ಘಟಪ್ರಭೇಲಿ ತೇಲಿದ ಮಗುವಿನ ತೊಟ್ಟಿಲು!
•ಲೋಕಾಪುರದ ಎಕ್ಸಲೆಂಟ್ ಬಾಲಕಿಯ ಬುಕ್ಸ್ ನೀರು ಪಾಲು •ಘಟಪ್ರಭಾ ಪ್ರವಾಹಕ್ಕೆ 35 ಕಿ.ಮೀ ತೇಲಿ ಬಂತು ತೊಟ್ಟಿಲು
Team Udayavani, Aug 25, 2019, 10:13 AM IST
ಬಂಟನೂರ (ಬಾಗಲಕೋಟೆ): ಎರಡು ತಿಂಗಳ ಪುಟ್ಟ ಮಗುವನ್ನು ಮಳೆ- ಗಾಳಿಯಿಂದ ರಕ್ಷಿಸಲು ಮನೆಯಲ್ಲಿ ಜೋಪಾನವಾಗಿಟ್ಟ ಕೊಂಚಿಗೆಯನ್ನೂ ಘಟಪ್ರಭೆ ಬಿಟ್ಟಿಲ್ಲ. ಮಗುವಿನ ತೊಟ್ಟಿಲು, ಕೊಂಚಿಗೆ, ಎಕ್ಸಲೆಂಟ್ ಶಾಲಾ ಬಾಲಕಿಯ ಪುಸ್ತಕಗಳು ಎಲ್ಲವೂ ಘಟಪ್ರಭೆ ನದಿ ತನ್ನೊಡಲಿಲ್ಲಿ ತೆಗೆದುಕೊಂಡೋಗಿದೆ.
ಪುಸ್ತಕ, ಮಗುವಿನ ತೊಟ್ಟಿಲು, ಕೊಂಚಿಗೆ ಕಲಾದಗಿ ಬಳಿ ಘಟಪ್ರಭಾ ನದಿ ದಡದಲ್ಲಿ ಅನಾಥವಾಗಿ ಬಿದ್ದಿದ್ದವು. ಮಗುವಿನ ಕೊಂಚಿಗೆ, ಪ್ರವಾಹದಲ್ಲಿ ಹರಿದು ಬಂದರೂ ಇನ್ನೂ ಶುಭ್ರವಾಗಿತ್ತು. ಇನ್ನು ಮಗು ಸ್ವಚ್ಛಂದವಾಗಿ ಆಟವಾಡಿ ಮಲಗಬೇಕಾದ ತೊಟ್ಟಿಲಲ್ಲಿ ಪಕ್ಷಿಯೊಂದು ಆಟವಾಡುತ್ತಿತ್ತು. ಇವೆಲ್ಲವನ್ನು ನೋಡಿದರೆ ಕರಳು ಕಿತ್ತು ಬರುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಘಟಪ್ರಭಾ ನದಿ ಪ್ರವಾಹಕ್ಕೆ ಇಡೀ ಮುಧೋಳ ತಾಲೂಕು ಅಕ್ಷರಶಃ ನಲುಗಿದೆ. ಪ್ರತಿ ಬಾರಿ ನದಿಗೆ ನೀರು ಬಿಡಿ ಎಂದು ಹೋರಾಟ ಮಾಡುತ್ತಿದ್ದ ಮುಧೋಳ ಭಾಗದ ರೈತರು ಈ ಬಾರಿ ಘಟಪ್ರಭೆಯ ಹರಿವು ನೋಡಿ ಕಂಗಾಲಾಗಿದ್ದಾರೆ. ನಮ್ಮ ನದಿಯಲ್ಲಿ ಇಷ್ಟೊಂದು ನೀರು ಎಂದೂ ಬಂದಿಲ್ರಿ ಎಂದು ಹುಬ್ಬೇರಿಸಿ ಮಾತನಾಡುತ್ತಾರೆ.
ಇಡೀ ಊರ ತುಂಬ ನೀರು: ಘಟಪ್ರಭಾ ನದಿ ದಂಡೆಯ ಬಂಟನೂರ, ಉದಗಟ್ಟಿ, ಅಂಕಗಲಿ, ಶಾರದಾಳ, ಮಾಚಕನೂರ ಹೀಗೆ ಮುಧೋಳ, ಬೀಳಗಿ ಮತ್ತು ಬಾಗಲಕೋಟೆ ತಾಲೂಕಿನ ಹಲವು ಹಳ್ಳಿಗಳು ಪ್ರವಾಹದಿಂದ ಲೆಕ್ಕಕ್ಕೆ ಸಿಗದಷ್ಟು ಹಾನಿ ಅನುಭವಿಸಿವೆ. ಹುಲಸಾಗಿ ಬೆಳೆದ ಕಬ್ಬು, ಕೈಯಾರೆ ಬೆಂಕಿ ಹಚ್ಚಿ ಸುಟ್ಟಂತಾಗಿದೆ. ಕಬ್ಬಿನ ಬೆಳೆಯ ಸುಳಿಗೆ ನೀರು ನುಗ್ಗಿ ಎಲ್ಲವೂ ಹಾನಿಯಾಗಿದೆ. ಕಬ್ಬು ಬೆಳೆಯಿಂದಲೇ ಪ್ರತಿವರ್ಷ ಕೆಂಪು ನೋಟು ಎಣಿಸುತ್ತಿದ್ದ ಈ ಭಾಗದ ರೈತರು, ಈ ಬಾರಿ ಕಬ್ಬಿನ ಬಿಲ್ ಬರದಿದ್ದರೆ ಬದುಕು ಹೇಗೆ ? ಮಕ್ಕಳ ಶಾಲೆಯ ಶುಲ್ಕ ಕಟ್ಟುವುದು ಹೇಗೆ ? ಕಿರಾಣಿ ಅಂಗಡಿ ಸಾಮಗ್ರಿಗೆ ಹಣ ಕೊಡುವುದು ಹೇಗೆ ? ಎಂದೆಲ್ಲ ಚಿಂತೆ ಮಾಡುತ್ತಿದ್ದಾರೆ.
ಸುಟ್ಟು ಕರಕಲಾದ ದಾಳಿಂಬೆ ಗಿಡ: ಬೆಂಕಿ ಹಚ್ಚಿದರೂ ಸುಡದಂತೆ ಪ್ರವಾಹಕ್ಕೆ ದಾಳಿಂಬೆ ಗಿಡ ಸುಟ್ಟಿವೆ. ಅತಿ ಕಡಿಮೆ ನೀರಿನಲ್ಲಿ ಬೆಳೆದು ವಿದೇಶಕ್ಕೂ ರಫ್ತು ಆಗುತ್ತಿದ್ದ ಕಲಾದಗಿ ಭಾಗದ ದಾಳಿಂಬೆ, ಚಿಕ್ಕು ವಾಣಿಜ್ಯ ಬೆಳೆಗಳಿಂದು ಸರ್ವನಾಶವಾಗಿದೆ. ಕಲಾದಗಿ ಭಾಗ, ಹಣ್ಣು ಬೆಳೆಗೆಂದೇ ದೊಡ್ಡ ಹೆಸರು ಮಾಡಿದೆ. ಆದರೆ, ಘಟಪ್ರಭಾ ನದಿ ಪ್ರವಾಹ, ಇಲ್ಲಿನ ಹಣ್ಣು ಬೆಳೆಗಾರರನ್ನು ಹುಣ್ಣಾಗಿಸಿದೆ.
ಕಲಾದಗಿ ಸುತ್ತ ಎಲ್ಲೇ ಕಣ್ಣಾಡಿಸಿದರೂ ದಾಳಿಂಬೆ, ಚಿಕ್ಕು ಬೆಳೆ ಕಾಣುತ್ತಿತ್ತು. ಆ ಗಿಡಗಳಲ್ಲಿ ಕೆಂಪು ಬಣ್ಣದ ದಾಳಿಂಬೆ ನೋಡಲೇ ಅಂದವಾಗಿರುತ್ತಿದ್ದವು. ಆದರೀಗ, ಗಿಡಗಳು ಸುಟ್ಟಿವೆ, ಕಾಯಿಗಳು ಕರಕಲಾಗಿವೆ. ಇಂತಹ ನೆಲದಲ್ಲಿ ಕಾಲಿಟ್ಟ ರೈತ, ಕಣ್ಣೀರಾಗಿ, ಯಾವ ಜನ್ಮದ ಪಾಪವೋ ಎಂದು ಗೋಳಿಡುತ್ತಿದ್ದಾನೆ.
35 ಕಿ.ಮೀ ತೇಲಿ ಬಂತು ತೊಟ್ಟಿಲು-ಪುಸ್ತಕ: ಲೋಕಾಪುರದ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ನ 2ನೇ ತರಗತಿ ಬಾಲಕಿ ಪ್ರತಿಕ್ಷಾ ವಿ.ಕೆ ಅವಳ ಪುಸ್ತಕಗಳು, ನೋಡ್ಸ್, ಸುಂದರವಾಗಿ ಬರೆದ ಪ್ರಾಯೋಗಿಕ ಪರೀಕ್ಷೆಯ ಉತ್ತರ ಪ್ರತಿಕೆಗಳೂ ಪ್ರವಾಹದಲ್ಲಿ ತೇಲಿ, ಕಲಾದಗಿ ಬಳಿ ಬಂದು ಬಿದ್ದಿವೆ. ಬಾಲಕಿ ಬರೆದ ಉತ್ತರ ಪ್ರತ್ರಿಕೆಗಳಲ್ಲಿನ ಒಂದೊಂದು ಪ್ರಶ್ನೆಗಳು, ಪ್ರವಾಹದ ರುದ್ರನರ್ತನಕ್ಕೆ ಸಾಕ್ಷಿ ಎಂಬಂತಿದ್ದವು. ಶಬ್ದಗಳ ಅರ್ಥ ಬರೆಯುವ ಪ್ರಶ್ನೆಗಳಿಗೆ ಬಾಲಕಿ ಅಕ್ಷತಾ ವಿ.ಕೆ. ಉತ್ತರಿಸಿದ್ದು, ಸಹಿಸು ಎಂಬ ಪ್ರಶ್ನೆ ಅದರಲ್ಲಿತ್ತು ಆದರೆ, ಆ ಪ್ರಶ್ನೆಗೆ ಬಾಲಕಿ ಬಯಕೆ ಎಂಬ ಅರ್ಥ ಬರೆದಿದ್ದು, ಅದು ತಪ್ಪಾಗಿ, ಒಂದು ಅಂಕ ಕಳೆದುಕೊಂಡಿದ್ದಳು. ಪ್ರವಾಹವೂ, ಮಗುವೇ ನನ್ನ ರೌದ್ರಾವತಾರಕ್ಕೆ ನೀನು ಸಹಿಸಿಕೋ ಎಂಬಂತಿತ್ತು.
ಒಡಲು ಒಡೆದಾಗ ಉಳಿದವು ಹತ್ತೂರು: ಪ್ರವಾಹದಿಂದ ರಸ್ತೆ, ಭೂಮಿ, ಬೆಳೆ, ಸೇತುವೆ, ಮನೆ ಎಲ್ಲವೂ ಹಾಳಾಗಿವೆ. ಇಲ್ಲೊಂದು ಸೇತುವೆ ಒಡೆದಿದ್ದಕ್ಕೆ ಹತ್ತೂರಿನ ಜನರು ಸಂಕಷ್ಟದಿಂದ ಪಾರಾಗಿದ್ದಾರೆ. ಕಲಾದಗಿ-ಕಾತರಕಿ ಸೇತುವೆ ಎರಡೂ ಭಾಗದ ಮಣ್ಣು-ಖಡಿ ಮಿಶ್ರಿತ ಎತ್ತರದ ರಸ್ತೆ (ಸೇತುವೆ ಎರಡೂ ಭಾಗದಲ್ಲಿರುವ ಒಡ್ಡು) ಒಡೆದು ಹೋಗಿದ್ದು, ಇದರಿಂದ ಕಲಾದಗಿ-ಕಾತರಕಿ ಬ್ಯಾರೇಜ್ ಸಹಿತ ಸೇತುವೆಗೆ ನೀರು ಬಂದು ಅಪ್ಪಳಿಸಿ, ಪುನಃ ಹಿನ್ನೀರಾಗಿ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳ ತುಂಬ ನೀರು ನುಗ್ಗುತ್ತಿತ್ತು. ಆದರೆ, ಸೇತುವೆ ಎರಡೂ ಭಾಗ ಕೊಚ್ಚಿ ಹೋಗಿದ್ದರಿಂದ ಕಾತರಕಿ, ಕೊಪ್ಪ ಎಸ್.ಕೆ, ನಿಂಗಾಪುರ, ಅಂಕಲಗಿ, ಶಾರದಾಳ, ಉದಗಟ್ಟಿ, ಬಂಟನೂರ, ಮಾಚಕನೂರ ಮುಂತಾದ 10ಕ್ಕೂ ಹೆಚ್ಚು ಹಳ್ಳಿಗಳು ಇನ್ನಷ್ಟು ಅನುಭವಿಸುತ್ತಿದ್ದ ಸಂಕಷ್ಟ ದೂರಾಗಿದೆ.
ಬಂಟನೂರ ಉಳಿಸಿದವು ಬಾವಿ!: ಕಲಾದಗಿ- ಕಾತರಗಿ ಸೇತುವೆ ರಸ್ತೆ ಕೊಚ್ಚಿ ಹೋಗಿದ್ದರಿಂದ ಹತ್ತೂರ ಹಳ್ಳಿಯ ಸಂಕಷ್ಟ ದೂರಾಗಿದ್ದರೆ, ಮುಧೋಳ ತಾಲೂಕು ಬಂಟನೂರ ಪೂರ್ಣ ಮುಳುಗಡೆಯಾಗುವುದನ್ನು ನಾಲ್ಕು ಐತಿಹಾಸಿಕ ಬಾವಿಗಳು ಉಳಿಸಿವೆ ಎಂದರೆ ನಂಬಲೇಬೇಕು.
ಬಂಟನೂರ, ಘಟಪ್ರಭಾ ನದಿಯಿಂದ ಒಂದೂವರೆ ಕಿ.ಮೀ ದೂರದಲ್ಲಿದ್ದು, ನದಿ ತುಂಬಿ ಹರಿದಾಗ, ಗ್ರಾಮದ ಹತ್ತಿರಕ್ಕೆ ನೀರು ಬರುತ್ತಿತ್ತು. ಈ ಬಾರಿ ಇಡೀ ಗ್ರಾಮಕ್ಕೆ ನೀರು ನುಗ್ಗಿತ್ತು. ಸುಮಾರು 261 ಮನೆಗಳ ಮೇಲೆ ನೀರು ಬಂದಿತ್ತು. ಇನ್ನೂ ನೀರು ಹೆಚ್ಚಾಗುತ್ತಲೇ ಇತ್ತು. ಆ ಸಂದರ್ಭದಲ್ಲಿ ಊರ ಮುಂದೆ ಇರುವ ಸಾಹುಕಾರ ಬಾವಿ, ಪೊಲೀಸ್ ಬಾವಿ, ಬಸು ನಾಯ್ಕ ಮತ್ತು ಪಾಟೀಲ ಬಾವಿ ಎಂಬ ನಾಲ್ಕು ಬಾವಿಗಳಿದ್ದು, ಈ ಬಾವಿಗಳಿಗೆ ಸುರಂಗ ಮಾರ್ಗಗಳಿವೆ. ಎಷ್ಟೇ ನೀರು ಹರಿದರೂ ಈ ಬಾವಿಗಳು ತುಂಬಿದ ಉಹಾದರಣೆ ಇಲ್ಲ. ಇಷ್ಟೊಂದು ಪ್ರವಾಹ ಬಂದು ಇಡೀ ಬಾವಿಯ ಮೇಲೆ ನೀರು ನಿಂತಿದ್ದರೂ ಸುಳಿಯ ರೀತಿ ನೀರು ಒಳ ಹೋಗುತ್ತಿತ್ತು. ದೊಡ್ಡ ಪ್ರವಾಹ ಬಂದು ಹೋದರೂ, ಸದ್ಯ ಈ ಬಾವಿಗಳಲ್ಲಿ ಹನಿ ನೀರಿಲ್ಲ. ಈ ಬಾವಿಗಳಿಗೆ ಸುಳಿಯಂತೆ ಭಾರಿ ಪ್ರಮಾಣದ ನೀರು ಹೊಕ್ಕಿದ್ದರ ಪರಿಣಾಮ, ಊರೊಳಗೆ ಇನ್ನೂ ನುಗ್ಗಲಿದ್ದ ನೀರು ಕಡಿಮೆಯಾಯಿತು ಎನ್ನುತ್ತಾರೆ ಗ್ರಾಮಸ್ಥರು.
•ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ