ಗ್ರೀನ್ ಇಂಡಿಯಾ ಚಾಲೆಂಜ್ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಭಾಗಿ
ಪ್ರತಿಯೊಬ್ಬ ವ್ಯಕ್ತಿಯು ಗಿಡ ನೆಡುವ ಕಾರ್ಯಕ್ರಮದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು
Team Udayavani, Jun 22, 2022, 9:48 PM IST
ಹೈದರಾಬಾದ್ : ಬಾಲಿವುಡ್ ನಟ ಸಲ್ಮಾನ್ ಖಾನ್, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ರಾಜ್ಯಸಭಾ ಸಂಸದ ಮತ್ತು ಗ್ರೀನ್ ಇಂಡಿಯಾ ಸಂಸ್ಥಾಪಕ ಜೆ ಸಂತೋಷ್ ಕುಮಾರ್ ಅವರೊಂದಿಗೆ ಗ್ರೀನ್ ಇಂಡಿಯಾ ಚಾಲೆಂಜ್ 5.0 ನಲ್ಲಿ ಭಾಗವಹಿಸಿದ್ದಾರೆ.
ಶೂಟಿಂಗ್ ಗಾಗಿ ಆಗಮಿಸಿದ್ದ ಸಲ್ಮಾನ್ ಖಾನ್, ಚಿತ್ರತಂಡದೊಂದಿಗೆ ಮಂಗಳವಾರ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಸಿ ನೆಟ್ಟರು ಎಂದು ಸಂತೋಷ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಲ್ಮಾನ್ ಖಾನ್, ಪ್ರತಿಯೊಬ್ಬ ವ್ಯಕ್ತಿಯು ಗಿಡ ನೆಡುವ ಕಾರ್ಯಕ್ರಮದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಸಸಿಗಳು ದೊಡ್ಡದಾಗುವವರೆಗೆ ಅವುಗಳನ್ನು ಸಮರ್ಪಕವಾಗಿ ನೋಡಿಕೊಳ್ಳಬೇಕು. ಅತಿವೃಷ್ಟಿ, ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳಿಂದ ಮಾನವನ ನಷ್ಟ ಅಪಾರವಾಗಿರುವುದು ವಿಷಾದನೀಯ. ನಷ್ಟವನ್ನು ಸರಿದೂಗಿಸುವ ಏಕೈಕ ಪರಿಹಾರವೆಂದರೆ ತೋಟಗಾರಿಕೆಯನ್ನು ಉತ್ತೇಜಿಸುವುದು ಎಂದು ಸಲ್ಮಾನ್ ಹೇಳಿದ್ದಾರೆ.
ಗ್ರೀನ್ ಇಂಡಿಯಾ ಚಾಲೆಂಜ್ಗೆ ಸೇರಲು ಮತ್ತು ದೊಡ್ಡ ಪ್ರಮಾಣದಲ್ಲಿ ಸಸಿಗಳನ್ನು ನೆಡಲು ನಟ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಕರೆ ನೀಡಿದ್ದಾರೆ. ಗಿಡ ನೆಡುವ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿರುವ ಸಂತೋಷ್ ಕುಮಾರ್ ಅವರನ್ನು ಸಲ್ಮಾನ್ ಖಾನ್ ಶ್ಲಾಘಿಸಿ, ಹಸಿರು ಹೊದಿಕೆಯನ್ನು ಸುಧಾರಿಸುವ ಸಂಸದರ ಪ್ರಯತ್ನವು ಭೂಮಿ ಮತ್ತು ಭವಿಷ್ಯದ ಪೀಳಿಗೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದರು.
ಸಂತೋಷ್ ಕುಮಾರ್ ಅವರು ದೇಶದ ಪ್ರಮುಖ ಹಸಿರು ಉಪಕ್ರಮಗಳಲ್ಲಿ ಒಂದಾದ ‘ಗ್ರೀನ್ ಇಂಡಿಯಾ ಚಾಲೆಂಜ್ (ಜಿಐಸಿ)’ ಅನ್ನು ಪ್ರಾರಂಭಿಸಿದ್ದರು. ಉಪಕ್ರಮದ ಭಾಗವಾಗಿ ಕೋಟಿಗಟ್ಟಲೆ ಸಸಿಗಳನ್ನು ನೆಡಲಾಗಿದೆ.