ಬಿವಿವಿ ಸಂಘದ ಆಯುರ್ವೇದ ಕಾಲೇಜ್ ಕಾರ್ಯಕ್ಕೆ ಮೆಚ್ಚುಗೆ
Team Udayavani, Jun 25, 2020, 1:09 PM IST
ಬಾಗಲಕೋಟೆ: ಕೇಂದ್ರ ಸರ್ಕಾರದ ಆಯುಷ್ ಇಲಾಖೆ ಅಧೀನದಲ್ಲಿ ಬರುವ ಹೋಮಿಯೋಪಥಿಕ್ ಸಂಶೋಧನಾ ಕೇಂದ್ರದ ನಿರ್ದೇಶನದ ಮೇರೆಗೆ ಔಷಧ ವಿತರಣೆ ಪ್ರತಿದಿನವು ಕಳುಹಿಸಲಾಗಿದ್ದು, ಇಲಾಖೆಯವರು ಪರಿಶಿಲಿಸಿ, ಬಿವಿವಿ ಸಂಘದ ಹೋಮಿಯೋಪಥಿ ಕಾಲೇಜಿನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಡಾ|ವೀರಣ್ಣ ಚರಂತಿಮಠ ತಿಳಿಸಿದ್ದಾರೆ.
ಔಷಧ ವಿತರಿಸಿದ ಕಾಲೇಜುಗಳಲ್ಲಿ ದೇಶದಲ್ಲಿಯೇ 29 ಕಾಲೇಜು ಆಸ್ಪತ್ರೆಗಳನ್ನು ಆಯ್ಕೆ ಮಾಡಿದ್ದು, ಆಯ್ಕೆಗೊಂಡ ಕಾಲೇಜುಗಳ ಪೈಕಿ ಬಿವಿವಿ ಸಂಘದ ಹೋಮಿಯೋಪಥಿಕ್ ಕಾಲೇಜು ಸಹ ಒಂದಾಗಿದೆ. ಕೋವಿಡ್ -19 ಮುಖ್ಯವಾಹಿನಿಯ ವಾರಿಯರ್ ಗಳಾದ ವೈದ್ಯರು, ನರ್ಸ್, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪತ್ರಕರ್ತರು, ಸ್ವಚ್ಛತಾ ಸಿಬ್ಬಂದಿಗೆ ಹಾಗೂ ಕೋವಿಡ್ ಸೋಂಕಿತರ ಪ್ರದೇಶದಲ್ಲಿನ ನಿವಾಸಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪಥಿಕ್ ಔಷಧ ಉಚಿತವಾಗಿ ವಿತರಣೆ ಮಾಡಿರುವುದಕ್ಕೆ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯಡಿಯಲ್ಲಿ ಬರುವ ಹೋಮಿಯೋಪಥಿಕ್ ಸಂಶೋಧನಾ ಕೇಂದ್ರದಿಂದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದ್ದಾರೆ.
ಕೋವಿಡ್ ವಾರಿಯರ್ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿತರ ಸುತ್ತಮುತ್ತಲಿನ ಸ್ಥಳಗಳಲ್ಲಿಯ ಎಲ್ಲ ಸಾರ್ವಜನಿಕರಿಗೆ ನಗರದ ಬಿವಿವಿ ಸಂಘದ ಹೋಮಿಯೋಪಥಿಕ್ ಕಾಲೇಜಿನಿಂದ ಸುಮಾರು 37,500 ಜನರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪಥಿಕ್ ಔಷಧ ಉಚಿತವಾಗಿ ವಿತರಿಸಲಾಗಿದೆ. ದಿನನಿತ್ಯವು ಬಾಗಲಕೋಟೆ ಜನರು ಕಾಲೇಜಿನ ಹೊರರೋಗಿಗಳ ವಿಭಾಗದಿಂದ ಈಗಲೂ ಔಷಧ ಪಡೆಯುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.