ಗಣಿಗಾರಿಕೆ ತಡೆಗೆ ಆಗ್ರಹಿಸಿ ಮನವಿ
Team Udayavani, May 1, 2020, 4:49 PM IST
ಸಾಂದರ್ಭಿಕ ಚಿತ್ರ
ಇಳಕಲ್ಲ: ಬಲಕುಂದಿ ಗ್ರಾಮದ ಹತ್ತಿರ ಸ್ಥಗಿತಗೊಂಡಿದ್ದ ಗಣಿಗಾರಿಕೆಯನ್ನು ಬಿಟಿಸಿ ಕಂಪನಿಯವರು ಆರಂಭಿಸಿದ್ದಾರೆ. ಇದನ್ನು ಲಾಕ್ಡೌನ್ ಮುಗಿಯುವವರೆಗೂ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ ಗುರುವಾರ ತಹಶೀಲ್ದಾರ್ ವೇದವ್ಯಾಸ ಮುತಾಲಿಕ ಅವರಿಗೆ ಮನವಿ ಸಲ್ಲಿಸಿತು..
ತಾಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ತುಂಬದ ಮಾತನಾಡಿ, ರಾಜ್ಯದಲ್ಲಿ ಈಗ ಲಾಕ್ಡೌನ್ ಇದೆ. ಬಾಗಲಕೋಟೆ ಜಿಲ್ಲೆ ರೆಡ್ ಝೋನ್ ನಲ್ಲಿದ್ದರೂ ಗಣಿಗಾರಿಕೆ ಆರಂಭಿಸಿದ್ದಾರೆ. ಗಣಿಗಾರಿಕೆ ಕೆಲಸಕ್ಕೆ ಗದಗ, ಹುಬ್ಬಳ್ಳಿಯ ಕಾರ್ಮಿಕರನ್ನು ಕರೆಸಿಕೊಳ್ಳುತ್ತಿದ್ದು, ಇದರಿಂದ ಬಲಕುಂದಿ ಹಾಗೂ ಸುತ್ತುಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಪರಸ್ಥಳದಿಂದ ಆಗಮಿಸುವ ಕಾರ್ಮಿಕರಿಂದ ಕೊರೊನಾ ಹರಡುತ್ತದೆಯೋ ಎಂಬ ಭೀತಿ ಗ್ರಾಮಸ್ಥರಲ್ಲಿ ಆವರಿಸಿದೆ. ಲಾಕ್ ಡೌನ್ದಿಂದ ಮುಕ್ತಿ ಆಗುವವರೆಗೂ ಗಣಿಗಾರಿಕೆ ನಡೆಸದಂತೆ ತಾಲೂಕು ಆಡಳಿತ ತಡೆಯಬೇಕು. ಇಲ್ಲವಾದರೇ ಗ್ರಾಮಸ್ಥರು ಗಣಿಗಾರಿಕೆ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ರೈತ ಮುಖಂಡರಾದ ಎಚ್.ಬಿ. ಪಾಟೀಲ, ಎಂ.ವೈ. ಕಾಲಗಗ್ಗರಿ ಹಾಗೂ ಇತರರು ಉಪಸ್ಥಿತರಿದ್ದರು.