ಮುದ್ದೆಯಾದ ಪಂಚಮಿ ಉಂಡಿ
ರೈತ, ನೇಕಾರ, ಕಾರ್ಮಿಕನ ಬದುಕು ಕಸಿದ ಕೃಷ್ಣೆ ಪ್ರವಾಹ
Team Udayavani, Aug 21, 2019, 10:24 AM IST
ಬನಹಟ್ಟಿ: ಪಂಚಮಿಗೆ ಕಟ್ಟಿದ ಉಂಡಿ ಹಾಳಾಗಿದೆ.
ಬನಹಟ್ಟಿ: ವರ್ಷಕ್ಕಾಗುವಷ್ಟಿದ್ದ ಕಾಳು-ಕಡಿ ಇಟ್ಟಲ್ಲೇ ಮೊಳಕೆಯೊಡೆದಿವೆ. ಪಂಚಮಿ ಹಬ್ಬಕ್ಕಾಗಿ ಕಟ್ಟಿದ ಉಂಡಿಗಳು ಮುದ್ದೆಯಾಗಿವೆ. ಹೆಣ್ಮಕ್ಕಳಿಗೆ ಕೊಬ್ಬರಿ-ಕುಬಸ ಕೊಡಲು ಕಟ್ಟಿದ್ದ ಹೊಸ ಹೊಸ ಬಟ್ಟೆಗಳು ರಾಡಿಯಾಗಿವೆ. ಯಾವ ಮನೆಗೆ ಕಾಲಿಟ್ಟರೂ ಗಬ್ಬೆದ್ದ ವಾಸನೆ ಬರುತ್ತಿದೆ. ಹಲವು ಮನೆಗಳು ಬೀಳುವ ಸ್ಥಿತಿಯಲ್ಲಿವೆ. ಪ್ರವಾಹ ನಿಂತ ಮೇಲೆ ಮನೆಗೆ ಬಂದವರು ಆಶ್ರಯ ಕೊಟ್ಟ ಮನೆ ನೋಡಿ ಕಣ್ಣೀರುಡುತ್ತಿದ್ದಾರೆ
ಬೇಸಿಗೆಯಲ್ಲಿ ನೀರಿಲ್ಲದೇ ಹಾಗೂ ಮಳೆಗಾಲದ ಪ್ರಾರಂಭದಲ್ಲಿ ಮಳೆಯಿಲ್ಲದೆ ಬತ್ತಿದ್ದ ಕೃಷ್ಣೆ, ಕಳೆದ ಕೆಲವು ದಿನಗಳ ಹಿಂದೆ ಇತಿಹಾಸ ಕಂಡರಿಯದ ಭೀಕರ ಪ್ರವಾಹ ಸೃಷ್ಟಿಸಿತು. ಅದು ಇಲ್ಲಿನ ಜನರ ಬದುಕು ಅತಂತ್ರವಾಗಿಸಿದೆ.
ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ, ಹಳಿಂಗಳಿ, ಮದನಮಟ್ಟಿ, ಆಸಂಗಿ ಅಸ್ಕಿ, ಕುಲ್ಲಹಳ್ಳಿ, ಹಿಪ್ಪರಗಿ ಗ್ರಾಮದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಲಕ್ಷಾಂತರ ಹೆಕ್ಟೇರ್ ಬೆಳೆಗಳು ನೀರಿನಲ್ಲಿ ಹಾಳಾಗಿ ಹೋಗಿವೆ. ಜನರ ಬದುಕು ನೀರಲ್ಲಿ ಕೊಚ್ಚಿ ಹೋಗಿದೆ. ಮುಂದಿನ ಜೀವನ ಹೇಗೆ ಎಂದು ಮರಗುತ್ತಿದ್ದಾರೆ.
ಪ್ರವಾಹದಿಂದ ತತ್ತರಿಸಿ ಹೋಗಿ ಮನೆ ಬಿಟ್ಟು ಒಂದು ವಾರ ಕಳೆದು ಈಗ ಪ್ರವಾಹ ನಿಂತ ಮೇಲೆ ಮನೆ ಹೇಗಿದೆ, ಮನೆಯಲ್ಲಿರುವ ವಸ್ತುಗಳು ಹೇಗಿವೆ ಎಂಬುದನ್ನು ನೋಡಲು ಹೋದರೆ ಅವರಿಗಾದ ಆಘಾತ ಅಷ್ಟಿಷ್ಟಲ್ಲ. ಏಕಾಏಕಿ ಗ್ರಾಮಕ್ಕೆ ಹೆಚ್ಚಿನ ಪ್ರಮಾಣದ ನೀರು ಬಂದಿದ್ದರಿಂದ ಬೇಗ ಬೇಗನೆ ಮನೆ ಕೀಲಿ ಹಾಕಿ ಬಂದಿದ್ದರಿಂದ ಅಲ್ಲಿ ಇಟ್ಟಿದ್ದ ಅವರ ಅಗತ್ಯ ವಸ್ತುಗಳು ಕೂಡಾ ನೀರು ಪಾಲಾಗಿವೆ. ಜೈನ ಸಮುದಾಯದ ಬಸದಿ, ದೇವಸ್ಥಾನ, ಶಾಲೆ ನೀರಲ್ಲಿ ನಿಂತು ಗಬ್ಬೆದ್ದು ನಾರುತ್ತಿವೆ.
ನದಿಗೆ ಇಷ್ಟೊಂದು ನಾವು ಊಹಿಸಿರಲಿಲ್ಲ, ಈ ಹಿಂದೆ 2005ರಲ್ಲಿ ಪ್ರವಾಹ ಬಂದು ನಮ್ಮ ಬದುಕು ಕಸಿದುಕೊಂಡಿತ್ತು. ಈಗ ಮತ್ತೂಮ್ಮೆ ನಮ್ಮ ಜೀವನ ಹಾಳಾಗಿದೆ. ಇಲ್ಲಿಯವರೆಗೆ ದುಡಿದು ಕಟ್ಟಿಸಿದ ಮನೆ ನೀರಿನಲ್ಲಿ ಮುಳುಗಿದೆ. ಶಾಶ್ವತ ಪುನರ್ವಸತಿ ಕಲ್ಪಿಸಿ ನಮಗೆ ಸೂಕ್ತ ಪರಿಹಾರ ಕೊಡಬೇಕೆಂದು ಅಸ್ಕಿ ಸಂತ್ರಸ್ತರ ತಮ್ಮ ಅಳಲು ಹೇಳುತ್ತಾರೆ.
ಅತೀ ಆತ್ಮವಿಶ್ವಾಸದಿಂದ ನಮ್ಮೂರು ಎಂದೂ ಮುಳುಗುವುದಿಲ್ಲ, ಅಧಿಕಾರಿಗಳ ಒತ್ತಡದ ಮೇರೆಗೆ ನಾವು ಊರು ಬಿಟ್ಟಿದ್ದೇವು, ಆದರೆ ಇಷ್ಟೊಂದು ಪ್ರಮಾಣದಲ್ಲಿ ನೀರು ಊರೋಳಗೆ ಬರುತ್ತದೆ ಅಂದುಕೊಂಡಿರಲಿಲ್ಲ. ಅದಕ್ಕಾಗಿ ಅನೇಕ ದಿನಬಳಕೆಯ ವಸ್ತುಗಳು, ಕಾಳು ಕಡಿಗಳು, ಶಾಲಾ ಪುಸ್ತಕಗಳು, ಆಸಿ ್ತಕಾಗದ ಪತ್ರಗಳು, ಟಿವಿ, ಪ್ರೀಡ್ಜ ಸೇರಿದಂತೆ ಅನೇಕ ವಸ್ತುಗಳನ್ನು ಎತ್ತರದ ಪ್ರದೇಶದಲ್ಲಿಟ್ಟು ಹೋಗಿದ್ದೇವು. ಅವೆಲ್ಲ ಈಗ ನೀರುಪಾಲಾಗಿ, ಕಾಳು ಕಡಿಗಳು ಚೀಲದಲ್ಲೇ ಮೊಳಕೆ ಒಡದಿವೆ.
ನದಿ ಶಾಂತವಾದ ಬಳಿಕವಾದರೂ ಇಲ್ಲಿದ್ದ ಕಾಳನ್ನು ಬಿಸಿ ಊಟ ಮಾಡಬಹುದು ಎಂದುಕೊಂಡಿದ್ದೇವು, ಆದರೆ ಅವೆಲ್ಲವೂ ಇಂದು ಹಾಳಾಗಿ ಹೋಗಿವೆ. ಎಷ್ಟಂತ ಪರರು ಕೊಡುವ ಅನ್ನಕ್ಕೆ ನಿತ್ಯ ಕೈಚಾಚುವುದು, ಅಯ್ಯೋ ನಮ್ಮ ಪರಿಸ್ಥಿತಿ ನಮ್ಮ ವೈರಿಗೂ ಬರಬಾರದು ಎಂದು ಎನ್ನುತ್ತಾರೆ ಅಸ್ಕಿಯ ಮಹಾಹೇವ ಬಣಜಿಗೊಂಡ ಮತ್ತು ಪತ್ನಿ ಲಕ್ಷ್ಮಿ ಬಣಜಿಗೊಂಡ.
ಮನೆಯಲ್ಲಿ ನೀರೇ ನೀರು, ಎಲ್ಲ ವಸ್ತುಗಳ ನೀರಲ್ಲಿ ತೇಲಾಡಿವೆ, ಗ್ಯಾಸ್, ಸಿಲಿಂಡರ್ ನೀರಲ್ಲಿ ತೇಲಿಹೋಗಿವೆ. ಕೃಷ್ಣೆ ನಮ್ಮೂರಲ್ಲಿ ರುದ್ರ ನರ್ತನ ಮಾಡಿಹೋಗಿದ್ದಾಳೆ ಎನ್ನುತ್ತಾರೆ ಇವರು.
ನೇಕಾರರ ತವರೂರಾದ ರಬಕವಿಯ ಪರಸ್ಥಿತಿ ಕೂಡಾ ಕೃಷ್ಣೆಯ ಪ್ರವಾಹದಿಂದ ಕೊಚ್ಚಿ ಹೋಗಿದೆ. ಸಾವಿರಾರೂ ಏಕರೆಯಲ್ಲಿ ಬೆಳೆದ ಕಬ್ಬು, ಅರಿಶಿಣ, ಬಾಳೆ ನೀರಿನಲ್ಲಿ ನಿಂತು ರೈತನ ಬದುಕು ದುಸ್ತರವಾಗಿಸಿದರೆ. ನಗರದ ಪ್ರಮುಖ 17ನೇ ವಾರ್ಡ್ನಲ್ಲಿ ನೀರು ಹೊಕ್ಕು ಬದುಕನ್ನೇ ಬುಡುಮೇಲು ಮಾಡಿದೆ. ರಬಕವಿಯಲ್ಲಿ ವಿದ್ಯುತ್ ಮಗ್ಗಗಳು, ಸೈಜಿಂಗ್ ಘಟಕ, ಗುಡಿ ಕೈಗಾರಿಕೆಯ ಘಟಕಗಳು ಹಾಳಾಗಿ ನೂರಾರೂ ಜನರ ಉದ್ಯೋಗವನ್ನು ಕಸಿಯುವುದರ ಜೊತೆಗೆ ಕೋಟ್ಯಂತರ ಹಾನಿ ಕೂಡಾ ಸಂಭವಿಸಿದೆ.
ಒಮ್ಮೆ ನೀರು ಬಂತು. ಏನ ಮಾಡಬೇಕು ಅನ್ನೂದ ಗೊತ್ತಾಗಲಿಲ್ಲ. ಸಿಕ್ಕಷ್ಟು ವಸ್ತುಗಳನ್ನು ಕಟ್ಟಿಕೊಂಡು ಓಡೋಡಿ ಹೋದವ್ರಿ. ಶನಿವಾರ ಸಂಜೆ ಮನೆಗೆ ಮರಳಿ ಬಂದೆವ್ರಿ. ಮನೆಯ ವಸ್ತುಗಳ ಮೇಲೆ ಕೆಸರು ತುಂಬಿಕೊಂಡರೆ, ಮಗ್ಗಗಳು ಸಂಪೂರ್ಣ ನೀರಿನಿಂದಾಗಿ ಕೆಟ್ಟು ನಿಂತಿವೆ. ಇನ್ನ ಈ ಮಗ್ಗ ರಿಪೇರಿ ಆಗಬೇಕಾದರ 25000 ರೂ. ಖರ್ಚ ಆಗತೈತ್ರಿ ಎನ್ನುತ್ತಾರೆ ಸ್ಥಳೀಯ 17ನೇ ವಾರ್ಡ್ ನೇಕಾರರಾದ ಶಂಕರ ಬೀಳಗಿ, ಪ್ರಭು ಶಿವಶಿಂಪಿ ಮತ್ತು ರಾಜು ಮಟ್ಟಿಕಲ್ಲಿ.
ತಮದಡ್ಡಿ, ಹಳಿಂಗಳಿ, ಕುಲಹಳ್ಳಿ, ಆಸಂಗಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕೂಡಾ ಇದೇ ತರಹದ ಸನ್ನಿವೇಶ ನಿರ್ಮಾಣವಾಗಿದೆ. ಬದುಕು ಕಟ್ಟಿಕೊಂಡು ಸುಂದರ ಕನಸು ಕಾಣುತ್ತಿದ್ದ ಇವರಿಗೆ ಕೃಷ್ಣೆ ಅವರ ಬದುಕನ್ನು ಬರಡು ಮಾಡಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್