ಕಾಸರಗೋಡು: ಒಬ್ಬರಿಗೆ ಸೋಂಕು
Team Udayavani, Apr 9, 2020, 12:23 PM IST
ಕಾಸರಗೋಡು: ಕೇರಳದಲ್ಲಿ ಬುಧವಾರ 9 ಮಂದಿ ಯಲ್ಲಿ ಕೋವಿಡ್ 19 ಸೋಂಕು ಖಚಿತವಾಗಿದೆ. ಅವರಲ್ಲಿ ಕಾಸರಗೋಡಿನ ಒಬ್ಬರು ಇದ್ದಾರೆ. ಇದೇ ವೇಳೆ ರಾಜ್ಯಾದ್ಯಂತ 13 ಮಂದಿ ಕೋವಿಡ್ 19 ದಿಂದ ಗುಣಮುಖರಾಗಿದ್ದಾರೆ
ಕಣ್ಣೂರು-4, ಆಲಪ್ಪುಳ-2, ಕಾಸರಗೋಡು, ತೃಶ್ಶೂರು,ಪತ್ತನಂತಿಟ್ಟ ಜಿಲ್ಲೆಗಳಲ್ಲಿ ತಲಾ ಒಬ್ಬರನ್ನು ಕೋವಿಡ್ 19 ಬಾಧಿಸಿದೆ. ಅವರಲ್ಲಿ ನಾಲ್ವರು ವಿದೇಶದಿಂದ ಬಂದವರು. ಇಬ್ಬರು ನಿಜಾಮು ದ್ದೀನ್ ಸಮಾವೇಶ ದಲ್ಲಿ ಭಾಗವಹಿಸಿದ ವರು. ಮೂವರಿಗೆ ಕೋವಿಡ್ 19
ಸೋಂಕಿತರೊಂದಿ ಗಿನ ಸಂಪರ್ಕದಿಂದ ರೋಗ ಹರಡಿದೆ. ಬುಧವಾರ ರಾಜ್ಯದಲ್ಲಿ 169 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಈ ವರೆಗೆ ಒಟ್ಟಾಗಿ 153 ಮಂದಿಗೆ ಸೋಂಕು ಖಚಿತವಾಗಿದೆ. ಜಿಲ್ಲೆಯಲ್ಲಿ 10,563 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 10,368 ಮಂದಿ ಮನೆಗಳಲ್ಲೂ, 195 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಈ ವರೆಗೆ 1,384 ಸ್ಯಾಂಪಲ್ಗಳನ್ನು ತಪಾಸಣೆಗೆ ರವಾನಿಸಲಾಗಿದೆ. 1,001 ಸ್ಯಾಂಪಲ್ಗಳ ಫಲಿತಾಂಶ ಲಭಿಸಿದೆ. 383 ಮಂದಿಯ ಫಲಿತಾಂಶ ಲಭಿಸಬೇಕಿದೆ. ನೂತನವಾಗಿ 35 ಮಂದಿಯನ್ನು ಐಸೊಲೇಶನ್ ವಾರ್ಡ್ಗಳಿಗೆ ದಾಖಲಿಸಲಾಗಿದೆ.
ಎನ್ನಾರೈಗಳಿಗೆ ಹೆಲ್ಪ್ಡೆಸ್ಕ್
ಮಾಸ್ಕ್, ಗ್ಲೌಸ್ ಮೊದಲಾದ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆದರೆ ಕಠಿನ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುನ್ನೆಚ್ಚರಿಕೆ ನೀಡಿದ್ದಾರೆ. ಅಮೆರಿಕ ಸಹಿತ ವಿವಿಧ ದೇಶ ಗಳಲ್ಲಿ ಕೇರಳಿಗರು ಕೋವಿಡ್ 19 ದಿಂದ ಸಾವಿ ಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯರಿಗಾಗಿ ಐದು ಕೋವಿಡ್ 19 ಹೆಲ್ಪ್ ಡೆಸ್ಕ್ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
69 ಪ್ರಕರಣ; 130 ಮಂದಿ ಬಂಧನ
ಲಾಕ್ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 69 ಕೇಸು ದಾಖಲಿಸಿ 130 ಮಂದಿಯನ್ನು ಬಂಧಿಸಲಾಗಿದೆ. 32 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ವರ-6, ಕುಂಬಳೆ-2, ಕಾಸರ ಗೋಡು-1, ವಿದ್ಯಾನಗರ-3, ಬದಿಯಡ್ಕ, ಬೇಕಲ, ನೀಲೇಶ್ವರ, ರಾಜಪುರಂ – ತಲಾ 5, ಆದೂರು 1, ಬೇಡಗಂ 2, ಮೇಲ್ಪರಂಬ 11, ಅಂಬಲತ್ತರ 1, ಹೊಸದುರ್ಗ 2,
ಚಂದೇರ 9, ಚೀಮೇನಿ 2, ಚಿತ್ತಾರಿಕಲ್ ಠಾಣೆಯಲ್ಲಿ 7 ಕೇಸು ದಾಖಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 543 ಕೇಸುಗಳನ್ನು ದಾಖಲಿಸಿ 838 ಮಂದಿಯನ್ನು ಬಂಧಿಸಲಾಗಿದೆ. 352 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚುವರಿ ಆಹಾರ ಧಾನ್ಯ ವಿತರಣೆ
ಕೋವಿಡ್ 19 ಹಿನ್ನೆಲೆಯಲ್ಲಿ ಎ.ಎ.ವೈ. ಮತ್ತು ಆದ್ಯತೆ ಪಡಿತರ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ ಆಹಾರ ಧಾನ್ಯಗಳನ್ನು ವಿತರಿಸುವುದಾಗಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದ್ದಾರೆ. ಕೇಂದ್ರ ಸರಕಾರದಿಂದ ಲಭಿಸುವ ಅಧಿಕ ಪಾಲು ಎ. 21ರಿಂದ ಎ.ಎ.ವೈ. ಆದ್ಯತೆ ಪಡಿತರ ಚೀಟಿಯ ಮಂದಿಗೆ ಒಬ್ಬ ಸದಸ್ಯನಿಗೆ ತಲಾ 5 ಕಿಲೋ ಅಕ್ಕಿ ವಿತರಿಸಲಾಗುವುದು. ಸಿಎಂ ಘೋಷಿಸಿದ ಒಂದು ಸಾವಿರ ರೂ. ಮೌಲ್ಯದ ಉಚಿತ ಬಹುಧಾನ್ಯ ಕಿಟ್ ಮೊದಲ ಹಂತ ದಲ್ಲಿ ಅಂತ್ಯೋದಯ ವಿಭಾಗದ ಕುಟುಂಬಗಳಿಗೆ ಎ. 9ರಿಂದ ಪಡಿತರ ಅಂಗಡಿಗಳಲ್ಲಿ ವಿತರಿಸಲಾಗುವುದು ಎಂದರು.
ಉಕ್ಕಿನಡ್ಕ ಆಸ್ಪತ್ರೆಗೆ
8 ಕೋವಿಡ್ 19 ಸೋಂಕಿತರು
ಉಕ್ಕಿನಡ್ಕದ ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ 273 ಹುದ್ದೆಗಳಿಗೆ ನೇಮಕಾತಿ ನಡೆಸಲು ಸಚಿವ ಸಂಪುಟ ಮಂಜೂರಾತಿ ನೀಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ತಿಳಿಸಿದ್ದಾರೆ. ಕಾಸರಗೋಡು ಮೆಡಿಕಲ್ ಕಾಲೇಜಿನ ಕೋವಿಡ್ ಆಸ್ಪತ್ರೆಯಲ್ಲಿ 8 ಮಂದಿ ರೋಗಿಗಳನ್ನು ದಾಖಲು ಮಾಡಲಾಗಿದೆ.
ತೆಕ್ಕಿಲ್ನಲ್ಲಿ ಟಾಟಾ ಸಮೂಹದಿಂದ ಆಸ್ಪತ್ರೆ ನಿರ್ಮಾಣ ಯೋಜನೆ
ಕಾಸರಗೋಡು: ಕೋವಿಡ್ 19 ಹಾವಳಿಯ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಅತ್ಯಾಧುನಿಕ ಆಸ್ಪತ್ರೆಯನ್ನು ಸ್ಥಾಪಿಸಲು ಟಾಟಾ ಸಮೂಹ ಸಂಸ್ಥೆ ಮುಂದೆ ಬಂದಿದೆ. ಆಸ್ಪತ್ರೆಯು 540 ಬೆಡ್, 450 ಮಂದಿಗೆ ಕ್ವಾರಂಟೈನ್ ಸೌಲಭ್ಯವನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸೂಚನೆಯಂತೆ ಪರಿಣತರ ತಂಡವೊಂದು ಕಾಸರಗೋಡಿಗೆ ಆಗಮಿಸಿ ಆಸ್ಪತ್ರೆ ತೆರೆಯಲು ಬೇಕಿರುವ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದೆ. ಚೆಮ್ನಾಡ್ ಗ್ರಾ.ಪಂ.ನ ತೆಕ್ಕಿಲ್ ಗ್ರಾಮದಲ್ಲಿ ಯೋಜನೆಗೆ ಪೂರಕವಾದ ಜಾಗವಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರ ನೇತೃತ್ವದಲ್ಲಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಶೀಘ್ರದಲ್ಲೇ ಇಲ್ಲಿ ಆಸ್ಪತ್ರೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
3 ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ
ಕಾಸರಗೋಡು: ಲಾಕ್ಡೌನ್ ಆದೇಶದ ಹಿನ್ನೆಲೆಯಲ್ಲಿ ಡಯಾಲಿಸಿಸ್ಗಾಗಿ ಮಂಗಳೂರು, ಕಣ್ಣೂರು ಪ್ರದೇಶ ಗಳ ಆಸ್ಪತ್ರೆಗಳಿಗೆ ತೆರಳಲಾಗದೇ ಇರುವ ರೋಗಿಗಳಿಗಾಗಿ ಕಾಸರಗೋಡು ಜಿಲ್ಲೆಯ ಮೂರು ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸಲಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆ, ತ್ರಿಕ್ಕರಿಪುರ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಏರ್ಪಡಿಸಲಾಗಿದೆ. ಡಯಾಲಿಸಿಸ್ ಅಗತ್ಯವಿರುವವರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಕಚೇರಿಯ ನಿಯಂತ್ರಣ ಘಟಕವನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.