ನೀತಿಪಾಠದಲ್ಲಿ ಮನರಂಜನೆಯ ತಂತ್ರ
ಚಿತ್ರ ವಿಮರ್ಶೆ
Team Udayavani, Mar 30, 2019, 2:27 PM IST
ಆಮೆ ಮತ್ತು ಮೊಲ – ಇದು ಯೋಗರಾಜ್ ಭಟ್ಟರ “ಪಂಚತಂತ್ರ’ ಚಿತ್ರದ ಮೂಲ ತಿರುಳು. ಇಲ್ಲಿ ಆಮೆ ಎಂದರೆ ಹಿರಿಯರು, ಮೊಲ ಎಂದರೆ ಎಲ್ಲದರಲ್ಲೂ ವೇಗವಾಗಿರುವ ಇಂದಿನ ಯುವಕರು. ಎರಡು ಜನರೇಶನ್ನ ಮನಸ್ಥಿತಿಯ ಅನಾವರಣದ ಪ್ರಯತ್ನವಿದು. ಈ ಎರಡು ಅಂಶಗಳನ್ನಿಟ್ಟುಕೊಂಡು ಭಟ್ರಾ “ಪಂಚತಂತ್ರ’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಈ ಚಿತ್ರದೊಳಗೊಂದು ನೀತಿಪಾಠ ಕೂಡಾ ಇದೆ. ಆದರೆ, ಮನರಂಜನೆಯ ಹಾದಿಯಲ್ಲಿ ಅದನ್ನು ಹುಡುಕುವುದು ಪ್ರೇಕ್ಷಕನಿಗೆ ಬಿಟ್ಟ ವಿಚಾರ. ಇಷ್ಟು ದಿನ ಲವ್, ಬ್ರೇಕಪ್, ಕಲಹದ ಸುತ್ತ ಸಿನಿಮಾ ಮಾಡುತ್ತಿದ್ದ ಭಟ್ರಾ, ಈ ಬಾರಿ “ಪಂಚತಂತ್ರ’ದಲ್ಲಿ ಸಂಪೂರ್ಣ ಹೊಸದನ್ನು ಪ್ರಯತ್ನಿಸಿದ್ದಾರೆ ಮತ್ತು ಅದನ್ನು ನೀಟಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಕೂಡಾ.
ಹಾಗೆ ನೋಡಿದರೆ ಮಾಸ್ತಿ ಹಾಗೂ ಕಾಂತರಾಜ್ ಮಾಡಿರುವ ಕಥೆ ಭಟ್ಟರ ಶೈಲಿಗೆ ಸಂಪೂರ್ಣ ಹೊಸದು ಮತ್ತು ಗಂಭೀರವಾದುದು. ಆದರೆ, ಭಟ್ರಾ ಅದನ್ನು ತಮ್ಮದೇ ಶೈಲಿಗೆ ಒಗ್ಗಿಸಿಕೊಂಡು ಸಿನಿಮಾ ಮಾಡಿದ್ದಾರೆ. ಹಾಗಾಗಿ, ಒಂದು ಗಂಭೀರ ವಿಷಯದ ಜೊತೆಗೆ ಪಕ್ಕಾ ಮನರಂಜನೆ ಕೂಡಾ “ಪಂಚತಂತ್ರ’ದಲ್ಲಿ ಸಿಗುತ್ತದೆ.
ಒಂದೇ ಕ್ಯಾಂಪಸ್ನಲ್ಲಿರುವ ಹಿರಿಯ ಜೀವಗಳ ಹಾಗೂ ಯುವಕರ ನಡುವಿನ ಜಿದ್ದಾಜಿದ್ದಿಯೊಂದಿಗೆ ಆರಂಭವಾಗುವ ಸಿನಿಮಾ ಮುಂದೆ ಒಂದು ದೊಡ್ಡ ಸ್ಪರ್ಧೆಗೆ ಹಾಗೂ ಮನಸ್ಥಿತಿಯ ಬದಲಾವಣೆಗೆ ಕಾರಣವಾಗುತ್ತಾ ಹೋಗುತ್ತದೆ. ಎರಡು ಜನರೇಶನ್ ಮಧ್ಯದ ಭಿನ್ನಾಭಿಪ್ರಾಯದ ಜೊತೆಗೆ ಇಂದಿನ ಯುವಕರ ಪ್ರೇಮ, ಅದರ ಬಗೆಗಿನ ಕುತೂಹಲವನ್ನು ಭಟ್ರಾ ಸಖತ್ ರೊಮ್ಯಾಂಟಿಕ್ ಆಗಿ ಕಟ್ಟಿಕೊಟ್ಟಿದ್ದಾರೆ.
ಚಿತ್ರದ ಮೊದಲರ್ಧ ಬಹುತೇಕ ಪಾತ್ರ ಪರಿಚಯ, ಜಿದ್ದಾಜಿದ್ದಿಯ ಹಾದಿಗೆ ನಾಂದಿಯಲ್ಲೇ ಮುಗಿದುಹೋಗುತ್ತದೆ. ಈ ದೃಶ್ಯಗಳಲ್ಲಿ ಭಟ್ಟರ ಶೈಲಿ ಎದ್ದು ಕಾಣುತ್ತದೆ. ಪ್ರತಿ ದೃಶ್ಯದಲ್ಲೂ ಮನರಂಜನೆ ತುಂಬಿರಬೇಕೆಂಬ ಭಟ್ರ ಉದ್ದೇಶ ಸ್ಪಷ್ಟವಾಗಿದೆ. ಒನ್ಲೈನ್ ಕಥೆಗೆ ಭಟ್ರಾ ತಮ್ಮ ಚಿತ್ರಕಥೆ, ಸಂಭಾಷಣೆಯಲ್ಲಿ ಜೀವ ತುಂಬಿದ್ದಾರೆ. ಸಮಯೋಚಿತ ಡೈಲಾಗ್ಗಳು ನಗುತರಿಸುತ್ತವೆ.
ಈ ಸಿನಿಮಾದ ಹೈಲೈಟ್ ಎಂದರೆ ಅದು ಕಾರ್ ರೇಸ್. ಹಿರಿಯರ ಹಾಗೂ ಕಿರಿಯರ ನಡುವಿನ ಕಾರು ರೇಸ್ ಆರಂಭವಾಗುವ ಮೂಲಕ ಸಿನಿಮಾ ಇನ್ನೊಂದು ಮಗ್ಗುಲಿಗೆ ತೆರೆದುಕೊಳ್ಳುತ್ತದೆ. ಸಿನಿಮಾದ ನಿಜವಾದ ಜೀವಾಳ ಕೂಡಾ ಈ ರೇಸ್ ಎಂದರೆ ತಪ್ಲಲ್ಲ. ಕನ್ನಡಕ್ಕೆ ರೇಸ್, ಸ್ಫೋರ್ಟ್ಸ್ ಹಿನ್ನೆಲೆಯ ಸಿನಿಮಾಗಳು ಹೊಸದು. ಅದರಲ್ಲೂ ಕಾರ್ ರೇಸ್ ದೃಶ್ಯಗಳು ದೊಡ್ಡ ಮಟ್ಟದಲ್ಲಿ ಬಂದಂತಿಲ್ಲ.
ಆದರೆ, “ಪಂಚತಂತ್ರ’ ಚಿತ್ರ ಕಾರ್ ರೇಸ್ಗೆ ಹೆಚ್ಚಿನ ಮಹತ್ವ ನೀಡಿದೆ. ಸುಮಾರು 25 ನಿಮಿಷ ಕಾರು ರೇಸ್ ದೃಶ್ಯ ತುಂಬಿಕೊಂಡಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವಲ್ಲೂ ಈ ದೃಶ್ಯ ಯಶಸ್ವಿಯಾಗಿದೆ. ಪಕ್ಕಾ ಪ್ರೊಫೆಶನಲ್ ಆಗಿ ಈ ರೇಸ್ ಅನ್ನು ಚಿತ್ರೀಕರಿಸಿರುವುದು ಕೂಡಾ ಒಂದು ಹೈಲೈಟ್. ರೇಸ್ ಮಧ್ಯೆಯೂ ಭಟ್ಟರು ಮನರಂಜನೆಯನ್ನು ಬಿಟ್ಟುಕೊಟ್ಟಿಲ್ಲ.
ಹಾಗಾಗಿ, ಅಲ್ಲಲ್ಲಿ ರಂಗಾಯಣ ರಘು ಹಾಗೂ ಟೀಂನವರ ಮಜಾ ಸರಣಿ ಮುಂದುವರೆಯುತ್ತಲೇ ಇರುತ್ತದೆ. ಎಲ್ಲಾ ಓಕೆ, ರೇಸ್ ಯಾರು ಗೆಲ್ಲುತ್ತಾರೆ. ಅದೇ ಈ ಸಿನಿಮಾದ ಕುತೂಹಲ. ಅದನ್ನು ನೀವು ತೆರೆಮೇಲೆಯೇ ನೋಡಬೇಕು. ಒಂದು ಕಮರ್ಷಿಯಲ್ ಸಿನಿಮಾಕ್ಕೆ ಏನೇನು ಅಂಶಗಳು ಬೇಕೋ, ಅವೆಲ್ಲವನ್ನು ಅಚ್ಚುಕಟ್ಟಾಗಿ ಜೋಡಿಸಿದ್ದಾರೆ ಭಟ್ಟರು.
ಹಾಗಂತ ಯಾವುದನ್ನೂ ಅತಿ ಮಾಡಿಲ್ಲ. ಅದೇ ಕಾರಣದಿಂದ “ಪಂಚತಂತ್ರ’ ಮನರಂಜನೆಯಲ್ಲಿ ಹಿಂದೆ ಬೀಳುವುದಿಲ್ಲ. ಚಿತ್ರದಲ್ಲಿ ವಿಹಾನ್ ಹಾಗೂ ಸೋನಾಲ್ ನಾಯಕ-ನಾಯಕಿಯಾದರೂ, ನಟ ರಂಗಾಯಣ ರಘು ಅವರ ಪಾತ್ರ ಪ್ರಮುಖವಾಗಿದೆ. ಮತ್ತೂಮ್ಮೆ ಅವರಿಗೆ ತುಂಬಾ ಮಾತನಾಡುವ ಹಾಗೂ ಅವರ ಎಂದಿನ ಮ್ಯಾನರೀಸಂ ಅನ್ನು ಪ್ರದರ್ಶಿಸುವ ಅವಕಾಶ ಸಿಕ್ಕಿರುವುದರಿಂದ ಪಾತ್ರದಲ್ಲಿ ಮಿಂಚಿದ್ದಾರೆ.
ವಿಹಾನ್ ಹಾಗೂ ಸೋನಾಲ್ ಕೂಡಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ “ಶೃಂಗಾರದ ಹೊಂಗೆ ಮರ …’ ಹಾಡಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಲರಾಜುವಾಡಿ, ದೀಪಕ್ ರಾಜ್, ಅಕ್ಷರ, ಕರಿಸುಬ್ಬು ಸೇರಿದಂತೆ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಹರಿಕೃಷ್ಣ ಸಂಗೀತದ ಹಾಡುಗಳು ಇಷ್ಟವಾದರೆ, ಸುಜ್ಞಾನ್ ಛಾಯಾಗ್ರಹಣದಲ್ಲಿ “ಪಂಚತಂತ್ರ’ ಸುಂದರ.
ಚಿತ್ರ: ಪಂಚತಂತ್ರ
ನಿರ್ಮಾಣ: ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ಪರಾಡ್ಕರ್
ನಿರ್ದೇಶನ: ಯೋಗರಾಜ್ ಭಟ್
ತಾರಾಗಣ: ವಿಹಾನ್, ಸೋನಾಲ್, ರಂಗಾಯಣ ರಘು, ಅಕ್ಷರ, ದೀಪಕ್ ಮತ್ತಿತರರು.
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
The Very Best Payment Techniques for Online Casinos
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ