ಕಾಮಗಾರಿ ವಿಳಂಬ; ಪ್ರವಾಸಿಗರಿಗೆ ಸಂಕಷ್ಟ
Team Udayavani, May 8, 2019, 12:22 PM IST
ತೀರ್ಥಹಳ್ಳಿ: ಆಗುಂಬೆ ಘಾಟಿಯ ಕಾಮಗಾರಿ ನಡೆಯುತ್ತಿರುವುದು.
ತೀರ್ಥಹಳ್ಳಿ: ಶಿವಮೊಗ್ಗ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಘಾಟಿಯಾದ ಆಗುಂಬೆ ಘಾಟಿಯ ರಸ್ತೆ ಹಾಗೂ ತಡೆಗೋಡೆ ಕಾಮಗಾರಿ ವಿಳಂಬವಾಗಿದ್ದು ಮೇ 20ರ ನಂತರವೇ ಬಸ್ ಹಾಗೂ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಮತ್ತಷ್ಟು ಸಮಸ್ಯೆ ಉಂಟಾಗಿದೆ.
ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗೆ ಸೇರಿರುವ ಘಾಟಿನ ತಿರುವುಗಳ ಕಾಮಗಾರಿ ಭರದಿಂದ ಸಾಗುತ್ತಿದೆ. ಕೆಲವು ಅಪಾಯಕಾರಿ ತಿರುವುಗಳಲ್ಲಿ ಹಾಗೂ ಕಡಿದಾದ ಗುಡ್ಡ ಇರುವ ಜಾಗಗಳಲ್ಲಿ ಗುಣಮಟ್ಟದ ಕಾಕ್ರೀಟ್ ಕಾರ್ಯ ನಡೆಯುತ್ತಿದೆ.ಆಗುಂಬೆ ಘಾಟಿಯ ಪ್ರಮುಖ ಆಕರ್ಷಣೆಯ ಕೇಂದ್ರವಾದ ಸೂರ್ಯಾಸ್ತಮಾನ ಕೇಂದ್ರದಲ್ಲಿ 25 ಮೀಟರ್ ಕಾಕ್ರೀಟ್ ಹಾಕಲಾಗಿದ್ದು ಕ್ಯೂರಿಂಗ್ ಕೆಲಸ ನಡೆಯುತ್ತಿದೆ. ಕಾಕ್ರೀಟ್ ರಸ್ತೆಗೆ ನೀರು ಹಾಕುವ ಕ್ಯೂರಿಂಗ್ ಕೆಲಸಕ್ಕೆ ಕನಿಷ್ಠ 21 ದಿನಗಳು ನಡೆಯಬೇಕು. ಈ ಸಂದರ್ಭದಲ್ಲಿ ವಾಹನಗಳಿಗೆ ಸಂಚರಿಸಲು ಅವಕಾಶ ನೀಡಿದರೆ ರಸ್ತೆಗೆ ಧಕ್ಕೆಯಾಗುತ್ತದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು, ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಇನ್ನರೆಡು ದಿನಗಳಲ್ಲಿ ಬೈಕ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ರಸ್ತೆಯ ಸ್ಥಿತಿಗತಿಯನ್ನು ಪರಿಶೀಲಿಸಿ ಲಘು ವಾಹನಗಳಿಗೆ ಅವಕಾಶ ನೀಡಲಾಗುವುದು. ತುರ್ತುಸೇವೆಯ ಆ್ಯಂಬುಲೆನ್ಸ್ಗಳಿಗೆ ಕೆಲವೇ ದಿನಗಳಲ್ಲಿ ಅವಕಾಶ ಮಾಡಿಕೊಡಬೇಕು ಎಂಬುದು ಹಲವರ ಆಗ್ರಹವಾಗಿದೆ.
ಈಗಾಗಲೆ ಏ.10ರಿಂದ ಕಾಮಗಾರಿ ಆರಂಭಗೊಂಡು ತಿಂಗಳು ಮುಗಿಯುತ್ತ ಬಂದಿದೆ. ಬಸ್ ಸಂಚಾರ ಹಾಗೂ ಭಾರೀ ವಾಹನ ಓಡಾಟ ಬೇರೆ ಮಾರ್ಗದಲ್ಲಿ ಸಂಚರಿಸುತ್ತಿರುವುದರಿಂದ ಆಗುಂಬೆ ಪಟ್ಟಣದ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಬ್ದಗೊಂಡಿದೆ. ಜೊತೆಗೆ ಮಣಿಪಾಲ್ ಆಸ್ಪತ್ರೆಗೆ ತೆರಳುವ ರೋಗಿಗಳು ಹಾಗೂ ಸಾರ್ವಜನಿಕರು ಸಂಕಷ್ಟದೊಂದಿಗೆ ಬೇರೆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾರೆ. ಆದಷ್ಟು ಬೇಗ ಆಗುಂಬೆ ಘಾಟಿ ಕಾಮಗಾರಿ ಮುಗಿದು ಸಂಚಾರ ವ್ಯವಸ್ಥೆ ಮೊದಲಿನಂತಾಗಲಿ ಎಂದು ಮಲೆನಾಡಿಗರು ಕಾಯುತ್ತಿದ್ದಾರೆ.
ರಾಂಚಂದ್ರ ಕೊಪ್ಪಲು