ಅಹವಾಲು ಸಲ್ಲಿಕೆಗಿಂತ ಅದ್ಧೂರಿಯೇ ಜೋರು!
ತುಳಸಿಗೇರಿಯಲ್ಲಿ ಸ್ವಾಗತ ನೀಡಿದ ಕಟೌಟ್-ಡೊಳ್ಳು ತಂಡ! ಮುಂದೆ ಈ ರೀತಿ ಅದ್ಧೂರಿ ಬೇಡ ಎಂದ ಡಿಸಿ
Team Udayavani, Mar 21, 2021, 8:35 PM IST
ಬಾಗಲಕೋಟೆ: ಕಂದಾಯ ಇಲಾಖೆಯ ಪ್ರಮುಖ ಸಮಸ್ಯೆಗಳ ಇತ್ಯರ್ಥಕ್ಕಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಅಹವಾಲು ಸಲ್ಲಿಕೆಗಿಂತ ಅದ್ಧೂರಿಯೇ ಜೋರಾಗಿ ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ಶನಿವಾರ ತಾಲೂಕಿನ ತುಳಸಿಗೇರಿಯಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದ ವೇಳೆ ಇದು ಕಂಡು ಬಂದಿತು. ಜಿಲ್ಲಾಧಿಕಾರಿ ಸ್ವಾಗತಕ್ಕೆ (ಸಚಿವರು, ಶಾಸಕರಿಗೆ ಹಾಕುವ ರೀತಿ) ದೊಡ್ಡ ಸ್ವಾಗತ ಕಮಾನ ಹಾಕಿ ಸ್ವಾಗತದ ಕಟೌಟ್ ಹಾಕಲಾಗಿತ್ತು. ಬಳಿಕ ಹೂವುಗಳಿಂದ ಸಿಂಗರಿಸಿದ್ದ ಎತ್ತಿನ ಬಂಡಿಯಲ್ಲಿ ಗ್ರಾಪಂ ಕಚೇರಿವರೆಗೂ ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ನಂತರ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಡಿಸಿ ಅವರನ್ನು ರೇಷ್ಮೆ ರುಮಾಲು ಸುತ್ತಿ, ತುಳಸಿಗೇರಿಯ ಆಂಜನೇಯ ಭಾವಚಿತ್ರ ನೀಡಿ ಸನ್ಮಾನಿಸಿದರು.
ಸನ್ಮಾನ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿಗಳು ಗ್ರಾಮ ಪ್ರದಕ್ಷಿಣೆಗೆ ತೆರಳುವ ಮಾರ್ಗದಲ್ಲಿ ಕಟೌಟ್ ಹಾಕಲಾಗಿತ್ತು. ಇದೆಲ್ಲವನ್ನೂ ನೋಡಿದ ಜಿಲ್ಲಾಧಿಕಾರಿ ರಾಜೇಂದ್ರ, ಮನಮುಟ್ಟುವ ರೀತಿ ಸ್ವಾಗತ ನೀಡಿದ್ದೀರಿ. ಗ್ರಾಮಸ್ಥರ ಪ್ರೀತಿ-ಗೌರವ ಪಡೆದಿದ್ದೇನೆ. ಇಂತಹ ಅದ್ಧೂರಿ ಸ್ವಾಗತಕ್ಕಿಂತ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬುದು ನಮ್ಮ ಗುರಿ. ಮುಂದೆ ಯಾವುದೇ ಗ್ರಾಮದಲ್ಲಿ ವಾಸ್ತವ್ಯ ನಡೆದರೂ ಈ ರೀತಿಯ ಅದ್ಧೂರಿತನ ಮಾಡಬಾರದು ಎಂದು ತಾಪಂ ಇಒ ಬಸರಿಗಿಡದ ಅವರಿಗೆ ಸೂಚಿಸಿದರು.
ಕೆರೆ ತುಂಬಿಸಲು ಕ್ರಮ: ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ಶನಿವಾರ ಇಡೀ ದಿನ ವಾಸ್ತವ್ಯ ಮಾಡುವ ಮೂಲಕ ಗ್ರಾಮದ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಪ್ರಯತ್ನ ಮಾಡಿದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲ ಕಾಲ್ನಡಿಗೆಯಲ್ಲಿ ಗ್ರಾಮದಲ್ಲಿ ಸಂಚರಿಸುತ್ತ ಜನರ ಸಮಸ್ಯೆ ಆಲಿಸಿದರು. ಸಂಚರಿಸುವ ವೇಳೆಯಲ್ಲಿ ಗ್ರಾಮದಲ್ಲಿನ ಕೆರೆಯನ್ನು ವೀಕ್ಷಿಸಿದರು. ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ. ಈಗ ಛಬ್ಬಿ ಬಳಿಯ ಘಟಪ್ರಭಾ ನದಿಯಿಂದ ಕುಡಿಯುವ ನೀರು ಪೂರೈಕೆಯ ಪೈಪ್ಲೈನ್ನಿಂದ ನೀರು ಬಿಡಲಾಗುತ್ತಿದೆ. ಅದು ಕೇವಲ 2 ಇಂಚು ಪೈಪ್ ಮೂಲಕ ನೀರು ಬರುತ್ತಿದ್ದು, ಅದು ವೇಗವಾಗಿ ಬರುವುದಿಲ್ಲ. ಹೀಗಾಗಿ ಊರಿನ ಎರಡು ಕೆರೆ ತುಂಬಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಕಡಿಮೆ ವೆಚ್ಚದ ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದರು.
ಮಕ್ಕಳ ಜನ್ಮ ದಿನ ಆಚರಣೆ: ಅಂಗನವಾಡಿ ನಂ.5ಕ್ಕೆ ಭೇಟಿ ನೀಡಿದ ವೇಳೆ 5 ವರ್ಷದ ಶ್ರಾವಣಿ ವಿಠuಲ ಮೇದಾರ ಮತ್ತು 4 ವರ್ಷದ ವರ್ಷಿಣಿ ಸಂತೋಷ ಗಿಡ್ಡಿ ಎಂಬ ಮಕ್ಕಳ ಜನ್ಮದಿನ ಶನಿವಾರವೇ ಇತ್ತು. ಆ ಮಕ್ಕಳ ಹುಟ್ಟುಹಬ್ಬವನ್ನು ಡಿಸಿ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಅಂಗನವಾಡಿ ಕೇಂದ್ರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ಮಕ್ಕಳಿಗೆ ಜಿಲ್ಲಾಧಿಕಾರಿಗಳು ಶುಭಾಶಯ ಕೋರಿದರು.
ನ್ಯಾಯಬೆಲೆ ಅಂಗಡಿ, ಗಡಿಮನೆ, ಜಿಮ್ ಹಾಗೂ ರಾಷ್ಟ್ರಧ್ವಜದ ಬಟ್ಟೆ ನೇಯ್ಗೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ರಾಷ್ಟ್ರಧ್ವಜ ಬಟ್ಟೆ ನೇಯ್ಗೆಯ ಕಾರ್ಮಿಕರಿಗೆ ದಿನಗೂಲಿ ಹೆಚ್ಚಳ ಮಾಡುವಂತೆ ಮನವಿ ಮಾಡಿಕೊಳ್ಳಲಾಯಿತು. ರಾಷ್ಟ್ರಧ್ವಜದ ಬಟ್ಟೆಯನ್ನು ತಯಾರಿಸುವ ನೇಕಾರಿಗೆ ಸರಕಾರದಿಂದ ಸಹಾಯಧನ ದೊರಕಿಸಿಕೊಡಬೇಕು. ಈ ಕೇಂದ್ರದಲ್ಲಿ 100 ಜನ ಮಹಿಳೆಯರು ಕೆಲಸ ಮಾಡುತ್ತಿದ್ದು, ಬೆಳಿಗ್ಗೆಯಿಂದ ಸಂಜೆಯವರೆಗೂ ದುಡಿದರೆ 120ರೂ.ಗಳ ಕೂಲಿ ಮಾತ್ರ ದೊರೆಯುತ್ತಿರುವದನ್ನು ಕಂಡು ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.
ಡಿಸಿಯನ್ನು ಸ್ವಾಗತಿಸಿದ ಮಕ್ಕಳು: ಅಂನಗವಾಡಿ ಕೇಂದ್ರ ನಂ.2ರಲ್ಲಿ ಬಸವಣ್ಣ, ಕಿತ್ತೂರ ರಾಣಿ ಚನ್ನಮ್ಮ ಹೀಗೆ ವಿವಿಧ ವೇಷಭೂಷಣ ಹಾಕಿದ ಮಕ್ಕಳು ಜಿಲ್ಲಾಧಿಕಾರಿಗಳನ್ನು ವಿಶೇಷವಾಗಿ ಸ್ವಾಗತಿಸಿದರು. ಮಕ್ಕಳೊಂದಿಗೆ ಅನ್ಯೋನ್ಯವಾಗಿ ಬೆರೆತ ಜಿಲ್ಲಾಧಿಕಾರಿ ಅವರ ಹೆಸರು ಕೇಳಿದರು. ಇದೇ ವೇಳೆ ಮಕ್ಕಳು ಹಾಡು ಹೇಳಿ ಗಮನ ಸೆಳೆದರು. ಮದುವೆಯಾಗದೇ ಮನೆಯಲ್ಲಿಯೇ ಮಾನಸಿಕವಾಗಿ ಅಸ್ವಸ್ಥರಾದ ಮಹಿಳೆಗೆ ಪಿಂಚಣಿ ಸೌಲಭ್ಯ ಕಲ್ಪಿಸುವ ಬೇಡಿಕೆಯನ್ನು ಆಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮಕ್ಕಾಗಿ ಸೂಚಿಸಿದರಲ್ಲದೇ ಸಂಬಂಧಪಟ್ಟ ಸೈಕಾಟ್ರಿಸ್ಟ್ ಕಡೆ ಪರೀಕ್ಷೆ ಮಾಡಿಸಲು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಪಂ ಸದಸ್ಯರಾದ ಹೂವಪ್ಪ ರಾಠೊಡ, ಶೋಭಾ ಬಿರಾದಾರ, ಗ್ರಾಪಂ. ಅಧ್ಯಕ್ಷೆ ಮಂಜುಳಾ ಭಂಗಿ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಭೂದಾಖಲೆ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುಳಗುಂದ, ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪನಿರ್ದೇಶಕ ಎ.ಕೆ.ಬಸಣ್ಣವರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ತಾಪಂ ಇಒ ಎನ್.ವೈ. ಬಸರಿಗಿಡದ ಉಪಸ್ಥಿತರಿದ್ದರು.