ಓಟ್ ಹಾಕಾಕ ಹೊತ್ತಗೊಂಡ ಹೊಕ್ಕಾರ ಈಗ ಮನಿ ಕೇಳಿದ್ರ ನಿಮಗ್ಯಾಕ ಅಂತಾರ
Team Udayavani, Sep 17, 2019, 11:31 AM IST
ಕುಳಗೇರಿ ಕ್ರಾಸ್: ಎಲೆಕ್ಷನ್ ಇದ್ದಾಗ, ನಾವು ವಯಸ್ಸಾದವ್ರು ಅಂತಾ ಹೇಳಿ, ಹೊತ್ತಕೊಂಡು ಹೋಗಿ ಓಟ್ ಹಾಕತ್ಸಾರ. ಈಗ ಮನಿ ಬಿದ್ದು ಬೀದ್ಯಾಗ ನಿಂತೀವಿ, ಮನಿ ಕೊಡ್ರಿ ಅಂದ್ರ ವಯಸ್ಸಾಗೈತಿ ನಿಮಗ್ಯಾಕ್ ಮನಿ ಅಂತ ಕೇಳ್ತಾರ..
ಹೀಗೆ ಹೇಳಿಕೊಂಡು ಗೋಳಿಟ್ಟುಕೊಂಡವರು ಸಮೀಪದ ಬೀರನೂರಿನ ಪ್ರವಾಹ ಸಂತ್ರಸ್ತ ವೃದ್ಧೆ ಶಾಂತವ್ವ ಶಿವಪ್ಪ ತೋಟದ.
ನಿಂದ ಇರೋದ ಒಂದ ಓಟ, ನಿನ್ನ ಒಂದ ಓಟಿನಿಂದ ಏನ್ ಆಗಬೇಕಾಗೈತಿ. ನೀ ಇರುವಾಕೆ ಒಬ್ಟಾಕಿ. ಇಲೆಕ್ಷನ್ ಇದ್ದಾಗ ಮನಿ ಬಾಗಲಕ್ ಕುಂತ ಕರಕೊಂಡ ಹೋಗಿ ಓಟ ಹಾಕಸ್ಗೊಂತಾರ್ರಿ, ಮತ್ತ ಏನಾರ ಸರ್ಕಾರಿ ಸೌಲಭ್ಯ ಕೇಳಿದ್ರ ನಿನಗ್ಯಾಕ ಬೇಕ್ ಅಂತಾರ. ಇದು ಯಾವ ನ್ಯಾಯಾರಿ. ನಾನು ಒಂದ ಜೀವ ಅಲ್ಲೇನ್ರಿ. ನನಗ ಇರಾಕ ಮನಿ ಬ್ಯಾಡ ಏನ್ರಿ ಎಂದು ನೊಂದು ಹೇಳಿದಳು ಶಾಂತವ್ವ.
ಎರಡ್ ಸಲ ನೀರ್ ಹೊಕ್ಕ ನನ್ನ ಮನಿ ಬಿದ್ದೈತ್ರಿ. ಬಂದವರಿಗೆಲ್ಲಾ ಹೇಳಾಕತ್ತೀನ್ರಿ, ಯಾರರ ಸಾಹೇಬ್ರ ಬಂದಾಗ ನಾ ಏನರ ಕೇಳಾಕತ್ನಿ ಅಂದ್ರ ಬಾಯಿ ಮಾಡಿ ಹಿಂದಕ್ ಸರಿಸಿ ಬೆದರಸಾಕತ್ತಾರ್ರಿ. ಮತ್ಯಾರ್ ಮುಂದ ಹೇಳಬೇಕ್ರಿ ನನ್ನ ಗೋಳು. ನಮ್ಮ ಮನ್ಯಾಗ ಗಂಡ ಮಕ್ಕಳು ಇದ್ರ ನಾ ಕೇಳತಿದ್ದಿಲ್ರಿ. ಯಾರೂ ನನ್ನ ತೊಂದ್ರಿ ಕೇಳಾವಲ್ಲರ್ರಿ. ನೀವರ ನನಗ ನ್ಯಾಯಾ ಕೊಡಸ್ರೆಪ ಎಂದು ಸೆರಗಿನಿಂದ ಕಣ್ಣೀರು ಒರೆಸಿಕೊಂಡು ಹಾಡ್ಯಾಡಿ ಅಳುವ ಈ ಜೀವದ ಶಾಪ ತಟ್ಟದೆ ಬಿಡುತ್ತಾ ಎಂದು ಗೋಳಿಟ್ಟುಕೊಂಡರು.
ಈ 60ರ ಅಜ್ಜಿಯ ಮನಿ 2009ರಲ್ಲಿ ಮುಳುಗಡೆಯಾಗಿ ಆಗ ಸರ್ಕಾರದಿಂದ ಸೂರು ಸಹ ಕೊಟ್ಟಿದ್ದರಂತೆ. ವೃದ್ಧೆಯ ಹೆಸರಿಗೆ ಬಂದ ಮನೆಯನ್ನು ಗೋಲ್ಮಾಲ್ ಮಾಡಲಾಗಿದ್ದು, ಪರರ ಪಾಲಾಗಿದೆಯಂತೆ. ಮತ್ತೆ ಎರಡು ಬಾರಿ ಪ್ರವಾಹ ಬಂದು ಮನೆ ಬಿದ್ದಿದ್ದು, ಸುಮಾರು 12 ವರ್ಷಗಳಿಂದ ಗೋಳಿಡುತ್ತಿದ್ದಾಳೆ. ಇದು ಒಂಟಿ ಜೀವ ಶಾಂತವ್ವಳ ಗೋಳು.
ಅಲ್ಪ ಆಸರೆಯಾದ ಜೋಪಡಿ: ಏನ್ ಮಾಡೋದ್ರಿ ಹರೇದ ಹೆಣ್ಣಮಕ್ಕಳ್ನ ಕಟ್ಗೊಂಡು ಸೊಳ್ಳಿ ಕಡಸ್ಗೋಂತ ಬೀದ್ಯಾಗ ಕುಂತೇವ್ರಿ, ಕುಂದ್ರಾಕ ಅಷ್ಟ ನೋಡ್ರಿ ಈ ಜೋಪಡಿ. ಕಾಲ ಚಾಚಿ ಮನಕೋಳಾಕು ಆಗಾಂಗಿಲ್ರಿ. ದೊಡ್ಡ-ದೊಡ್ಡ ಹೆಣ್ಣ ಮಕ್ಳ ಅದಾವ್ರಿ. ನನ್ನ ಮಗಳ ಜೋಪಡ್ಯಾಗ ದೊಡ್ಡಾಕಿ ಆದ್ಲು ಏನ್ ಮಾಡಬೇಕ್ರಿ. ನಾವು ಜಳಕಾ ಮಾಡೋದರ ಹೆಂಗ್ರಿ. ನಮ್ಮ ಬಚ್ಚಲಾ ನೋಡ್ರಿ ನಮಗೂ ಮಾನ ಮರ್ಯಾದಿ ಇಲ್ಲೇನ್ರಿ. ಆಕಸ್ಮಾತ್ ಅಧಿಕಾರಿಗಳಿಗೆ ಈ ಪರಿಸ್ಥಿತಿ ಬಂದ್ರ ಹೆಂಗ್ರಿ ಅವರು ಸುಮ್ಮನಿರ್ತಾರೇನ್ರಿ. ಇದ್ದ ಜೋಪಡಿ ಬಿಡು ಅಂತಾರ.
ನೀರ ಬಂದ ಮನಿ ಬಿದ್ದಾವಂದ್ರ ನಮಗೇನ ಬೆಲೇನ ಇಲ್ಲೇನ್ರಿ. ಜೋಪಡ್ಯಾಗ ಇದ್ದ ನೋಡ್ರಿ ನೀವು ಬೇಕಾರ. ಅಡಗಿ ಮಾಡಬೇಕಂದ್ರ ಗಾಳಿಗೆ ಒಲಿ ಹತ್ತಾಂಗಿಲ್ಲ. ಕಣ್ಣ ಉರಸ್ಗೋಂತ ಏನಾರ ಸ್ವಲ್ಪ ಚಾಟ ಮಾಡ್ಕೊಂಡು ಅಡಗಿ ಮಾಡಿ ತಿನಬೇಕಂದ್ರ ಮಾಡಿದ ಅಡಗಿ ಜೋಪಡ್ಯಾಗ ಇಟ್ಟ ಮಕ್ಳ ಸಾಲಿಗೆ, ನಾವಿ ಕೂಲಿಗೆ ಹೋದ್ರ ನಾಯಿ-ನರಿ, ಧನ-ಕರ ತಿಂದ ಊಟಕ್ಕೂ ಚಿಂತಿ ಆಗೇತ್ರಿ.
ಮಕ್ಳ ಸಾಲಿಯಿಂದ ಹಸ್ಗೊಂಡು ಬಂದ್ರ ಊಟ ಇಲ್ಲ. ಉಪಾಸ ಹೋಗ್ಯಾರ ನೋಡ್ರಿ ಅಂತಾ ಮಹಿಳೆಯರು ಕಣ್ಣೀರು ಇಟ್ಟರು.
ಉರಿಗೆ ಬಂದವರೆಲ್ಲ ಸಾಹೇಬ್ರೇ: ಹೌದು ನೀವೂ ಒಮ್ಮೆ ಪ್ರವಾಹ ಪೀಡಿತ ಗ್ರಾಮಗಳಿಗೆ ಕಾಲಿಟ್ಟು ನೋಡಿ ನಿಮಗೆ ಸ್ವಾಗತ ಕೋರುತ್ತ ಸಾಹೇಬ್ರ ಬರ್ರಿ ನಮ್ಮ ಮನಿ ನೋಡ್ರಿ, ಒಳಗ ಬರ್ರಿ ಯಪ್ಪಾ ಕೈ ಮುಗಿತೇನಿ ಒಳಗರ ಬಂದು ನೋಡ್ರಿ. ನಮಗೂ ಒಂದು ಮನಿ ಕೊಡಸ್ರಿ ಎಂದು ಕೈ ಮುಗಿದು ಕೇಳುವ ಹಿರಿಯ ಜೀವಿಗಳು ಕಾಲಿಗೂ ಬಿದ್ದು ಗೋಳಾಡುತ್ತಾರೆ.
ಸಾಲದ ತಗಡಿನ ಶೆಡ್: ಬೀರನೂರ ಗ್ರಾಮದಲ್ಲಿ ಸರ್ಕಾರ ನಿರ್ಮಿಸಿರುವ 24 ತಾತ್ಕಾಲಿಕ ತಗಡಿನ ಸೆಡ್ ಸಾಲೋದಿಲ್ಲ, ಪ್ರವಾಹದಿಂದ 150ಕ್ಕೂ ಹೆಚ್ಚು ಕುಟುಂಬಗಳು ಮನೆಗಳು ನೆಲಸಮವಾಗಿವೆ. ಕಾರಣ ಇನ್ನೂ ಸಂತ್ರಸ್ತರು ರಸ್ತೆ ಪಕ್ಕ ಜೋಡಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಪತ್ರಿಕೆಯಲ್ಲಿ ಪ್ರಸಾರವಾದ ವರದಿ ಬೆನ್ನಲ್ಲೇ ಅಧಿಕಾರಿಗಳು ಬಂದು ಕೆಲವರಿಗೆ ತಗಡಿನ ಸೆಡ್ ಕೊಟ್ಟಿದ್ದು ಉಳಿದ ಕೆಲವರಿಗೆ ಜೋಪಡಿ ಕಿಳ್ಳುವಂತೆ ಒತ್ತಾಯಿಸುತ್ತಿದ್ದಾರಂತೆ. ನೀರು ಬಂದು ಮನೆ ನೆಲಸಮವಾಗಿವೆ ನಾವು ಎಲ್ಲಿ ಹೋಗೋಣ ಹೇಳಿ ಎಂದು ಅಧಿಕಾರಿಗಳಿಗೆ ವಾದಕ್ಕಿಳಿದಿದ್ದಾರೆ. ಅತ್ತ ಮನೆಯೂ ಇಲ್ಲ, ಇತ್ತ ತಗಡಿನ ಸೆಡ್ಡೂ ಇಲ್ಲ. ನಮ್ಮ ಪಾಡಿಗೆ ಜೋಪಡಿ ಕಟ್ಟಿಕೊಂಡು ನಾವಿದ್ದರೆ ಅದಕ್ಕೂ ಬಿಡದೆ ಖಾಲಿ ಮಾಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸುತ್ತಾರೆ.
ಮನೆ ಪೂರ್ತಿ ವೀಕ್ಷಿಸದ ಅಧಿಕಾರಿಗಳು: ಜಿಲ್ಲಾಧಿಕಾರಿ ಆದೇಶದಂತೆ ಬೀರನೂರ ಗ್ರಾಮವನ್ನು ಮತ್ತೆ ಸರ್ವೇ ಮಾಡುವ ಮೂಲಕ ಮನೆಗಳನ್ನು ವೀಕ್ಷಿಸಿದ್ದಾರೆ. ಆದರೆ, ಕೆಲ ಮನೆಗಳಲ್ಲಿ ಒಳಗೆ ಹೋಗದೆ ಹೊರಗೇ ನಿಂತು ಸರ್ವೇ ಮಾಡಿ ನಿನ್ನ ಮನೀ ಚೆನ್ನಾಗಿದೆ, ನೀವು ಇಲ್ಲೇ ಇರಬಹುದೆಂದು ಅಧಿಕಾರಿಗಳು ಹೇಳಿ ಹೋಗಿದ್ದಾರಂತೆ. ಆದರೆ ಮನೆಯೊಳಗೆ ನೆಲ, ಗೋಡೆ ಬಿರುಕು ಬಿಟ್ಟಿವೆ. ಮನೆಯ ಜಂತಿಗೆ (ಮೇಲ್ಛಾವಣಿಗೆ) ನಿಲ್ಲಿಸಿದ್ದ ಕಂಬ ಬಿದ್ದಿವೆ. ಇದರಲ್ಲಿ ಹೇಗೆ ಜೀವನ ಮಾಡೂದು ಹೇಳಿ ಎಂದು ಪ್ರಶ್ನಿಸುತ್ತಾರೆ.
ನಮ್ಮ ತ್ರಾಸ್ ನೊಡಾಕ್ ಯಾರೂ ಬರಾವಲ್ರು. ಏನ ಮಾಡಬೇಕು. ನಮ್ಮನ್ಯಾಗ ನೀರ ಯಾವಾಗ ಹೊಕ್ಕೈತಿ ಅವತ್ತಿಂದ ಕೂಳ(ಊಟ) ಕಂಡಿಲ್ಲ ಎಂದು ಕಣ್ಣೀರಿಟ್ಟರು ಬೀರನೂರ ಗ್ರಾಮದ 75ರ ಅಜ್ಜಿ ಗಂಗವ್ವ ತಿಮ್ಮನಗೌಡ್ರ.
•ಮಹಾಂತಯ್ಯ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ