ಬಿಜೆಪಿಯಿಂದ ಕರಾಳ ಶಾಸನ ಜಾರಿ: ನಂಜಯ್ಯನಮಠ
Team Udayavani, Jun 16, 2020, 4:19 PM IST
ಮುಧೋಳ: ರಾಜ್ಯ ಬಿಜೆಪಿ ಸರ್ಕಾರ 108 ಎಕರೆವರೆಗೆ ಖುಷ್ಕಿ ಜಮೀನು ಖರೀದಿಗೆ ಕೃಷಿಯೇತರರಿಗೂ ಅವಕಾಶ ಮಾಡಿ ಕರಾಳ ಶಾಸನ ಜಾರಿಗೊಳಿಸಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಅಧ್ಯಕ್ಷ ನಂದಕುಮಾರ ಪಾಟೀಲ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೃಷಿ ಅವಲಂಬಿತರ ಜಮೀನು ಖರೀದಿಗೆ ಕೃಷಿಯೇತರರಿಗೆ ಯಾವುದೇ ನಿರ್ಬಂಧವಿಲ್ಲದೇ ಅವಕಾಶ ಮಾಡಿರುವುದು ಬಹು ರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಭೂ ಸುಧಾರಣೆ ಸಿದ್ಧಾಂತಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ. ಊಳುವವನೇ ಹೊಲದ ಒಡೆಯ ಎಂಬ ಕಾಂಗ್ರೆಸ್ ನಿಲುವಿಗೆ ವಿರುದ್ಧವಾಗಿ, ಉಳ್ಳವನಿಗೆ ಜಮೀನು ಎಂಬ ಧೋರಣೆ ಬಿಜೆಪಿ ತೋರಿದೆ ಎಂದು ಟೀಕಿಸಿದ್ದಾರೆ. ಎಪಿಎಂಸಿ ಕಾನೂನಿನ ಕಟ್ಟಳೆಗಳನ್ನು ಮುರಿದು ರೈತರಿಗೆ ದೊಡ್ಡ ಪೆಟ್ಟು ನೀಡಲಾಗಿದೆ. ಈ ತಿದ್ದುಪಡಿ ಪ್ರಾರಂಭದಲ್ಲಿ ಆಕರ್ಷಕವಾಗಿ ಕಂಡರೂ ಮುಂದೆ ರೈತರಿಗೆ ಬಹುದೊಡ್ಡ ಆಘಾತ ಕಾದಿದೆ. ಸಹಕಾರಿ ರಂಗದ ಕಾಲು ಮುರಿಯುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಈ ವೇಳೆ ಕಾಂಗ್ರೆಸ್ ಧುರೀಣ ಸತೀಶ ಬಂಡಿವಡ್ಡರ, ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ದಯಾನಂದ ಪಾಟೀಲ, ಗಿರೀಶ ಲಕ್ಷಾಣಿ, ಡಾ| ರಮೇಶ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ದುಂಡಪ್ಪ ಲಿಂಗರಡ್ಡಿ ಇತರರು ಇದ್ದರು.