ಸಾಮೂಹಿಕ ವಿವಾಹ ಕಾರ್ಯ ಶ್ಲಾಘನೀಯ
ಅಕ್ಕಲಕೋಟದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 34 ಜೋಡಿ ವಿವಿಧ ಮಠಾಧೀಶರ ಆಶೀರ್ವಾದ
Team Udayavani, Apr 4, 2019, 4:08 PM IST
ಸೊಲ್ಲಾಪುರ: ಅಕ್ಕಲಕೋಟ ವರಿಷ್ಠ ಪ್ರಾಥಮಿಕ ಶಾಲೆಯಲ್ಲಿ ನಡೆದ ಸರ್ವ ಧರ್ಮ ಸಾಮೂಹಿಕ ವಿವಾಹದಲ್ಲಿ 34 ಜೋಡಿಗಳು ಹಸೆಮಣೆ ಏರಿದರು.
ಸೊಲ್ಲಾಪುರ: ಅತ್ಯಂತ ಸರಳವಾಗಿ ನಡೆಯುವ ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಮದುವೆಯಾಗುವ ನವ ದಂಪತಿಗಳು ಪುಣ್ಯವಂತರಾಗಿದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಗೌಡಗಾಂವ ಮಠದ ಡಾ| ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅಕ್ಕಲಕೋಟ ನಗರದ ವರಿಷ್ಠ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ವಿವೇಕಾನಂದ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.
ಅದೇಷ್ಟೋ ತಂದೆ-ತಾಯಿ ತಮ್ಮ ಮಕ್ಕಳ ಮದುವೆಗೆ ಸಾಲ ಮಾಡಿ, ಆಸ್ತಿ-ಅಂತಸ್ತು ಮಾರುವ ಮೂಲಕ ನೋವುಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಸಾಮೂಹಿಕ ವಿವಾಹ ಸಮಾರಂಭದಿಂದ ಯಾರಿಗೂ ತೊಂದರೆಯಾಗದಂತೆ ಅತ್ಯಂತ ಸರಳವಾಗಿ ನಡೆಯುವ ಸಾಮೂಹಿಕ ವಿವಾಹ ಸಮಾರಂಭ ಎಲ್ಲರಿಗೂ ಮಾದರಿಯಾಗಿದೆ.
ಇಂತಹ ಜನಪರ ಕಾರ್ಯಕ್ರಮಗಳನ್ನು ವಿವೇಕಾನಂದ ಪ್ರತಿಷ್ಠಾನ ಅಧ್ಯಕ್ಷ ಸಚಿನ ಕಲ್ಯಾಣಶೆಟ್ಟಿ ಮಾಡುವ ಮೂಲಕ ಬಡವರ ಬಾಳಿಗೆ ಬೆಳಕಾಗುತ್ತಿದ್ದಾರೆ. ನವ ದಂಪತಿಗಳ ಬಾಳು ಉಜ್ವಲವಾಗಲಿ. ತಂದೆ-ತಾಯಿ, ಗುರುವಿನ ಸೇವೆಯಲ್ಲಿ ಮುನ್ನಡೆದಾಗ ಬದುಕು ಸಾರ್ಥಕವಾಗುತ್ತದೆ ಎಂದರು.
ಈ ಸರ್ವಧರ್ಮಿಯ ಸಾಮೂಹಿಕ ವಿವಾಹ ಸಮಾರಂಭದಲ್ಲಿ 34 ಜೋಡಿಗಳು ಹಸೆಮಣೆ ಏರಿದರು. ಸಮಾರಂಭದಲ್ಲಿ ಮದುವೆ ಮಾಡಿಕೊಂಡ ಜೋಡಿಗಳಿಗೆ ಬಟ್ಟೆ, ವಧುವಿಗೆ ತಾಳಿ, ಕಾಲುಂಗರ ಮತ್ತಿತರ ವಸ್ತುಗಳನ್ನು ಪ್ರತಿಷ್ಠಾನದ ವತಿಯಿಂದ ನೀಡಿದರು. ಅಲ್ಲದೇ ವಧು-ವರರಿಗೆ ವೈದ್ಯಕೀಯ ಸಲಹೆ, ಜೀವ ವಿಮೆ ಹಾಗೂ ಹೆಣ್ಣು ಮಗು ಜನಿಸಿದರೆ ಎರಡು ಸಾವಿರ ರೂ. ಠೇವಣಿಯ ಬಾಂಡ್ ನೀಡಲಾಗುತ್ತದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಸಚಿನ ಕಲ್ಯಾಣಶೆಟ್ಟಿ ಹೇಳಿದರು.
ಅಕ್ಕಲಕೋಟ ವಿರಕ್ತಮಠದ ಬಸವಲಿಂಗ ಶ್ರೀಗಳು, ಗೌಡಗಾವದ ಡಾ| ಜಯಸಿದ್ದೇಶ್ವರ ಶಿವಾಚಾರ್ಯರು, ನಾಗಣಸೂರದ ಶ್ರೀಕಂಠ ಶಿವಾಚಾರ್ಯರು, ಮಂದ್ರೂಪದ ರೇಣುಕ ಶಿವಾಚಾರ್ಯರು, ಮಾದಾನ ಹಿಪ್ಪರಗಾದ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಶ್ರೀಗಳು ಆಗಮಿಸಿ ನವ ದಂಪತಿಗಳಿಗೆ ಆಶೀರ್ವದಿಸಿ ಶುಭಾಶಯ ಕೋರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಹಾಜಿ ಪವಾರ, ಯುವ ನಾಯಕ ರೋಹನ ದೇಶಮುಖ, ಮೇಯರ್ ಶೋಭಾ ಬನಶೆಟ್ಟಿ, ಜಿಪಂ ಉಪಾಧ್ಯಕ್ಷ ಶಿವಾನಂದ ಪಾಟೀಲ, ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆಜಯ ಭೋಸಲೆ, ದೇವಸ್ಥಾನ ಅಧ್ಯಕ್ಷ ಮಹೇಶ ಇಂಗಳೆ, ಆನಂದ ತಾನವಡೆ, ಮಾಜಿ ನಗರಾಧ್ಯಕ್ಷೆ ಡಾ| ಸುವರ್ಣ ಮಲಗೊಂಡ, ಮಹಾನಂದಾ ಸ್ವಾಮಿ, ಉಪ ನಗರಾಧ್ಯಕ್ಷ ಯಶವಂತ ದೋಂಗಡೆ, ಸಂಘರ್ಷ ಸಮಿತಿ ತಾಲೂಕಾಧ್ಯಕ್ಷ ದೀಲಿಪ ಸಿದ್ಧೆ, ಜಯಶೇಖರ ಪಾಟೀಲ, ಅವಿನಾಶ ಮಡಿಖಾಂಬೆ, ಸಂಜಯ ದೇಶಮುಖ, ಸುಧಿಧೀರ ಮಾಳಶೆಟ್ಟಿ, ನಗರ ಸೇವಕ ಮೀಲನ ಕಲ್ಯಾಣಶೆಟ್ಟಿ, ಸುರೇಖಾ ಹೋಳಿಕಟ್ಟಿ, ಸುವರ್ಣಾ ಮಲಗೊಂಡ, ಜಯಶೇಖರ ಪಾಟೀಲ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.
ಶ್ರೀಮಂತ ರಾಣಿ ನಿರ್ಮಲಾ ರಾಜೆ ಕನ್ಯಾ ಪ್ರಶಾಲೆ ಆವರಣದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 4ರವರೆಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು ಸುಮಾರು 30 ಸಾವಿರ ಜನರು ಭೋಜನ ಸ್ವೀಕರಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ಸುಮಾರು 27 ವಿವಿಧ ಸಮಿತಿ ನೇಮಿಸಲಾಗಿದ್ದು ನಗರ ಸೇವಕ ಮಿಲನ ಕಲ್ಯಾಣಶೆಟ್ಟಿ, ವಿಲಾಸ ಕೋರೆ, ಶಶಿಕಾಂತ ಲಿಂಬಿತೋಟೆ, ಮಲ್ಲಿನಾಥ ಆಳಗಿ, ಮಲ್ಲಿಕಾರ್ಜುನ ಮಸೂತಿ, ಬಾಬುರಾವ್ ಪುಕಾಳೆ, ಬಾಳಾ ಶಿಂಧೆ, ಸ್ವಾಮಿನಾಥ ಧರಣೆ, ಗುರುಪಾದಪ್ಪ ಆಳಗಿ, ಚಂದ್ರಕಾಂತ ದಸಲೆ, ರವಿ ಬಿರಾಜದಾರ ಸೇರಿದಂತೆ ಮೊದಲಾದವರು ಶ್ರಮಿಸಿದರು.