ತಳಿರು ತೋರಣ ಕಟ್ಟಿ ಮಕ್ಕಳ ಸ್ವಾಗತ
ಜಿಲ್ಲಾದ್ಯಂತ 6ರಿಂದ 10-ಪಿಯು ಕಾಲೇಜು ಆರಂಭಮೊದಲ ದಿನ 9-10ನೇ ತರಗತಿ ಮಕ್ಕಳೇ ಹೆಚ್ಚು
Team Udayavani, Jan 2, 2021, 1:35 PM IST
ಬಾಗಲಕೋಟೆ: ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ 2020, ಮಾ.16ರಿಂದ ಸ್ಥಗಿತಗೊಂಡಿದ್ದ ಜಿಲ್ಲೆಯ ಶಾಲೆಗಳು ಹೊಸ ವರ್ಷದ ಮೊದಲ ದಿನವೇ ಆರಂಭಗೊಂಡಿದ್ದು, ಬಹುತೇಕ ಶಾಲೆಗಳ ಆವರಣದಲ್ಲಿ ಮಕ್ಕಳ ಕಲರವ ಕಂಡು ಬಂತು.
ಹೌದು, ಕೋವಿಡ್ ವೈರಸ್, ರೂಪಾಂತರ ಕೋವಿಡ್ ಆತಂಕದ ಮಧ್ಯೆಯೂ ಬರೋಬ್ಬರಿ 9 ತಿಂಗಳು, 24 ದಿನಗಳ ಬಳಿಕ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳು, ಪದವಿಪೂರ್ವ ಕಾಲೇಜುಗಳು ಆರಂಭಗೊಂಡಿವೆ. ಶಾಲೆಯ ಮುಖ್ಯ ಗೇಟ್ಗೆ ಟೆಂಗಿನ ತಳಿರು-ತೋರಣ ಕಟ್ಟಿ, ವಿಶೇಷ ಅಲಂಕಾರ ಮಾಡಲಾಗಿತ್ತು.
ಎಲ್ಲೆಡೆ ಮುಂಜಾಗ್ರತೆ: ಜಿಲ್ಲೆಯಾದ್ಯಂತ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು, ಶುಕ್ರವಾರದಿಂದ ಆರಂಭಗೊಂಡಿದ್ದು, ಇದಕ್ಕೂ ಮೊದಲು ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಯಿತು. 1ರಿಂದ 5ನೇ ತರಗತಿ ಮಕ್ಕಳಿಗೆತರಗತಿ ಆರಂಭಿಸಿಲ್ಲ. ಪ್ರತಿಯೊಂದು ಶಾಲೆಗೂ ಮಕ್ಕಳು ಬಂದಾಗ ಮುಖ್ಯ ಗೇಟ್ ಒಳಗಡೆ ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ನಡೆಸಲಾಯಿತು. ಬಳಿಕ ಪ್ರತಿ ಮಕ್ಕಳಿಗೂ ಸ್ಯಾನಿಟೈಸರ್ ಹಾಕಿದ್ದು, ಮಾಸ್ಕ್ ಇಲ್ಲದೇ ಶಾಲೆಗೆ ಬಂದಿದ್ದ ಮಕ್ಕಳಿಗೆ ದಾನಿಗಳು ಹಾಗೂ ಎಸ್ಡಿಎಂಸಿ ನೆರವಿನೊಂದಿಗೆ ಮೊದಲೇ ಖರೀದಿಸಿದ್ದ ಮಾಸ್ಕ್ ವಿತರಿಸಿ ಬಳಿಕಪ್ರತಿ ಕೊಠಡಿಯಲ್ಲಿ 15 ಮಕ್ಕಳಂತೆ ಜಿಗ್ಜಾಗ್ ಮಾದರಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಕೂಡಿಸಿ, ತರಗತಿ ಆರಂಭಿಸಲಾಯಿತು.
ಖಾಸಗಿ ಶಾಲೆಗಳು ಈವರೆಗೆ ಆನ್ಲೈನ್ ತರಗತಿ ನೀಡಿದ್ದು, ಸರ್ಕಾರಿ ಶಾಲೆಗಳ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಇರಲಿಲ್ಲ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚು ಇತ್ತು. ಖಾಸಗಿ ಶಾಲೆಗಳು, ಆನ್ಲೈನ್ ಮತ್ತು ಆಫ್ಲೈನ್ ಎರಡೂ ತರಗತಿಗಳಅವಕಾಶ ನೀಡಿದ್ದು, ಮೊದಲ ದಿನ ಅಷ್ಟೊಂದು ಮಕ್ಕಳು ಕಂಡು ಬರಲಿಲ್ಲ. ಆದರೆ, ಸರ್ಕಾರಿ ಶಾಲೆಗಳಲ್ಲಿ6ರಿಂದ 8 (ಹಿರಿಯ ಪ್ರಾಥಮಿಕ ಶಾಲೆ), 8ರಿಂದ 10 ಪ್ರೌಢಶಾಲೆ, ಕಾಲೇಜುಗಳಲ್ಲಿ ಪ್ರಥಮ-ದ್ವಿತೀಯ ಪಿಯು ಮಕ್ಕಳು ಶೇ.50 ಹಾಜರಾಗಿದ್ದರು.
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಕ್ಕೊಂದು ತರಗತಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೊದಲ ದಿನ ಎಲ್ಲೆಡೆ 6ರಿಂದ 8ನೇ ತರಗತಿ ಮಕ್ಕಳು ಶಾಲೆಗೆ ಬಂದಾಗ ಅವರಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್, ಮಾಸ್ಕ್ ವಿತರಣೆ ಎಲ್ಲವೂ ನಡೆದಿತ್ತು. ಸಾಮಾಜಿಕಅಂತರ, ಗುಂಪು-ಗುಂಪು ಮಕ್ಕಳು ಓಡಾಡುವುದನ್ನು ಮಾಡದಂತೆ ತಿಳಿವಳಿಕೆ ಹೇಳಲಾಗಿದೆ.
ಸೋಮವಾರದಿಂದ ಮೊದಲ ದಿನ 6ನೇ ತರಗತಿ ಮಕ್ಕಳಿಗೆ ಪಾಠ ಮಾಡಿದರೆ, ಮರುದಿನ 7, ಅದರ ಮರುದಿನ 8ನೇ ತರಗತಿ ನಡೆಯಲಿವೆ. ಮೂರು ತರಗತಿ ಮಕ್ಕಳಿಗೆ ಎರಡು ದಿನ ರಜೆ ನೀಡಲಿದ್ದು, ಆ ಅವಧಿಯಲ್ಲಿ ಅವರಿಗೆ ಹೋಂ ವರ್ಕ್ ನೀಡುವಂತೆ ಸರ್ಕಾರ ಕೂಡ ನಿರ್ದೇಶನ ನೀಡಿದೆ. ಇದೇ ಮಾರ್ಗಸೂಚಿಯಡಿ ವಿದ್ಯಾಗಮ-2ನೇ ಯೋಜನೆಯಡಿ ತರಗತಿ ನಡೆಸಲು ಸರ್ಕಾರ ನಿರ್ದೇಶನ ನೀಡಿದೆ.
ಖುಷಿಯಾದ ಮಕ್ಕಳು: ಬರೋಬ್ಬರಿ 9ತಿಂಗಳು, 24 ದಿನಗಳಿಂದ ರಜೆಯ ಲ್ಲಿದ್ದ ಮಕ್ಕಳು ದೀರ್ಘ ಕಾಲದ ಬಳಿಕ ಶಾಲಾ ಆವರಣಕ್ಕೆ ಬಂದರು. ಗ್ರಾಮೀಣ ಭಾಗದಲ್ಲಂತೂ ನಮ್ಮ ಶಾಲೆ ಶುರುವಾಯ್ತು ಎಂದು ಓಡೋಡಿ ಮಕ್ಕಳು ಶಾಲೆಯತ್ತ ಬರುತ್ತಿದ್ದರು.ಪ್ರತಿಯೊಬ್ಬ ಮಕ್ಕಳಿಂದಲೂ ಪಾಲಕರ ಒಪ್ಪಿಗೆ ಪಡೆಯುವುದು ಕಡ್ಡಾಯಗೊಳಿಸಲಾಗಿತ್ತು.ಹೀಗಾಗಿ ಮೊದಲ ದಿನ ಮಕ್ಕಳ ಜತೆಗೆ ಪಾಲಕರೂ ಶಾಲೆಗೆ ಬಂದು ಒಪ್ಪಿಗೆ ನೀಡಿದ್ದಾರೆ. ಇನ್ನೂ ಕೆಲವರು ಮೊದಲ ದಿನ ಎಷ್ಟು ಮಕ್ಕಳು ಬರುತ್ತಾರೆ, ಏನೇನು ಸಮಸ್ಯೆ ಆಗುತ್ತದೆ ನೋಡಿಕೊಂಡು ಸೋಮವಾರದಿಂದ ಕಳುಹಿಸಿದರಾಯ್ತು ಎಂದು ಮೊದಲ ದಿನ ಶಾಲೆಗೆ ಮಕ್ಕಳನ್ನು ಕಳುಹಿಸಿರಲಿಲ್ಲ.
ಜಿಲ್ಲೆಯಾದ್ಯಂತ 6ರಿಂದ 10ನೇ ತರಗತಿ ಶಾಲೆಗಳು ಆರಂಭಗೊಂಡಿವೆ. ಮೊದಲ ದಿನ ಎಸ್ಸೆಸ್ಸೆಲ್ಸಿಯ ಶೇ.50 ಮಕ್ಕಳು ಬಂದರೆ, 9ನೇ ತರಗತಿಯ ಶೇ.60 ಮಕ್ಕಳು ಬಂದಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲ ಮಾರ್ಗಸೂಚಿ ಪಾಲನೆಯೊಂದಿಗೆ ತರಗತಿ ಆರಂಭಿಸಲಾಗಿದೆ. –ಶ್ರೀಶೈಲ ಎಸ್. ಬಿರಾದಾರ, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ
ಶಾಲಿಗಿ ಬರ್ಲಾದೆ ಬಹಳ ದಿನಾ ಆಗಿತ್ತು. ಮನ್ಯಾಗ್ ಕುಂತು ಓದತಿದ್ವಿ. ಏನರೇ ತಿಳಿಲಿಲ್ಲ ಅಂದ್ರ ನಮ್ಮ ಸರ್ಗೆ ಫೋನ್ ಮಾಡಿ ಕೇಳತಿದ್ವಿ. ಇಂದು ಮತ್ ಶಾಲಿ ಚಾಲೂ ಆಗೈತಿ. ಖುಷಿಯಾಗಿ ಬಂದಿದ್ದೇವೆ. ಈ ವರ್ಷನಾನು 10ನೇ ತರಗತಿ ಇದ್ದು, ಫಸ್ಟ್ ಕ್ಲಾಸ್ ನಾಗ್ ಪಾಸ್ ಆಗ್ಬೇಕು ಅಂತ ಮನ್ಯಾಗ್ ಓದೀನಿ. ಗಣಿತ, ಇಂಗ್ಲಿಷ್ ಬಗ್ಗೆ ಸರ್ಗೆ ಬಾಳ್ ಸಾರಿ ಫೋನ್ ಮಾಡತಿದ್ವಿ. ಈಗ ಶಾಲಿ ಚಾಲೂ ಆಗಿದ್ದು, ಖುಷಿ ಆಗೈತಿ. –ಕಸ್ತೂರಿ ಮುದಬಸಪ್ಪಗೋಳ, 10ನೇ ತರಗತಿ ವಿದ್ಯಾರ್ಥಿನಿ
ವಿದ್ಯಾಗಮ-2 ಯೋಜನೆಯಡಿ ಶಾಲೆ ಆರಂಭಗೊಂಡಿದ್ದು, 9 ಮತ್ತು 10ನೇ ತರಗತಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. 10ನೇ ತರಗತಿ ಮಕ್ಕಳಿಗೆ ಒಂದು ಕೊಠಡಿಯಲ್ಲಿ 15 ಮಕ್ಕಳನ್ನು ಜಿಗ್ಜ್ಯಾಗ್ ಮಾದರಿಯಲ್ಲಿ ಕೂಡಿಸಿದ್ದು, 9ನೇ ತರಗತಿ ಮಕ್ಕಳಿಗೆ ಶಾಲಾ ಆವರಣದ ಗಿಡದ ಕೆಳಗೆ ಸಾಮಾಜಿಕ ಅಂತರದೊಂದಿಗೆ ತರಗತಿ ನಡೆಸಲಾಗಿದೆ. ಶಾಲೆಗೆ ಬರುವ ಮಗುವಿಗೆ ಮೊದಲು ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್, ಮಾಸ್ಕ್ ನೀಡಿ ಬಳಿಕ ಹೂ ನೀಡಿ ಸ್ವಾಗತಿಸಲಾಯಿತು. ಈ ಪ್ರಕ್ರಿಯೆಗೆ ಮಕ್ಕಳು, ಪಾಲಕರು ಖುಷಿಪಟ್ಟರು. – ಎಸ್.ಎನ್. ಘಂಟಿ, ಮುಖ್ಯೋಪಾಧ್ಯಾಯ, ಕರ್ನಾಟಕ ಪಬ್ಲಿಕ್ ಸ್ಕೂಲ್, ಮುಗಳೊಳ್ಳಿ
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ