ಗ್ರಾಪಂ ನಿರ್ಲಕ್ಷ್ಯ: ಅರಳದಿನ್ನಿಯಲ್ಲಿ ಸ್ವಚ್ಛತೆ ಮರೀಚಿಕೆ
Team Udayavani, Jun 24, 2019, 1:18 PM IST
ಆಲಮಟ್ಟಿ: ಅರಳದಿನ್ನಿ ಗ್ರಾಮದಲ್ಲಿ ಚರಂಡಿಗಳು ತುಂಬಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮೂಡಿದೆ.
ಆಲಮಟ್ಟಿ: ಗ್ರಾಪಂ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಅರಳದಿನ್ನಿಯಲ್ಲಿ ಎಲ್ಲ ಚರಂಡಿಗಳು ತುಂಬಿದ್ದು ರೋಗಗಳು ಬರಲು ಕಾರಣವಾಗುತ್ತಿವೆ. ಅವುಗಳನ್ನು ತೆರವುಗೊಳಿಸಿ ನೈರ್ಮಲ್ಯ ಗ್ರಾಮವನ್ನಾಗಿ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಆಲಮಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅರಳದಿನ್ನಿ ಗ್ರಾಮದಲ್ಲಿರುವ ಎಲ್ಲ ಚರಂಡಿಗಳು ತುಂಬಿ ರಸ್ತೆಯಲ್ಲಿ ಕೊಳಕು ನೀರು ಬರುತ್ತಿದೆ. ಚರಂಡಿಯಲ್ಲಿ ಹಂದಿ-ನಾಯಿಗಳು ಹೊರಳಾಡುತ್ತಿದ್ದು ಹಲವಾರು ರೋಗಗಳು ಬರಲು ಕಾರಣವಾಗುವಂತಾಗಿದೆ.
ಈ ಹಿಂದೆ ಚರಂಡಿಗಳು ತುಂಬಿ ಕೊಳಕು ವಾಸನೆ ಬರುತ್ತಿತ್ತಲ್ಲದೇ ಚರಂಡಿಯಲ್ಲಿ ಹಲವಾರು ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ಗ್ರಾಮಸ್ಥರು ಚಿಕೂನ್ ಗುನ್ಯಾ ಹಾಗೂ ಮಲೇರಿಯಾ, ಡೆಂಘೀ ಜ್ವರ, ಮೆದುಳು ಜ್ವರ ಬರುವಂತಾಗಿ ಇಡಿ ಗ್ರಾಮವೇ ನರಕ ಯಾತನೆ ಅನುಭವಿಸುವಂತಾಗಿತ್ತು. ಆದ್ದರಿಂದ ಕೂಡಲೇ ಗ್ರಾಪಂನವರು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು.
ಗ್ರಾಮದಿಂದ ಹೊರ ಹೋಗಬೇಕಾದರೆ ಎಲ್ಲ ರಸ್ತೆಗಳಲ್ಲಿ ಮುಳ್ಳುಕಂಟಿಗಳು ತುಂಬಿವೆ. ಅವುಗಳನ್ನು ತೆರವುಗೊಳಿಸಬೇಕು ಮತ್ತು ಅರಳದಿನ್ನಿ-ಬೇನಾಳ ರಸ್ತೆಯನ್ನು ದುರಸ್ತಿಗೊಳಿಸಬೇಕು ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಪಂ ಮಾಜಿ ಸದಸ್ಯರಾದ ಕಾಶಿಮಸಾಬ ನಿಡಗುಂದಿ, ವಿಲಾಸ ಧಣಿವೆ, ಮಹಾಂತೇಶ ಬೆಳಗಲ್ಲ, ಹನುಮಂತ ಅಯ್ಯಪ್ಪ ಮಾದರ ಹಾಗೂ ಲಕ್ಷ್ಮಣ ಪವಾರ ಒತ್ತಾಯಿಸಿದ್ದಾರೆ.