ಮತ್ತೆ ಗದ್ದಿಗೌಡರ ಆಡಳಿತ


Team Udayavani, May 24, 2019, 11:26 AM IST

bag-1

ಬಾಗಲಕೋಟೆ: ಸತತ ಮೂರು ಬಾರಿಯ ಸೋಲಿನ ಕಹಿ ಮರೆಯಲು ಹಲವು ತಂತ್ರಗಾರಿಕೆ ನಡೆಸಿದ್ದ ಕಾಂಗ್ರೆಸ್‌ ಈ ಬಾರಿಯೂ ಸೋಲು ಸುಣ್ಣವಾಗಿದೆ. ಬಾಗಲಕೋಟೆ ಲೋಕಸಭೆ ಕ್ಷೇತ್ರವನ್ನು ಭದ್ರಕೋಟೆಯನ್ನಾಗಿಸಿಕೊಂಡಿದ್ದ ಬಿಜೆಪಿ, ಇದೀಗ ಮತ್ತಷ್ಟು ಸುಭದ್ರವಾಗಿಸಿಕೊಂಡಿದೆ. ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರ ಒಳಗೊಂಡು ಎಂಟು ವಿಧಾನಸಭೆ ಕ್ಷೇತ್ರ ಹೊಂದಿರುವ ಬಾಗಲಕೋಟೆ ಕ್ಷೇತ್ರವನ್ನು 2004ರಿಂದಲೂ ಕಾಂಗ್ರೆಸ್‌ ಸತತ ಸೋಲು ಕಾಣುತ್ತಿದೆ. ಇನ್ನೊಂದು ವಿಶೇಷವೆಂದರೆ, ನಾಲ್ಕು ಬಾರಿ ಗೆದ್ದಿರುವ ಗದ್ದಿಗೌಡರು, ಪ್ರತಿ ಬಾರಿಯೂ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.

ಗದ್ದಿಗೌಡರ ಬೌಂಡರಿಗೆ ಕಾರಣಗಳು: ಕುರುಬ ಸಮಾಜದ ಮತ ಸೆಳೆಯಲು, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಚುನಾವಣೆ ಉಸ್ತುವಾರಿಯನ್ನಾಗಿ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಅವರನ್ನು ಬಿಜೆಪಿ ನಿಯೋಜಿಸುವ ಮೂಲಕ ಮೊದಲ ತಂತ್ರಗಾರಿಕೆ ಮಾಡಿತ್ತು. ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ಈಶ್ವರಪ್ಪ ಅವರು, ಅಧಿಕೃತ ಚುನಾವಣೆ ಘೋಷಣೆಗೂ ಮುನ್ನವೇ ಇಡೀ 8 ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಪ್ರಮುಖರು, ವಿವಿಧ ಜವಾಬ್ದಾರಿ ಹೊತ್ತ ಕಾರ್ಯಕರ್ತರೊಂದಿಗೆ ಮಹತ್ವದ ಸಭೆ ನಡೆಸಿದ್ದರು. ಅಲ್ಲದೇ ಬೂತ್‌ ವಾರು ಜವಾಬ್ದಾರಿ ಹಂಚಿಕೆ ಮಾಡಿ, ಕಾರ್ಯತಂತ್ರ ರೂಪಿಸಿದ್ದರು. ಹೀಗಾಗಿ ಬಿಜೆಪಿಗರ ಪ್ರಚಾರ ಪ್ರತಿ ಮನೆ ಹಾಗೂ ತಳಮಟ್ಟಕ್ಕೆ ಮುಟ್ಟಿತ್ತು. ಈಶ್ವರಪ್ಪ ಅವರೊಂದಿಗೆ ಕ್ಷೇತ್ರದ ಚುನಾವಣೆ ಸಂಚಾಲಕರಾಗಿದ್ದ ಬಾಗಲಕೋಟೆ ಶಾಸಕ ಡಾ| ವೀರಣ್ಣ ಚರಂತಿಮಠ ಕೂಡ, ಈ ಬಾರಿ ತನು-ಮನ-ಧನದಿಂದ ಗದ್ದಿಗೌಡರಿಗಾಗಿ ಇಡೀ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರು.

ಬಾಗಲಕೋಟೆ, ಹುನಗುಂದ, ಮುಧೋಳ, ತೇರದಾಳ, ಬೀಳಗಿ, ನರಗುಂದ ಕ್ಷೇತ್ರದಲ್ಲಿ ಬಿಜೆಪಿ ಶಾಸಕರೇ ಇದ್ದು, ಸಂಘಟನೆಗೆ ಮತ್ತಷ್ಟು ಬಲ ಕೊಟ್ಟಿತ್ತು. ಬಿಜೆಪಿಯಲ್ಲೇ ಕೆಲವರು ಒಳ ಹೊಡೆತ ಕೊಡಲು ತಂತ್ರಗಾರಿಕೆ ನಡೆಸಿದ್ದರಾದರೂ ಮೋದಿ ಅಲೆಯಲ್ಲಿ ಯಾವ ತಂತ್ರ, ಒಳ ಹೊಡೆತವೂ ಕೆಲಸ ಮಾಡಿಲ್ಲ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ ಎನ್ನಲಾಗುತ್ತಿದೆ.

ಸೋಲಿಗೆ ಕಾರಣಗಳೇನು: ಸತತ 4ನೇ ಬಾರಿ ಸೋಲು ಕಂಡಿರುವ ಕಾಂಗ್ರೆಸ್‌ ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಟಿಕೆಟ್‌ ಹಂಚಿಕೆ ಗೊಂದಲದಿಂದ ಹಿಡಿದು, ಕ್ಷೇತ್ರವಾರು ಪ್ರಚಾರದ ವೇಳೆಯೂ ಒಗ್ಗಟ್ಟು, ಸಮನ್ವಯತೆಯ ಕೊರತೆ ಕಾಂಗ್ರೆಸ್‌ನಲ್ಲಿ ಎದ್ದು ಕಾಣುತ್ತಿತ್ತು. ಅಲ್ಲದೇ ನಾನು ಬದಲಾಗಿದ್ದೇನೆ ಎಂದು ಸ್ವತಃ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೊಂಡು, ತಮ್ಮದೇ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಕ್ಕೆ ಕ್ಷಮೆ ಕೋರಿದ್ದರೂ ಅವರನ್ನು ಪೂರ್ಣ ಪ್ರಮಾಣದಲ್ಲಿ ನಂಬುವ ವ್ಯವಧಾನ, ಕಾಂಗ್ರೆಸ್‌ ನಾಯಕರು ತೋರಿದಂತೆ ಕಂಡಿಲ್ಲ. ಹೀಗಾಗಿ ಕಳೆದ 2014ರ ಲೋಕಸಭೆ ಚುನಾವಣೆಗಿಂತಲೂ ಕಾಂಗ್ರೆಸ್‌ ಮತ್ತಷ್ಟು ಹಿನ್ನಡೆ ಅನುಭವಿಸಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನ ಪಂಚ ನಾಯಕರು, ಈ ಚುನಾವಣೆ, ತಮ್ಮ ಕ್ಷೇತ್ರದ ವಿಧಾನಸಭೆ ಚುನಾವಣೆಯಂತೆ ಪ್ರತಿಷ್ಠೆಯಿಂದ ಮಾಡಿದ್ದರೆ, ನಿಶ್ಚಿತವಾಗಿ ಗೆಲ್ಲುತ್ತಿದ್ದೆವು ಎಂಬುದು ಕಾಂಗ್ರೆಸ್‌ನ ಕೆಲವರ ಅಭಿಪ್ರಾಯ. ಆದರೆ, ಮೋದಿ ಆಲೆಯನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಲಿಲ್ಲ. ಅಲೆ ಹಿಮ್ಮೆಟ್ಟಿಸಲು ಮಾಜಿ ಸಿಎಂ ಸಿದ್ದರಾಮಯ್ಯ, ಸೂಕ್ತ ಅಸ್ತ್ರ ಪ್ರಯೋಗಿಸಬೇಕಿತ್ತು ಎಂಬುದು ಮತ್ತೂ ಕೆಲವು ಕಾಂಗ್ರೆಸ್ಸಿಗರ ಮನದಾಳ.

ಫಲಿಸದ ಲಿಂಗಾಯತ ಮಹಿಳೆ ಅಸ್ತ್ರ: ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಮೂಲಕ, ಲಿಂಗಾಯತರ ಆಕ್ರೋಶಕ್ಕೆ ಕಾರಣವಾಗಿದ್ದ ಕಾಂಗ್ರೆಸ್‌, ಈ ಬಾರಿ ಲಿಂಗಾಯತರಿಗೆ ಟಿಕೆಟ್‌ ನೀಡಿ, ಅಪವಾದದಿಂದ ಹೊರ ಬರಲು ಪ್ರಯತ್ನಿಸಿತ್ತು. ಬಾಗಲಕೋಟೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಟಿಕೆಟ್‌ ನೀಡಿದ ಇತಿಹಾಸದ ದಾಖಲೆಯನ್ನೂ ಕಾಂಗ್ರೆಸ್‌, ಚುನಾವಣೆ ಆಸ್ತ್ರವನ್ನಾಗಿ ಬಳಸಿಕೊಂಡಿತ್ತು. ಜಿಲ್ಲೆಯಲ್ಲಿ ಲಿಂಗಾಯತ ಮತದಾರರ ಪ್ರಾಬಲ್ಯವಿದ್ದರೂ, ಮತಗಳನ್ನು ಪಡೆಯುವಲ್ಲಿ ಕಾಂಗ್ರೆಸ್‌ ವಿಫಲವಾಗಿರುವುದು ಸ್ಪಷ್ಟವಾಗುತ್ತಿದೆ.

ಲಿಂಗಾಯತ ಸಮಾಜದ ಉಪ ಜಾತಿ ಬಣಜಿಗ ಸಮಾಜ, ಕಾಂಗ್ರೆಸ್‌ನ ವಿರುದ್ಧ ಪ್ರಭಲವಾಗಿ ಕೆಲಸ ಮಾಡಿದೆ ಎಂಬ ಮಾತಿದೆ. ಅಲ್ಲದೇ ಕಾಂಗ್ರೆಸ್‌ ಅಭ್ಯರ್ಥಿ ಪಂಚಮಸಾಲಿ ಸಮಾಜಕ್ಕೆ ಸೇರಿದ್ದು, ಈ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಬರಲಿವೆ ಎಂಬ ವಿಶ್ವಾಸ ಹೊಂದಿತ್ತು. ಆದರೆ,
ಕ್ಷೇತ್ರವಾರು- ಜಾತಿವಾರು ಲೆಕ್ಕಾಚಾರ ಹಾಕಿದರೆ, ಪಕ್ಷಗಳ ಪಾರಂಪರಿಕ ಮತಗಳು ಆಯಾ ಆಭ್ಯರ್ಥಿಗಳಿಗೆ ಬಂದಿವೆ ಹೊರತು, ಯಾವುದೇ ಜಾತಿ-ಅಸ್ತ್ರಗಳು ಕೆಲಸ ಮಾಡಿಲ್ಲ. ಮೋದಿ ಅಲೆ ಮಾತ್ರ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿರುವುದು ಫಲಿತಾಂಶ ಸ್ಪಷ್ಟವಾಗಿ ಹೇಳುತ್ತದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಗುರುವಾರ ಕಂಡ ಕೈ ಅಭ್ಯರ್ಥಿ ಕುತೂಹಲ- ಆತಂಕ-ಭಾವುಕ
ಬಾಗಲಕೋಟೆ: ಬೆಳಗ್ಗೆ ತೀವ್ರ ಕುತೂಹಲ, ಮಧ್ಯಾಹ್ನ ಏನಾಗುತ್ತದೆಯೋ ಎಂಬ ಆತಂಕ, ಸಂಜೆಯ ಹೊತ್ತಿಗೆ ಭಾವುಕರಾಗಿ ಮತ ಎಣಿಕೆ ಕೇಂದ್ರದಿಂದ ಹೊರಗೆ… ತೋಟಗಾರಿಕೆ ವಿವಿಯ ಮತ ಎಣಿಕೆ ಕೇಂದ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಕಂಡು ಬಂದಿದ್ದು ಹೀಗೆ. ಬೆಳಗ್ಗೆ ತಮ್ಮ ಬೆಂಬಲಿಗರು ಹಾಗೂ ಪತಿ ವಿಜಯಾನಂದ ಕಾಶಪ್ಪನವರ ಅವರೊಂದಿಗೆ ಆಗಮಿಸಿದ ಅವರು, 8 ವಿಧಾನಸಭೆ ಮತಕ್ಷೇತ್ರಗಳ ಮತಯಂತ್ರ ಇಟ್ಟಿರುವ ಕೊಠಡಿಗಳಿಗೆ ಭೇಟಿ ನೀಡಿದರು. ತಮ್ಮ ಪಕ್ಷದ ಏಜೆಂಟ್‌ರು ಹಾಗೂ ಪ್ರಮುಖರೊಂದಿಗೆ ಚರ್ಚಿಸಿ, ಹುನಗುಂದ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ತೆರಳಿದರು. ಅಲ್ಲಿನ ಎಲ್ಲ ಆಭ್ಯರ್ಥಿಗಳಿಗಾಗಿ ಮೀಸಲಿರಿಸಿದ ಕೊಠಡಿಗೆ ತೆರಳಿ, ಫಲಿತಾಂಶದ ಮಾಹಿತಿ ಪಡೆಯುತ್ತಿದ್ದರು. ಮೊದಲ ಸುತ್ತಿನಲ್ಲೇ ಬಿಜೆಪಿ ಅಭ್ಯರ್ಥಿ 7232 ಮತಗಳ ಮುನ್ನಡೆ ಪಡೆದಾಗ ಆತಂಕ ಶರುವಾಯಿತು.

2ನೇ ಸುತ್ತಿಗೆ 11 ಸಾವಿರಕ್ಕೂ ಹೆಚ್ಚು ಲೀಡ್‌ ಬಿಜೆಪಿಗೆ ಬಂದಿದ್ದವು. ಮೊದಲ ಸುತ್ತಿನಿಂದ ಕೊನೆಯ ಸುತ್ತಿನ ವರೆಗೂ ಬಿಜೆಪಿಯೇ ಲೀಡ್‌ ಕಾಯ್ದುಕೊಂಡಿತ್ತು. ಮಧ್ಯಾಹ್ನ 10 ಸುತ್ತು ಪೂರ್ಣಗೊಳ್ಳುವವರೆಗೂ ಕಾಂಗ್ರೆಸ್‌ನವರು ನಿರಾಶೆಗೊಂಡಿರಲಿಲ್ಲ. 10ನೇ ಸುತ್ತಿಗೆ ಬಿಜೆಪಿಯ ಲೀಡ್‌ 70 ಸಾವಿರ ಗಡಿ ದಾಟಿತ್ತು. ಆಗ ಗೆಲುವಿನ ಆಸೆ ಕೈಬಿಟ್ಟ ಸ್ವತಃ ಅಭ್ಯರ್ಥಿ ವೀಣಾ, ಪತಿಯೊಂದಿಗೆ ಕೆಲಹೊತ್ತು ಚರ್ಚಿಸಿ, ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು. ಅರ್ಧ ಗಂಟೆ ಪತಿಯೊಂದಿಗೆ ಹೊರ ಹೋಗಿದ್ದ ಅವರು, ಪುನಃ ಮತ ಎಣಿಕೆ ಕೇಂದ್ರದೊಳಗೆ ಆಗಮಿಸಿದರು. ತಮಗೆ ಅತಿಯಾದ ನಂಬಿಕೆ ಇದ್ದ ಕ್ಷೇತ್ರ ಮತ್ತು ಮತಗಟ್ಟೆಗಳಲ್ಲಿ ಎಷ್ಟು ಮತಗಳು ಬಂದಿವೆ ಎಂದು ಏಜೆಂಟ್‌ರ ಮೂಲಕ ಮಾಹಿತಿ ಪಡೆದರು. ಬಳಿಕ ಸಂಜೆಯ ಹೊತ್ತಿಗೆ ಕೊಂಚ ಭಾವುಕರಾಗಿ ಮತ ಎಣಿಕೆ ಕೇಂದ್ರ ನಿರ್ಗಮಿಸಿದರು.

ಸೋಲರಿಯದ ಅದೃಷ್ಟವಂತ
ಬಾಗಲಕೋಟೆ: ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಸಂಭಾವಿತ, ಸರಳ ಹಾಗೂ ಅದೃಷ್ಟವಂತ ರಾಜಕಾರಣಿ ಎಂದೇ ಕರೆಸಿಕೊಳ್ಳುವ ಪಿ.ಸಿ. ಗದ್ದಿಗೌಡರು, ರಾಜಕೀಯದಲ್ಲಿ ಸತತ ಗೆಲುವಿನ ರುಚಿ ಕಂಡವರು. 1952 ಸೆಪ್ಟೆಂಬರ್‌ 20ರಂದು ಬಾದಾಮಿ ತಾಲೂಕು ಹೆಬ್ಬಳ್ಳಿಯಲ್ಲಿ ಜನಿಸಿದ ಅವರು, ಬಿಎ, ಎಲ್‌ಎಲ್‌ಬಿ ಪದವೀಧರರಾಗಿದ್ದಾರೆ. ಬಾದಾಮಿಯಲ್ಲಿ ವಕೀಲ ವೃತ್ತಿ ಮಾಡಿಕೊಂಡಿದ್ದ ಅವರು, ಪಿಎಲ್‌ಡಿ ಬ್ಯಾಂಕ್‌ ಮೂಲಕ ರಾಜಕೀಯ ಪ್ರವೇಶಿಸಿದವರು. ರಾಮಕೃಷ್ಣ ಹೆಗಡೆ, ಜೆ.ಎಚ್‌. ಪಟೇಲ್‌ ಅವರ ರಾಜಕೀಯ ತತ್ವ, ಸಿದ್ಧಾಂತಗಳನ್ನು ಅತಿಯಾಗಿ ಗೌರವಿಸುತ್ತಿದ್ದರು.

ಜೆ.ಪಿ. ಚಳುವಳಿಗೆ ಮಾರುಹೋಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಅವರು, 1980ರಿಂದ 1989ರ ವರೆಗೆ ಜೆ.ಪಿ. ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಮುಂದೆ 1986ರಿಂದ 1987ರವರೆಗೆ ಜಿಲ್ಲಾ ಪುನರ್‌ವಿಂಗಡಣಾ ಸಮಿತಿ ಅಧ್ಯಕ್ಷರಾಗಿ, ರಾಜ್ಯದ ಹಲವು ಜಿಲ್ಲೆ ಸುತ್ತಿ, ಹೊಸ ಜಿಲ್ಲೆಗಳ ರಚನೆಗೆ ಸಮಗ್ರ ವರದಿ ಕೊಟ್ಟಿದ್ದರು. 1988ರಿಂದ 1994ರ ವಿಧಾನಪರಿಷತ್‌ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಗದ್ದಿಗೌಡರು, ಬಳಿಕ 2003ರ ವರೆಗೆ ಅಖೀಲ ಭಾರತ ಪ್ರಗತಿಪರ ಜನತಾ ದಳದ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಜನತಾ ಪರಿವಾರದ ಹಲವು ಹಳೆಯ ಸ್ನೇಹಿತರೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದರು. 2004ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಾಗಲಕೋಟೆ ಕ್ಷೇತ್ರದ ಟಿಕೆಟ್‌ ಪಡೆಯುವಲ್ಲೂ ಯಶಸ್ವಿಯಾಗಿದ್ದರು. 2004, 2009, 20014 ಹಾಗೂ ಪ್ರಸ್ತುತ 2019ರ ಲೋಕಸಭೆ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎಂದೂ ಕರೆಸಿಕೊಂಡಿದ್ದಾರೆ.

ಮುಖ್ಯವಾಗಿ ಪ್ರತಿ ಬಾರಿ ಚುನಾವಣೆಯಲ್ಲೂ ಬಹುತೇಕರು ಪಕ್ಷಾತೀತವಾಗಿ ಅವರನ್ನು ಸಂಭಾವಿತ ರಾಜಕಾರಣಿ ಎಂದು ಗೌರವದಿಂದ ಕಾಣುವ ಪ್ರಸಂಗಗಳೂ ನಡೆದಿವೆ. ಪತ್ನಿ ಸುಮಿತ್ರಾಬಾಯಿ, ಪುತ್ರ ಚನ್ನನಗೌಡ ಹಾಗೂ ಪುತ್ರಿ ಅಕ್ಕಮ್ಮ ಅವರೊಂದಿಗೆ ತುಂಬು ಕುಟುಂಬದವರಾದರೂ, ತಮ್ಮ ರಾಜಕೀಯ ಕ್ಷೇತ್ರದಲ್ಲಿ ಕುಟುಂಬದ ಸದಸ್ಯರ ಹಸ್ತಕ್ಷೇಪ ಮಾಡಲು ಬಿಡದವರು. ಹೀಗಾಗಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಗದ್ದಿಗೌಡರನ್ನು ಪಕ್ಷಾತೀತವಾಗಿ ಗೌರವಿಸುವ ದೊಡ್ಡ ಬಳಗವೇ ಇದೆ

ಯಾರು ಏನಂದರು?
ಈ ಸೋಲಿನ ಹೊಣೆ ನಾವೇ ಹೊರುತ್ತೇವೆ. ಯಾರ ಮೇಲೂ ನಮ್ಮ ಆಪಾದನೆ ಇಲ್ಲ. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಿದ್ದರು. ಆದರೂ ಜನರ ತೀರ್ಪು ಒಪ್ಪುತ್ತೇವೆ. ಇಡೀ ದೇಶದಲ್ಲಿ ಬಿಜೆಪಿ ಈ ರೀತಿ ಗೆಲುವು ಸಾಧಿಸುತ್ತಿದೆ ಎಂದರೆ ಏನೋ ಶಕ್ತಿಯ ಆಟ ನಡೆಯುತ್ತಿದೆ. ಅದು ಇವಿಎಂ ಶಕ್ತಿಯೋ, ಬೇರೆ ಯಾವ ಶಕ್ತಿಯೋ ಗೊತ್ತಿಲ್ಲ. ಆ ಶಕ್ತಿ ಇರೋವರೆಗೂ ಬಿಜೆಪಿಯ ಆಟ
ನಡೆಯುತ್ತದೆ. ಆ ಶಕ್ತಿ ಆಟ ನಿಂತ ಮೇಲೆ ಮತ್ತೆ ದೇಶದಲ್ಲಿ ಕಾಂಗ್ರೆಸ್‌ ಆಟವೇ ನಡೆಯುತ್ತದೆ.
· ವಿಜಯಾನಂದ ಕಾಶಪ್ಪನವರ ಹುನಗುಂದ ಮಾಜಿ ಶಾಸಕ

ದೇಶದ ಜನ ಮೋದಿ ನಾಯಕತ್ವಕ್ಕೆ ಮತ್ತೆ ಜನಾದೇಶ ನೀಡಿದ್ದಾರೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಜನರು ಬಿಜೆಪಿ ಬೆಂಬಲಿಸಿದ್ದಾರೆ. ರಾಜ್ಯದಲ್ಲೂ ನಿರೀಕ್ಷೆಗೂ ಮೀರಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಸಮ್ಮಿಶ್ರ ಸರ್ಕಾರ, ರಾಜ್ಯದ ಜನರ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯದ ಜನ ಬಿಜೆಪಿ ಬಯಸಿದ್ದು, ವಿಧಾನಸಭೆ ವಿಸರ್ಜಿಸಿ, ಮಧ್ಯಂತರ ಚುನಾವಣೆಗೆ ಹೋಗಲು ಪಕ್ಷದ ಹಿರಿಯರು ತೀರ್ಮಾನ ಕೈಗೊಳ್ಳಬೇಕು.
· ಶ್ರೀಕಾಂತ ಕುಲಕರ್ಣಿ ಬಿಜೆಪಿ ಮಾಜಿ ಶಾಸಕ

ಬಾಗಲಕೋಟೆ ಕ್ಷೇತ್ರದಲ್ಲಿ ನಾವು ಕನಿಷ್ಠ 15ರಿಂದ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ಆದರೆ, ಮತದಾರರು ಬೇರೆಯೇ ತೀರ್ಪು ನೀಡಿದ್ದಾರೆ. ಇದನ್ನು ನಾವು ಗೌರವಿಸುತ್ತೇವೆ. ಸೋತರೂ ನಮ್ಮ ಕಾರ್ಯಕರ್ತರು ಎದೆಗುಂದಬೇಕಿಲ್ಲ. ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟನೆ ಮಾಡೋಣ.
· ಎಂ.ಬಿ. ಸೌದಾಗರ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ

ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಆಡಳಿತ ಹಾಗೂ ಜನಪರವಾದ ಯೋಜನೆಗಳಿಂದ ಇಡೀ ದೇಶದ ಜನರು, ಮತ್ತೂಮ್ಮೆ ಬಿಜೆಪಿಗೆ ದೊಡ್ಡ ಶಕ್ತಿ ತುಂಬಿದ್ದಾರೆ. ಈ ಚುನಾವಣೆಯಲ್ಲಿ ಮೋದಿ ಅವರ ದಿಟ್ಟ ನಡೆ, ಕಾರ್ಯಕರ್ತರ ಪರಿಶ್ರಮದಿಂದ ಹೆಚ್ಚು ಸ್ಥಾನ ಬಂದಿವೆ. ಭಾರತ, ವಿಶ್ವಗುರು ಸ್ಥಾನಕ್ಕೇರಿ, ಶ್ರೇಷ್ಠ ರಾಷ್ಟ್ರವಾಗಿ ಹೊರ ಹೊಮ್ಮಲಿದೆ.
· ಡಾ|ಮಾರುತೇಶ ಆರ್‌. ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ

ಸಮ್ಮಿಶ್ರ ಸರ್ಕಾರದ ಯೋಜನೆಗಳನ್ನು ಜನತೆ ಮುಂದೆ ತಿಳಿ ಹೇಳುವಲ್ಲಿ ನಾವು ವಿಫಲಗೊಂಡಿದ್ದು, ಜನರು ನೀಡಿದ ತೀರ್ಪಿಗೆ ತಲೆ ಬಾಗುವುದು ನಮ್ಮ ಧರ್ಮ ಎಂದು ಶಾಸಕ ಆನಂದ ಸಿದ್ದು ನ್ಯಾಮಗೌಡ ಹೇಳಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರ ಬರುವ ವೇಳೆಯೇ ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್‌ ಸ್ಟ್ರೈಕ್‌ ದಾಳಿ ನಡೆದಿದ್ದು, ಬಿಜೆಪಿಗೆ ಹೆಚ್ಚು ಅನುಕೂಲವಾಗಿದೆ. ಅಲ್ಲದೇ ಜೆಡಿಎಸ್‌-ಕಾಂಗ್ರೆಸ್‌ ಪಕ್ಷದಲ್ಲಿನ ಕೆಲವು ಕ್ಷೇತ್ರದಲ್ಲಿ ಹೊಂದಾಣಿಕೆ ಕೊರತೆಯಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೋಲುಂಟಾಗಿದೆ ಎಂದು ಅವರು ಹೇಳಿದ್ದಾರೆ.
· ಆನಂದ ನ್ಯಾಮಗೌಡ ಜಮಖಂಡಿ ಶಾಸಕ

ದೇಶದ ಭದ್ರತೆಯ ದೃಷ್ಟಿಯಿಂದ ಜನತೆ ಪ್ರಧಾನಿ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿ ಎಂದು ಮತದಾರರು ಆಶೀರ್ವಾದ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ ಇನ್ನಷ್ಟು ಜನಪರ ಯೋಜನೆ ಜಾರಿಗೊಳಿಸುತ್ತಾರೆ.
· ಎಂ.ಕೆ. ಪಟ್ಟಣಶೆಟ್ಟಿ, ಮಾಜಿ ಶಾಸಕರು ಬಾದಾಮಿ

ಯುವ ಜನಾಂಗ ನರೇಂದ್ರ ಮೋದಿ ಆಡಳಿತ ಮೆಚ್ಚಿ ಮತ್ತೂಮ್ಮೆ ಆಶೀರ್ವದಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಉಜ್ವಲ, ಕಿಸಾನ್‌ ಯೋಜನೆ, ಜನಧನ ಯೋಜನೆ ಸೇರಿದಂತೆ ಅನೇಕ ಯೋಜನೆ ಜಾರಿಗೊಳಿಸಿದ್ದಾರೆ.
· ಕುಮಾರಗೌಡ ಜನಾಲಿ ನಿರ್ದೇಶಕರು ಡಿಸಿಸಿ ಬ್ಯಾಂಕ್‌

ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿ ಜನಪರ ಆಡಳಿತ, ಅಂತಾರಾಷ್ಟ್ರೀಯ ವ್ಯಾಪಾರ, ಸರ್ಜಿಕಲ್‌ ಸ್ಟ್ರೈಕ್‌, ಸೇರಿದಂತೆ ದೇಶದ ಭವಿಷ್ಯದ ದೃಷ್ಟಿಯಿಂದ ದೃಢ ನಿರ್ಧಾರ ಕೈಗೊಂಡಿದ್ದಾರೆ.
· ಶಾಂತಗೌಡ ಪಾಟೀಲ, ಬಿಜೆಪಿ ಅಧ್ಯಕ್ಷರು ಬಾದಾಮಿ

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಐದು ವರ್ಷದ ಅವಧು ಯಲ್ಲಿ ಮಹಿಳೆಯರು, ರೈತರು, ಯುವಕರು, ಸೇರಿದಂತೆ ಎಲ್ಲ ವರ್ಗದವರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ಎಲ್ಲ ರಂಗಗಳಲ್ಲಿ ಮುಂದುವರಿದ ರಾಷ್ಟ್ರವಾಗಲಿ.
· ಮಹಾಂತೇಶ ಮಮದಾಪುರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶ

„ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.