ವೃದ್ಧ ಬಲಿ: ಶತ ಪ್ರಶ್ನೆಗಳಿಗೆ ಉತ್ತರ ನಿಗೂಢ!
Team Udayavani, Apr 5, 2020, 2:30 PM IST
ಬಾಗಲಕೋಟೆ: ಕೋವಿಡ್ 19 ಎಂಬ ಮಹಾಮಾರಿಗೆ ಜಿಲ್ಲೆಯ ರಾಯಲ್ ಕುಟುಂಬದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ತಾವಾಯಿತು, ತಮ್ಮ ಮನೆ-ಅಂಗಡಿಯೊಂದಿಗೆ ವ್ಯಾಪಾರ ಮಾಡಿಕೊಂಡಿದ್ದ ಈ ವೃದ್ಧನಿಗೆ ಇಂತಹ ಮಹಾಮಾರಿ ಎಲ್ಲಿಂದ ತಗುಲಿತು ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಇನ್ನೂ ನಿಗೂಢವಾಗಿದೆ.
ಹೌದು, ವೃದ್ಧನಿಗೆ ಕೊರೊನಾ ಹೇಗೆ ಬಂತು, ಅವರ ಮನೆಯವರ ತಪಾಸಣೆ ಮಾಡಲಾಗಿದೆಯಾ, ಅವರ ವರದಿ ಏನು ಬಂದಿದೆ ಹೀಗೆ ಹಲವು ಪ್ರಶ್ನೆಗಳನ್ನು ನಗರದ ಸಾಮಾನ್ಯ ಜನರು ಕೇಳುತ್ತಿದ್ದರೆ, ಆ ಅಜ್ಜಗ್ ಹ್ಯಾಂಗ್ ಬಂತ್ರಿ ಎಂಬ ಪ್ರಶ್ನೆಯನ್ನೇ ಮೊದಲಿಡುತ್ತಿದ್ದಾರೆ.
ಹಲವು ಅನುಮಾನಗಳಿಗೆ ಬೇಕಿದೆ ಉತ್ತರ: ವೃದ್ಧನಿಗೆ ಸೋಂಕು ದೃಢಪಟ್ಟ ವರದಿ ಬಂದಿದ್ದೇ ತಡ, ಒಂದು ಕ್ಷಣ ಜಿಲ್ಲಾಡಳಿತವೂ ತೀವ್ರತೆಯಲ್ಲಿ ಬಿದ್ದಿತ್ತು. ಸ್ವತಃ ಜಿಲ್ಲಾಧಿಕಾರಿ, ಎಸ್ಪಿ ಸಹಿತ ಅಂದು ರಾತ್ರಿ ನಿದ್ರೆಯನ್ನೇ ಮಾಡಿರಲಿಲ್ಲ. ನಮ್ಮ ಜಿಲ್ಲೆಯಲ್ಲಿ ಈ ಸೋಂಕು ಕಾಣಿಸಬಾರದು ಎಂದು ಪ್ರಾರ್ಥನೆ ಮಾಡುತ್ತಿದ್ದ ಜಿಲ್ಲೆಯ ಜನರ ಆಶೆ ಹುಸಿಯಾಗಿತ್ತು. ವೃದ್ಧನಿಗೆ ಈ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಹಲವು ಪ್ರಶ್ನೆ-ಅನುಮಾನಗಳು ಹರಿದಾಡುತ್ತಿವೆ. ಅದು ಹೇಗೆ ಬಂತು ಎಂಬುದೇ ದೊಡ್ಡ ಪ್ರಶ್ನೆ.
ಮನೆ ಮನೆಯ ಸಮೀಕ್ಷೆ ಶುರು: ನಗರಕ್ಕೆ ಈ ಸೋಂಕು ಬಂದಿದ್ದು ಹೇಗೆ, ವೃದ್ಧನಿಗೆ ಹೇಗೆ ತಗುಲಿತು ಎಂಬುದರ ಕುರಿತು ಜಿಲ್ಲಾಡಳಿತ ತಳ ಮಟ್ಟದ ಸಮೀಕ್ಷೆಗೆ ಇಳಿದಿದೆ. ತರಕಾರಿ ಮಾರುಕಟ್ಟಯಲ್ಲಿ ವೃದ್ಧನಿಗೆ ಸೇರಿದ ಅಂಗಡಿ ಇದ್ದು, ಆ ಅಂಗಡಿಯ ಸುತ್ತಲಿನ ಇತರೇ ಅಂಗಡಿಗಳ ಮಾಲೀಕರು, ಅವರ ಮನೆಗಳ ಏರಿಯಾ, ಅಂಗಡಿಗೆ ಬಂದು ಹೋದವರ ವಿವರ ಪಡೆಯಬೇಕಿದೆ. ಮುಖ್ಯವಾಗಿ ಅಂಗಡಿಯ ಪಕ್ಕದಲ್ಲಿ ಮೂರು ಮಹಡಿಯ ಕಟ್ಟಡವೊಂದಿದ್ದು, ಅಲ್ಲಿಗೆ ಬಂದು ಹೋಗಿದ್ದವರ ವಿವರವೂ ಪಡೆಯಲೇಬೇಕು ಎಂಬ ಮಾತು ಕೆಲ ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ.
ಸಧ್ಯ ಹಳಪೇಟ ಮಡು ಸೇರಿದಂತೆ ವೃದ್ಧನ ಮನೆಯ ಸುತ್ತಲಿನ ಪ್ರದೇಶದ ಪ್ರತಿ ಮನೆ ಮನೆಗೂ ತೆರಳಿ, ಸರ್ವೇ ಮಾಡಲಾಗುತ್ತಿದೆ. ವೃದ್ಧನ ಅಂಗಡಿಯ ಪಕ್ಕದ ಎಲ್ಲ ಅಂಗಡಿಗಳು ಸದ್ಯ ಬಾಗಿಲು ಹಾಕಿದ್ದು, ಆ ಅಂಗಡಿಗಳ ಮಾಲೀಕರ ವಿವರ, ಅವರೊಂದಿಗೆ ಸಂಪರ್ಕ ಹೊಂದಿದ್ದವು. ಬಳಿಕ ಆ ಅಂಗಡಿಯವರು ವೃದ್ಧನೊಂದಿಗೆ ಸಂಪರ್ಕ ಹೊಂದಿದ್ದರೆ ಎಂಬುದೆಲ್ಲವೂ
ಪರಿಶೀಲನೆ ಮಾಡುವ ಜತೆಗೆ ಕೋವಿಡ್ 19 ಹೇಗೆ-ಎಲ್ಲಿಂದ ಬಂತು ಎಂಬುದು ಬಹುಬೇಗ ಪತ್ತೆ ಮಾಡಬೇಕಾದ ಅನಿರ್ವಾತೆ ಜಿಲ್ಲಾಡಳಿತಕ್ಕಿದೆ. ಯಾರಿಂದ ಬಂತು- ಆತ ಎಲ್ಲಿ: ಈ ಕೋವಿಡ್ 19 ಸೋಂಕು ನಗರದಲ್ಲಿ ಹುಟ್ಟಿಕೊಳ್ಳಲು ಸಾಧ್ಯವಿಲ್ಲ. ಬೇರೆ ಎಲ್ಲಿಂದಲೋ ಬಂದಿರಲೇಬೇಕು. ಇದರ ಮೂಲ ಹುಡುಕುವುದೇ ಈಗ ದೊಡ್ಡ ಸವಾಲಿನ ಕೆಲಸವಾಗಿದೆ. ವೃದ್ಧನಿಗೆ ಈ ಸೋಂಕು ಬರುವ ಮುಂಚೆ, ಮತ್ತೂಬ್ಬ ವ್ಯಕ್ತಿಗೆ ಇರಲೇಬೇಕು. ಆತನೊಂದಿಗೆ ಸಂಪರ್ಕ ಅಥವಾ ಇನ್ಯಾವುದೋ ರೀತಿಯ ವ್ಯವಹಾರ, ಅಕ್ಕ-ಪಕ್ಕದಲ್ಲಿ ಕುಳಿತುಕೊಳ್ಳುವ ಮೂಲಕವೋ ಹೀಗೆ ಯಾವುದೋ ರೀತಿ ಬಂದಿರಲಿಕ್ಕೆ ಸಾಕು. ಆದರೆ, ಆತ ಯಾರು, ಎಲ್ಲಿಂದ ಬಂದಿದ್ದ, ವೃದ್ಧನಿಗೆ ಹೇಗೆ ತಗುಲಲು ಏನು ಕಾರಣ ಎಂಬುದು ಪತ್ತೆಯಾಗಬೇಕಿದೆ. ವೃದ್ಧನಿಗೂ ಮುಂಚೆ ಯಾರಿಗೇ ಬಂದಿದ್ದರೂ ಆತ, ಆತನ ಆರೋಗ್ಯ ಇನ್ನೂ ಗಂಭೀರವಾಗಿರಬೇಕಲ್ಲ. ಇಲ್ಲವೇ ಆತನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೂ ಆತನಿಗೆ ಸೋಂಕಿರುವ ಲಕ್ಷಣ ಕಂಡು ಬಂದಿರಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಪತ್ನಿ-ಸಹೋದರನ ವರದಿ ಬಂದಿಲ್ಲ : ಮೃತ ವ್ಯಕ್ತಿಯ ಮನೆಯಲ್ಲಿದ್ದ 5 ಜನರ ಸ್ಯಾಂಪಲ್ ವರದಿಯಲ್ಲಿ ಪತ್ನಿ ಮತ್ತು ತಮ್ಮನ ವರದಿ ಬರಬೇಕಿದೆ. ಕಿರಾಣಿ ಅಂಗಡಿಗೆ ಬಂದು ಹೋದವರು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ಪ್ರಕಾಶ ಬಿರಾದಾರ ಅವರಿಗೆ ಮಾಹಿತಿ ನೀಡಲು ತಿಳಿಸಲಾಗಿದೆ.
ವಿಪತ್ತು ನಿರ್ವಹಣೆ ಸಮಿತಿ ಮಾರ್ಗಸೂಚಿಯಂತೆ ಅಂತ್ಯ ಸಂಸ್ಕಾರ : ಕೋವಿಡ್ 19 ಸೋಂಕಿಗೆ ಮೃತಪಟ್ಟ ನಗರದ 75 ವರ್ಷದ ವೃದ್ಧರ ಅಂತ್ಯಕ್ರಿಯೆಯನ್ನು ಶುಕ್ರವಾರ ರಾತ್ರಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡು ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ ತಿಳಿಸಿದ್ದಾರೆ. ಮೃತಪಟ್ಟ ವ್ಯಕ್ತಿಯು ಮಾ. 31ರಂದು ಅನಾರೋಗ್ಯದ ಕಾರಣ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್-19 ಸೋಂಕು ಇರುವುದು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಹೀಗಾಗಿ ಜಿಲ್ಲಾ ವಿಪತ್ತು ನಿರ್ವಹಣೆ ಸಮಿತಿಯ ಮಾರ್ಗಸೂಚಿಯಂತೆ ಎಲ್ಲ ರೀತಿಯ ಮುಂಜಾಗ್ರತ ಕ್ರಮದೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ವೃದ್ಧನ ಕುಟುಂಬದೊಂದಿಗೆ 70 ಜನ ಸಂಪರ್ಕ : ಹಳೆಯ ಬಾಗಲಕೋಟೆಯ ವ್ಯಕ್ತಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದು, ಮೃತನ ವಾಸದ ಸುತ್ತಲೂ ನಿರ್ಬಂಧ ಹೇರಲಾಗಿದೆ. ಜನರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ವೃದ್ಧನ ಕುಟುಂಬದೊಂದಿಗೆ ಸಂಪರ್ಕ ಇದ್ದ 70 ಜನರನ್ನು ಗುರುತಿಸಲಾಗಿದೆ. – ಡಾ| ದೇಸಾಯಿ, ಡಿಎಚ್ಒ
-ಶ್ರೀಶೈಲ ಕೆ. ಬಿರಾದಾರ