ಕೋವಿಡ್ 19 ಸೋಂಕು: ರಾಜ್ಯದಲ್ಲಿ ಗುಣಮುಖರ ಸಂಖ್ಯೆ ಹೆಚ್ಚಳ
Team Udayavani, Jul 26, 2020, 6:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕುಪೀಡಿತರ ಸಂಖ್ಯೆ ಹೆಚ್ಚುತ್ತಿದೆಯಾದರೂ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಮತ್ತು ಗುಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಆರೋಗ್ಯ ಇಲಾಖೆಯ ಶನಿವಾರದ ಹೆಲ್ತ್ ಬುಲೆಟಿನ್ನಲ್ಲಿ 5,072 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. 2,403 ಮಂದಿ ಗುಣಮುಖರಾಗಿದ್ದಾರೆ. 72 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಈವರೆಗೆ 90,942 ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದು, 33,750 ಮಂದಿ ಗುಣ ಹೊಂದಿದ್ದಾರೆ. 55,388 ಮಂದಿ ನಿಗದಿತ ಆಸ್ಪತ್ರೆ ಮತ್ತು ಕೋವಿಡ್ 19 ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈವರೆಗೆ 1,796 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ಚೇತರಿಕೆ ಪ್ರಮಾಣ ಶೇ. 37.1ರಷ್ಟಿದೆ. ಮರಣ ಪ್ರಮಾಣ ಶೇ. 1.97ರಷ್ಟಿದೆ. 611 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಶನಿವಾರ ಒಂದೇ ದಿನ 72 ಸಾವು ದಾಖಲಾಗಿದ್ದು, ಇದರಲ್ಲಿ ಬೆಂಗಳೂರಿನದ್ದೇ ಸಿಂಹಪಾಲು.
ದ.ಕ.: 218, ಉಡುಪಿ: 182 ಪಾಸಿಟಿವ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 218 ಮಂದಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಗುರುವಾರ ಮತ್ತು ಶುಕ್ರವಾರ ಮೃತಪಟ್ಟ ಎಂಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 140 ಮಂದಿ ಗುಣ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2,370 ಸಕ್ರಿಯ ಪ್ರಕರಣಗಳಿವೆ.
ಉಡುಪಿ ಜಿಲ್ಲೆಯಲ್ಲಿ ಶನಿವಾರ 182 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದರೆ ಶುಕ್ರವಾರ ರಾತ್ರಿಯಿಂದೀಚೆಗೆ ಮೂವರು ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರು ಹೊರಜಿಲ್ಲೆಯವರು, ಒಬ್ಬರು ಮಾತ್ರ ಉಡುಪಿ ಜಿಲ್ಲೆಯವರು. ಇದೇವೇಳೆ ಶನಿವಾರ 79 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1,199 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರಗೋಡಿನಲ್ಲಿ 105 ಮತ್ತು ಕೊಡಗಿನಲ್ಲಿ 19 ಪಾಸಿಟಿವ್ ದಾಖಲಾಗಿವೆ.
ಮಧ್ಯಪ್ರದೇಶ ಸಿಎಂ ಚೌಹಾಣ್ಗೆ ಸೋಂಕು ದೃಢ
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಶನಿವಾರ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಅವರನ್ನು ಭೋಪಾಲ್ನ ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಚೌಹಾಣ್, ನನ್ನಲ್ಲಿ ಕೋವಿಡ್ 19 ರೋಗಲಕ್ಷಣ ಕಂಡುಬಂದಿತ್ತು. ಪರೀಕ್ಷಿಸಿದಾಗ ಪಾಸಿಟಿವ್ ಎಂದು ಗೊತ್ತಾಯಿತು. ವೈದ್ಯರ ಮಾರ್ಗದರ್ಶನದ ಮೇರೆಗೆ ಕ್ವಾರಂಟೈನ್ನಲ್ಲಿರುತ್ತೇನೆ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.
ಜಾಗತಿಕ ಸೋಂಕು ಪೀಡಿತರ ಸಂಖ್ಯೆ: 1,60,62,135
ಒಟ್ಟು ಸಾವು (ಜಗತ್ತು): 6,45,014
ಭಾರತ (ಸೋಂಕು): 13,83,779
ಸಾವು (ಭಾರತ): 32,087
ಚೇತರಿಕೆ: 8,84,659
ಕರ್ನಾಟಕ (ಸೋಂಕು): 90,942