ಕೋವಿಡ್-19 ಪರೀಕ್ಷೆ ಹೆಚ್ಚಳಕ್ಕೆ ಸಿಕ್ಕ ಪ್ರತಿಫಲ
Team Udayavani, Oct 20, 2020, 9:40 AM IST
ಬೆಂಗಳೂರು: ರಾಜ್ಯದಲ್ಲಿ ಕಳೆದ 19 ದಿನಗಳಿಂದ ಸರ್ಕಾರ ನಡೆಸಿದ `ಪರೀಕ್ಷೆ’ಗೆ ಉತ್ತಮ ಫಲಿತಾಂಶ ಬರುತ್ತಿದೆ.
ಹೌದು, ಅಕ್ಟೋಬರ್ನಿಂದೀಚೆಗೆ ಕೋವಿಡ್ ಸೋಂಕು ಪರೀಕ್ಷೆ ಪ್ರಮಾಣವನ್ನು ದುಪ್ಪಟ್ಟುಗೊಳಿಸಲಾಯಿತು. ಇದರಿಂದ ಆರಂಭದಲ್ಲಿ ಸೋಂಕು ಪ್ರಕರಣಗಳು ನಿರಂತರ ಹತ್ತು ಸಾವಿರ ಗಡಿದಾಟಿದವು. ಈ ಮೂಲಕ ರಾಜ್ಯದಲ್ಲಿ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಾಯಿತು ಎಂದು ಸರ್ಕಾರ ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿತ್ತು. ಆದರೆ, ಪರೀಕ್ಷೆಗಳು ಈಗ ಫಲ ನೀಡುತ್ತಿದ್ದು, ಪ್ರಕರಣಗಳ ಸಂಖ್ಯೆ ಅರ್ಧಕ್ಕರ್ಧ ಇಳಿಕೆಯಾಗಿದೆ!
ತಜ್ಞರ ಪ್ರಕಾರ, ಸಾಂಕ್ರಾಮಿಕ ಕಾಯಿಲೆ ನಿಯಂತ್ರಣದಲ್ಲಿ ಪರೀಕ್ಷೆಗಳು ಪ್ರಮುಖ ಪಾತ್ರವಹಿಸುತ್ತದೆ. ತ್ವರಿತವಾಗಿ, ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಿ ಸೋಂಕಿತರನ್ನು ಪತ್ತೆ ಮಾಡಿ, ಅವರಲ್ಲಿರುವ ವೈರಸ್ ಅನ್ನು ಚಿಕಿತ್ಸೆ ನೀಡುವ ಮೂಲಕ ಶಮನ ಮಾಡಿದರೆ ಆ ಪ್ರದೇಶದಲ್ಲಿ ಸೋಂಕು ಹರಡುವುದನ್ನು ತಪ್ಪಿಸಬಹುದು. ಇದರಿಂದ ಹೊಸ ಪ್ರಕರಣಗಳ ಸಂಖ್ಯೆಯು ಇಳಿಕೆಯಾಗುತ್ತದೆ. ಸದ್ಯ ರಾಜ್ಯ ಆರೋಗ್ಯ ಇಲಾಖೆಯು ಇದೇ ಹಾದಿ ಹಿಡಿದಿದೆ. ಕಳೆದ 19 ದಿನಗಳಿಂದ ನಿತ್ಯ ಸರಾಸರಿ ಒಂದು ಲಕ್ಷ ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಪ್ರಕರಣಳ ತೀವ್ರತೆಯನ್ನು ಹತ್ತು ಸಾವಿರದ ಆಸುಪಾಸಿನಿಂದ ಐದು ಸಾವಿರದ ಆಸುಪಾಸಿಗೆ ಇಳಿಕೆ ಮಾಡಿವೆ.
ಸೆಪ್ಟೆಂಬರ್ನಲ್ಲಿ ನಿತ್ಯ ಸರಾಸರಿ 65 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, 8,644 ಪ್ರಕರಣಗಳು ವರದಿಯಾಗುತ್ತಿದ್ದವು. ಅಕ್ಟೋಬರ್ನಿಂದ ಪರೀಕ್ಷೆ ಪ್ರಮಾಣ ಒಂದು ಲಕ್ಷಕ್ಕೆ ಹೆಚ್ಚಳವಾಯಿತು. ಇದರ ಪರಿಣಾಮ ಮೊದಲ ಹತ್ತು ದಿನ ನಿತ್ಯ ಪ್ರಕರಣಗಳು ಹತ್ತು ಸಾವಿರ ಗಡಿದಾಟಿದ್ದವು. ಆದರೆ, ಕಳೆದ ಒಂದು ವಾರದಿಂದ (ಅ.13) ಇಳಿಕೆ ಹಾದಿ ಹಿಡಿದಿದ್ದು, ಸರಾಸರಿ 7,500ಕ್ಕೆ ಇಳಿಕೆಯಾಗಿವೆ. ಅದರಲ್ಲೂ ಸೋಮವಾರ 5,018 ಕ್ಕೆ ಕುಸಿದಿವೆ.
ಇದನ್ನೂ ಓದಿ:ವ್ಹೀಲ್ಚೇರ್ನಲ್ಲಿ ಕುಳಿತು ವಿಜ್ಞಾನ ಲೋಕಕ್ಕೇ ಮಾರ್ಗದರ್ಶನ ನೀಡಿದ ಸ್ಟೀಫನ್ ಹಾಕಿಂಗ್
ಆರಂಭದಲ್ಲಿ ಆತಂಕ ಮನೆಮಾಡಿತ್ತು
ಈ ತಿಂಗಳ ಆರಂಭದಲ್ಲಿ ಸತತವಾಗಿ ಐದು ದಿನ ಹತ್ತು ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆಯಾದವು. ಈ ವೇಳೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಯಿತು. ಆದರೆ, ತಜ್ಞರು ಮಾತ್ರ ಹೆಚ್ಚು ಪರೀಕ್ಷೆ ನಡೆಸಿ ಹೆಚ್ಚು ಸೋಂಕಿತರು ಪತ್ತೆಯಾದರೆ ಮುಂದೆ ಸೋಂಕು ಕಡಿಮೆಯಾಗುತ್ತದೆ. ಪರೀಕ್ಷೆ ಪ್ರತಿಫಲ ಮುಂದೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಅದರಂತೆ ಸದ್ಯ ಪ್ರಕರಣಗಳು, ಸೋಂಕಿತರ ಸಾವು ಇಳಿಕೆಯಾಗುತ್ತಿವೆ.
ಪಾಸಿಟಿವಿಟಿ ದರವೂ ಅರ್ಧಕ್ಕರ್ಧ ಕುಸಿತ
ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ಪ್ರಮಾಣ ಶೇ.13 ರಷ್ಟು ಇತ್ತು. ಅಂದರೆ ನಿತ್ಯ ಪರೀಕ್ಷೆಗೊಳಗಾಗುವ ನೂರು ಮಂದಿಯಲ್ಲಿ 13 ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ಆದರೆ, ಅಕ್ಟೋಬರ್ನಿಂದ ಪಾಸಿಟಿವಿಟಿ ದರ ಶೇ.9ಕ್ಕೆ ಇಳಿಕೆಯಾಗಿದೆ. ಅದರಲ್ಲೂ ಕಳೆದ ಒಂದು ವಾರದಲ್ಲಿ (ಅ.13-19) ಶೇ.7ಕ್ಕೆ ಇಳಿಕೆಯಾಗಿದೆ.
ಸಾವು ಇಳಿಕೆ
ಜುಲೈ, ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ 10ರವರೆಗೂ ನಿತ್ಯ ಸರಾಸರಿ 100ಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ (ಅ.13-19ರವರೆಗೂ) 506 ಮಂದಿ ಸಾವಿಗೀಡಾಗಿದ್ದು, ನಿತ್ಯ ಸರಾಸರಿ ಸಾವಿನ ಸಂಖ್ಯೆ 72ಕ್ಕೆ ತಗ್ಗಿದೆ.
ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಶೀಘ್ರವಾಗಿ ಕೋವಿಡ್-19 ಸೋಂಕು ಪರೀಕ್ಷೆಗಳು ನಡೆಸಲಾಗುತ್ತಿದೆ. ಇದರಿಂದ ಹಂತ ಹಂತವಾಗಿ ನಿತ್ಯ ವರದಿಯಾಗುವ ಸೋಂಕು ಪ್ರಕರಣಗಳು ಮತ್ತು ಸೋಂಕಿತರ ಸಾವು ಇಳಿಕೆಯಾಗುತ್ತಿದೆ. ಒಂದು ವಾರದಿಂದ ಸಾವಿನ ಪ್ರಮಾಣ ಶೇ.1ಕ್ಕೂ ಕಡಿಮೆಯಾಗಿದ್ದು, ಪಾಸಿಟಿವಿಟಿ ದರ ಹಾಗೂ ಪ್ರಕರಣಗಳು ಇಳಿಕೆಯಾಗಿವೆ. ಮುಂದಿನ ದಿನಗಳಲ್ಲಿ ಪರೀಕ್ಷೆ ಪ್ರಮಾಣವನ್ನು 1.5 ಲಕ್ಷಕ್ಕೆ ಹೆಚ್ಚಿಸಲಾಗುವುದು.
-ಡಾ.ಸುಧಾಕರ್, ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ