ಜಿಲ್ಲೆಯಲ್ಲಿ ಕೋವಿಡ್ ಗೆ 9ನೇ ಬಲಿ
Team Udayavani, Jul 8, 2020, 2:56 PM IST
ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಾನಾಪುರ ತಾಂಡಾದಲ್ಲಿ ಮೃತಪಟ್ಟಿದ್ದ ಯುವಕನಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಮೃತಪಟ್ಟಿದ್ದ ಯುವಕನ ಗಂಟಲು ದ್ರವ ಮಾದರಿ ಪರೀಕ್ಷೆ ವರದಿಯಲ್ಲಿ ಕೋವಿಡ್ ಪಾಸಿಟಿವ್ ದೃಢವಾಗಿದ್ದು, ಕೋವಿಡ್ ನಿಯಮಾವಳಿಯಂತೆ ಅಂತ್ಯಕ್ರಿಯೆ ನಡೆಸಲಾಗಿದೆ. ಗುಳೇದಗುಡ್ಡ ತಾಲೂಕಿನ ಹಾನಾಪುರ ಎಲ್.ಟಿಯ 30 ವರ್ಷದ ಯುವಕ ಜು. 5ರಂದು ಮೃತಪಟ್ಟಿದ್ದ. ಈತ ಜು. 2ರಂದು ಗೋವಾದಿಂದ ಸ್ವಗ್ರಾಮಕ್ಕೆ ಬಂದಿದ್ದ. ಸೋಂಕಿರುವುದು ನಿರ್ಲಕ್ಷಿಸಿ, ತನಗೆ ಭೂತದ (ದೆವ್ವ) ಸಮಸ್ಯೆ ಇದೆ ಎಂದು ಇಳಕಲ್ಲ ತಾಲೂಕಿನ ಗುಡೂರ ಎಸ್.ಸಿ ಗ್ರಾಮಕ್ಕೆ ಹೋಗಿ ದೆವ್ವ ಬಿಡಿಸುವವರನ್ನು ಭೇಟಿ ಮಾಡಿ ಬಂದಿದ್ದ ಎನ್ನಲಾಗಿದೆ.
ಜು. 5ರಂದು ಆತ ಮೃತಪಟ್ಟಿದ್ದು, ಬಳಿಕ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಿ, ಅಂತ್ಯಕ್ರಿಯೆ ಮಾಡಲಾಗಿತ್ತು. ಗ್ರಾಮದಲ್ಲಿ ಯುವಕನ ಸಂಪರ್ಕಕ್ಕೆ ಬಂದಿದ್ದ 42 ಮಂದಿಗೆ ಕ್ವಾರಂಟೈನ್ ಮಾಡಲಾಗಿದೆ ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯಲ್ಲಿ ಸೋಂಕಿನಿಂದ ಈ ವರೆಗೆ 9 ಜನ ಬಲಿಯಾಗಿದ್ದಾರೆ. ಕಲಾದಗಿಯ ವೈದ್ಯ ಬೆಂಗಳೂರಿನಲ್ಲಿ, ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿಯ ವೃದ್ಧೆ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಎರಡು ಪ್ರಕರಣ ಸಹಿತ ಜಿಲ್ಲೆಯಲ್ಲಿ ಒಟ್ಟು 9 ಜನರು ಕೋವಿಡ್-19ಗೆ ಬಲಿಯಾಗಿದ್ದಾರೆ.
ಸಕ್ಕರೆ ಕಾರ್ಖಾನೆ ನಿರ್ದೇಶಕನಿಗೆ ಸೋಂಕು: ಜಿಲ್ಲೆಯಲ್ಲಿ ಕೋವಿಡ್ ರಣಕೇಕೆ ಮುಂದುವರಿದಿದ್ದು, ಬಾಗಲಕೋಟೆ ನವನಗರದ ನಿವಾಸಿ, ಸಕ್ಕರೆ ಕಾರ್ಖಾನೆಯ ನಿರ್ದೇಶಕರೊಬ್ಬರಿಗೆ ಜಿಲ್ಲಾ ಕೋವಿಡ್ ಲ್ಯಾಬ್ನಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಮಂಗಳವಾರ 27 ಜನರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 289ಗೆ ಏರಿಕೆಯಾಗಿದೆ. ಈವರೆಗೆ 147 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.