೆ. ರಾಜಶೇಖರೆಡ್ಡಿ ಸಂಕಲನ ಮಾಡಿದ್ದಾರೆ. ಹರಿಕೃಷ್ಣ ನೃತ್ಯವಿದೆ.