Covid19 ಎಫೆಕ್ಟ್: ಕಂಪನಿಗಳನ್ನು ದಿವಾಳಿ ಅಥವಾ ಸುಸ್ತಿದಾರ ಎಂದು ಪರಿಗಣಿಸುವಂತಿಲ್ಲ: ಕೇಂದ್ರ
ಆತ್ಮ ನಿರ್ಭರ ಭಾರತ ವಿಶೇಷ ಆರ್ಥಿಕ ಪ್ಯಾಕೇಜ್ ನ 5ನೇ ಕಂತಿನ ವಿವರ
Team Udayavani, May 17, 2020, 1:00 PM IST
ನವದೆಹಲಿ: ಕೋವಿಡ್ 19 ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇನ್ನು ಒಂದು ವರ್ಷಗಳವರೆಗೆ ಸಾಲ ಮರು ಪಾವತಿ ಮಾಡದಿದ್ದಲ್ಲಿ ಸುಸ್ತಿದಾರರು ಅಥವಾ ದಿವಾಳಿ(ಐಬಿಸಿ) ಎಂದು ಪರಿಗಣಿಸಬಾರದು ಎಂದು ಕೇಂದ್ರ ಸರ್ಕಾರ ಭಾನುವಾರ ಘೋಷಿಸಿದೆ.
ಕೋವಿಡ್ ಸಂಬಂಧಿತ ದೇಶವ್ಯಾಪಿ ಲಾಕ್ ಡೌನ್ ಪರಿಸ್ಥಿತಿಯಿಂದ ಕುಸಿದಿರುವ ದೇಶದ ಆರ್ಥಕತೆಗೆ ಬಲ ತುಂಬಲು ಹಾಗೂ ಸಂಕಷ್ಟದಲ್ಲಿರುವ ದೇಶವಾಸಿಗಳ ಸಹಾಯಕ್ಕಾಗಿ ಕೇಂದ್ರ ಸರ್ಕಾರವು ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಆತ್ಮ ನಿರ್ಭರ ಭಾರತ ವಿಶೇಷ ಆರ್ಥಿಕ ಪ್ಯಾಕೇಜ್ ನ 5ನೇ ಕಂತಿನ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಖಾತೆಯ ಅನುರಾಗ್ ಠಾಕೂರ್ ಸೇರಿದಂತೆ ಇತರರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಕೋವಿಡ್ 19 ಸೋಂಕು ಪರಿಸ್ಥಿತಿ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ಸಾಲಗಾರ ಕಂಪನಿಗಳ ವಿರುದ್ಧ ದಿವಾಳಿ ಪ್ರಕ್ರಿಯೆ ಅಡಿ ಪರಿಗಣಿಸದಂತೆ ಸುಗ್ರೀವಾಜ್ಞೆ ಅಂಗೀಕರಿಸುವುದಾಗಿ ತಿಳಿಸಿದೆ.
ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ವಿರುದ್ಧ (ಒಂದು ಲಕ್ಷದಿಂದ ಒಂದು ಕೋಟಿವರೆಗೆ) ಹೊಸ ನಿಬಂಧನೆಯೊಂದಿಗೆ ದಿವಾಳಿ ಪ್ರಕ್ರಿಯೆ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಹೇಳಿದೆ.