ತಾಲೂಕು ಹೋರಾಟಕ್ಕೆ ಜಿಲ್ಲಾ ಜೆಡಿಎಸ್ ಬೆಂಬಲ
ತಾಲೂಕು ಬೇಡಿಕೆ ನ್ಯಾಯಸಮ್ಮತ; ಬಿಜೆಪಿ ಸರ್ಕಾರ ಜನರ ಹೋರಾಟಕ್ಕೆ ಸ್ಪಂದಿಸಲಿ
Team Udayavani, Jul 12, 2022, 5:46 PM IST
ಮಹಾಲಿಂಗಪುರ: ಜನಸಂಖ್ಯೆಗೆ ಅನುಗುಣವಾಗಿ ಭೌಗೋಳಿಕ ಹಾಗೂ ವೈಜ್ಞಾನಿಕವಾಗಿ ತಾಲೂಕು ಕೇಂದ್ರವಾಗಲು ಮಹಾಲಿಂಗಪುರ ಯೋಗ್ಯ ಪಟ್ಟಣವಾಗಿದ್ದು, ಈ ಭಾಗದ ಜನತೆ ತಾಲೂಕು ಬೇಡಿಕೆ ನ್ಯಾಯಸಮ್ಮತವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.
ಪಟ್ಟಣದಲ್ಲಿ ತಾಲೂಕು ಹೋರಾಟ ವೇದಿಕೆಗೆ ಭೇಟಿ ನೀಡಿ ಮಾತನಾಡಿದ ಅವರು, ಜೆಡಿಎಸ್ ತಾಲೂಕು ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ. ನಿರಂತರವಾಗಿ 89 ದಿನಗಳವರೆಗೆ ಇಲ್ಲಿಯ ಜನರು ಹೋರಾಟ ಮಾಡುತ್ತಿದ್ದು ರಾಜಕೀಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗದ ಜನತೆಯ ಬೇಡಿಕೆ ಇನ್ನುವರೆಗೂ ಈಡೇರಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರಿಗೂ ಅಧಿಕಾರದಲ್ಲಿರುವ ಜನಪ್ರತಿನಿಧಿಗಳಿಗೂ ಒಳ್ಳೆಯ ಅವಕಾಶ ಇದೆ. ನಿಮ್ಮನ್ನು ಬೆಂಬಲಿಸಿದ ಜನತೆಯ ಋಣ ತೀರಿಸುವ ಕೆಲಸ ಮಾಡಿ. ಮಾಜಿ ಸಿಎಂ ಕುಮಾರಸ್ವಾಮಿಯವರು ಮತ್ತೆ ಮುಖ್ಯಮಂತ್ರಿಗಳಾಗುವ ಎಲ್ಲ ಲಕ್ಷಣಗಳಿವೆ. ಒಂದೊಮ್ಮೆ ಸರ್ಕಾರ ಮಹಾಲಿಂಗಪುರ ತಾಲೂಕು ಘೋಷಣೆ ಮಾಡದಿದ್ದರೆ ನಾವು ಕುಮಾರಸ್ವಾಮಿಯವರ ಮೂಲಕ 100ಕ್ಕೆ 100ರಷ್ಟು ತಾಲೂಕು ರಚನೆಯಾಗುವಂತೆ ಮಾಡುತ್ತೇವೆ ಎಂದರು.
ಕಾರಣ ಮುಖ್ಯಮಂತ್ರಿಗಳಿಗೆ ಸ್ಥಳೀಯ ಶಾಸಕರಿಗೆ ಈಗ ಒಳ್ಳೆಯ ಅವಕಾಶ ಇದೆ. ಇದನ್ನು ಕಳೆದುಕೊಂಡರೆ ಈ ಭಾಗದ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ. ಮಹಾಲಿಂಗಪುರ ತಾಲೂಕು ರಚನೆ ಆಗುವವರೆಗೂ ಈ ಹೋರಾಟದಲ್ಲಿ ನಿರಂತರವಾಗಿ ಭಾಗವಹಿಸುವಂತೆ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಕುರಿತು ಕೂಡಲೇ ಮಾಜಿ ಸಿಎಂ ಕುಮಾರಸ್ವಾಮಿಯವರ ಮೂಲಕ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
ಜೆಡಿಎಸ್ ರಬಕವಿ-ಬನಹಟ್ಟಿ ತಾಲೂಕು ಅಧ್ಯಕ್ಷ ಸುರೇಶ ಮಡಿವಾಳರ ಮಾತನಾಡಿ, ಮಾಜಿ ಪ್ರಧಾನಿ ದೇವೆಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳಿದ್ದ ಸಂದರ್ಭದಲ್ಲಿ ಮಹಾಲಿಂಗಪುರಕ್ಕೆ ವಿದ್ಯುತ್ ಕೇಂದ್ರ, ಸರ್ಕಾರಿ ಆಸ್ಪತ್ರೆ, ಪಶು ಚಿಕಿತ್ಸಾಲಯ ಮಂಜೂರು ಮಾಡಿದ್ದರು. ಅಲ್ಲದೇ ಕುಮಾರ ಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ಮಹಾಲಿಂಗಪುರ ಪುರಸಭೆ ನೂತನ ಕಟ್ಟಡ ನಿರ್ಮಾಣ ಮಾಡಲು ಹಣ ಬಿಡುಗಡೆ ಮಾಡಿದರು. ಆದರೆ, ಈಗ ಅಧಿಕಾರದಲ್ಲಿದ್ದವರು ಮಹಾಲಿಂಗಪುರದಲ್ಲಿ ಹೊಸ ಕಚೇರಿ ತೆರೆಯಲು ಸ್ಥಳವೇ ಇಲ್ಲವೆಂದು ಹೇಳುತ್ತಾರೆ. ನಿಮಗೆ ಎಷ್ಟು ಬೇಕೋ ಅಷ್ಟು ಜಾಗ ತೋರಿಸುತ್ತೇವೆ ಎಂದರು. ಕಂಕನವಾಡಿಯ ಮಾರುತಿ ಶರಣರು, ಬನಹಟ್ಟಿಯ ಗಿರಿಮಲ್ಲೇಶ್ವರ ಮಹಾರಾಜರು, ಪರಮೇಶ ಹಡಲಗಿ ಮಾತನಾಡಿದರು.
ಜೆಡಿಎಸ್ ಮುಖಂಡರಾದ ನಿಂಗಪ್ಪ ಬಾಳಿಕಾಯಿ, ವೀರೇಶ ನ್ಯಾಮಗೌಡ, ನಾಗಪ್ಪ ಹ್ಯಾಗಾಡಿ, ರಂಗನಾಥ ಮಳೆಪ್ಪಗೋಳ, ಗುಡುಸಾಬ ಹೊನವಾಡ, ಜಗದೀಶ ಬಡಿಗೇರ, ಮಲ್ಲಯ್ಯ ಮಠಪತಿ, ಗುರುದೇವ ಹಿರೇಮಠ, ಮಹಮ್ಮದ ಕಕ್ಕೇರಿ, ಶಿವಾನಂದ ನಾಯಕ, ಈಶ್ವರ ಕುಂದರಗಿ, ವಿಠ್ಠಲ ಹನಗಂಡಿ, ಕಾಂತು ಹೊಸಕೋಟಿ, ಚಂದ್ರಶೇಖರ ಮುಂಡಗನೂರ, ವಿಜಯಕುಮಾರ ಹಾಸಿಲಕರ ಇದ್ದರು.
ತಾಲೂಕು ಹೋರಾಟ ಸಮಿತಿಯ ಸಂಗಪ್ಪ ಹಲ್ಲಿ, ಹಣಮಂತ ಜಮಾದಾರ, ಸಿದ್ದು ಶಿರೋಳ, ಜಯರಾಮ ಶೆಟ್ಟಿ, ಈಶ್ವರ ಮುರಗೋಡ, ರಫೀಕ ಮಾಲದಾರ ಇದ್ದರು.