ಮುಂಗಾರಿಗೆ ನೆರೆ-ಹಿಂಗಾರಿಗೆ ಬರ
ರೈತರಿಗೆ ತಪ್ಪದ ಸಂಕಷ್ಟ•ರೈತರ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ಬದುಕಿನಲ್ಲಿ ಆವರಿಸಿದೆ ಕತ್ತಲು
Team Udayavani, Aug 12, 2019, 1:27 PM IST
ಅಂಕೋಲಾ: ನೆರೆ ಪೀಡಿತ ಕೃಷಿ ಭೂಮಿ.
ಅರುಣ ಶೆಟ್ಟಿ
ಅಂಕೋಲಾ: ಹಿಂಗಾರು ಬೆಳೆಗೆ ಬರ ಮುಂಗಾರು ಬೆಳೆಗೆ ನೆರೆ ಸಂಕಷ್ಟ ಇದರಿಂದಾಗಿ ರೈತರ ಬೆಳೆ ನೀರಿನಲ್ಲಿ ಕೊಚ್ಚಿ ಹೊಗಿ ಬದುಕಿನಲ್ಲಿ ಕತ್ತಲಾವರಿಸಿದೆ. ತಾಲೂಕಿನಲ್ಲಿ ಸಾವಿರಾರು ಎಕರೆ ಕೃಷಿ ಬೆಳೆ ಹಾನಿಯಾಗಿದೆ.
ಕಳೆದೊಂದು ವಾರದಿಂದ ಅಬ್ಬರಿಸಿದ ಆಶ್ಲೇಷಾ ಮಳೆಗೆ ಜೀವನದಿ ಗಂಗಾವಳಿ ತಟದ ಪ್ರದೇಶ ವಾಸಿಗಳ ಬದುಕು ಹೈರಾಣಾಗಿದೆ. ನರೆ ಇಳಿದಿದೆ. ಆದರೆ ಎಲ್ಲವನ್ನು ತನ್ನೊಡಲಿಗೆ ಸೇರಿಸಿಕೊಂಡಿದೆ. ಹೊಲಗದ್ದೆಯಲ್ಲಿ ಬತ್ತದ ಸಸಿ ಕಾಣುವಲ್ಲಿ ರಾಡಿ ಮಣ್ಣಿನ ರಾಶಿಯೆ ಕಾಣುತ್ತಿದೆ. ಇದರಿಂದಾಗಿ ತಾಲೂಕಿನಲ್ಲಿ ಸುಮಾರು ಶೇ.60 ರಷ್ಟು ಕೃಷಿ ಬೆಳೆ ನಾಶವಾಗಿ ಕೊಟ್ಯಂತರ ರೂ. ಹಾನಿ ಉಂಟಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದಿದೆ.
ನೀರು ಪಾಲಾದ ಭತ್ತ: ರೈತನಿಗೆ ಕೃಷಿಯೆ ಜೀವಾಳ. ಮಳೆ ಅಬ್ಬರದಿಂದಾಗಿ ಶ್ರಮಪಟ್ಟು ಬಿತ್ತಿದ ಭತ್ತದ ಸಸಿಗಳು ನೀರು ಪಾಲಾಗಿದೆ. ಕಬ್ಬು ನೆಲಕ್ಕೆ ಹಾಸಿ ಮಲಗಿದೆ. ಅಡಕೆ ಬಾಳೆ ಗಿಡಗಳು ಕೊಚ್ಚಿ ಹೋಗಿದೆ. ಹೀಗೆ ಎಲ್ಲವು ಅನ್ನದಾತನ ಕೈಗೆ ಕೊಡಲಿ ಏಟು ನೀಡಿದ್ದು, ಜೀವನ ನಿರ್ವಹಣೆ ಹೇಗೆ ಎಂಬ ಚಿಂತೆ ಮನೆ ಮಾಡಿದೆ.
ಜೀವನದಿ ಗಂಗಾವಳಿಗೆ ಪ್ರವಾಹ ಅಬ್ಬರಿಸಿದೆ. ಬಡತನದ ನಡುವೆಯೇ ಚಿಕ್ಕ ಸೂರು ಕಟ್ಟಿಕೊಂಡ ಜನತೆಗೆ ವರುಣನ ಆರ್ಭಟ ನಲಗುವಂತೆ ಮಾಡಿದೆ. ತಾಲೂಕಿನಲ್ಲಿ 50ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿದ್ದು, ಸಂತ್ರಸ್ತರನ್ನು ಅನಾಥರನ್ನಾಗಿಸಿದೆ.
ತುತ್ತು ಅನ್ನಕ್ಕೂ ತತ್ವಾರ: ತಾಲೂಕಾಡಳಿತ ತೆರೆದ ಗಂಜಿ ಕೇಂದ್ರವು, ನೆರೆ ಇಳಿಯವವರೆಗೆ ಅನ್ನ, ಆಶ್ರಯ ನೀಡಲಿದೆ. ನಂತರ ಸಂತ್ರಸ್ತರು ತಾವು ಕಟ್ಟಿಕೊಂಡ ಸೂರಿಗೆ ಹೋಗಲೇಬೇಕು. ಆದರೆ ಇರುವ ಸೂರು ಸಹ ಪಾತಾಳಕ್ಕೆ ಮುಖ ಮಾಡಿದೆ. ಹೋಗುವುದಾದರು ಎಲ್ಲಿಗೆ ಎಂಬ ಚಿಂತೆ ಕಾಡತೊಡಗಿದೆ. ಸರಕಾರ ಸಮಿಕ್ಷೆ ನಡೆಸಿ ವರದಿ ನೀಡಿ ಪರಿಹಾರ ನೀಡುವುದು ತಿಂಗಳು ಕಳೆಯುತ್ತದೆ. ಅಲ್ಲಿವರೆಗೆ ಆಶ್ರಯವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇರುವ ಆಹಾರ ಪದಾರ್ಥಗಳು ನೀರಿಗೆ ಕೊಚ್ಚಿ ಹೋಗಿ, ಹೊಟ್ಟೆಯ ಮೇಲೆ ತಣ್ಣೀರು ಪಟ್ಟಿ ಎಂಬ ಗತಿಯಾಗಿದೆ.
ಮನಕಲುಕುವ ಸ್ಥಿತಿ: ನೆರೆ ಪ್ರದೇಶಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಕರುಣಾಜನಕ ಸ್ಥಿತಿ ಎಂಥವರನ್ನು ಮನಕಲುಕಿಸುವಂತೆ ಮಾಡಿತ್ತು. ಬಿದ್ದ ಮನೆಯ ಆವಾರದಲ್ಲಿ ಗೂಡಿನ ಅಂಚಿನಲ್ಲೆ ಮುದುಡಿಕೊಂಡು, ಪ್ಲಾಸ್ಟಿಕ್ ಹೊದಿಕೆಯಲ್ಲೆ ಆಶ್ರಯ ಪಡೆದಿದ್ದು ಮಮ್ಮಲಮರಗುವಂತೆ ಮಾಡುತ್ತದೆ.
ಈ ನೆರೆ ಕರುಳ ಬಳ್ಳಿಯ ಸಂಬಂಧಕ್ಕೂ ಭಂಗ ತಂದಿದೆ. ತಂದೆ- ತಾಯಿ ಒಂದೆಡೆ, ಮಕ್ಕಳು ಯಾರೋ ಸಂಬಂಧಿಕರ ಮನೆಯಲ್ಲಿ ಇರುವುದು ಕಂಡು ಬಂದಿದೆ.