ಮುಸ್ಲಿಂರನ್ನು ಕಂಡರೆ ಬಿಎಸ್ವೈಗೆ ದ್ವೇಷ: ಸಿದ್ದು
ಶೀಘ್ರ ಅಧಿವೇಶನ ಕರೆಯದಿದ್ದರೆ ಬೀದಿಗಿಳಿದು ಹೋರಾಟ
Team Udayavani, Dec 6, 2019, 7:29 PM IST
ಬಾಗಲಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಸ್ಲಿಂರನ್ನು ಕಂಡರೆ ದ್ವೇಷವಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಬಾದಾಮಿ ತಾಲೂಕು ಹೊಸೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಮುಸ್ಲಿಂ ಧರ್ಮದವರನ್ನು ಕಂಡರೆ ಏಕೆ ದ್ವೇಷ? ಎಲ್ಲ ಜಯಂತಿಗಳಂತೆ ಟಿಪ್ಪು ಜಯಂತಿ ನಾನೇ ಮಾಡಿದೆ. ಟಿಪ್ಪು ಒಬ್ಬ ರಾಜ. ಮೈಸೂರು ಅರಸರು, ಅಶೋಕ ಚಕ್ರವರ್ತಿ ರೀತಿಯೇ ಟಿಪ್ಪು ಕೂಡ ಒಬ್ಬ ರಾಜ. ನಾನು ಸಿಎಂ ಆಗಿದ್ದಾಗ ಬಡವರಿಗಾಗಿ ಹಲವು ಭಾಗ್ಯಗಳನ್ನು ಜಾರಿಗೊಳಿಸಿದೆ. ಬಿಜೆಪಿಯವರು ಏನು ಮಾಡಿದ್ದಾರೆ. ಜನ ಏನು ನೋಡಿ ಮತ ಹಾಕುತ್ತಾರೆ. ಮಾತೆತ್ತಿದರೆ ಸಬ್ ಕಾ ಸಾಥ್ ಎನ್ನುತ್ತಾರೆ. ಆದರೆ, ಮುಸ್ಲಿಂರನ್ನು ದ್ವೇಷ ಮಾಡುತ್ತಾರೆ ಎಂದರು.
ಬಾದಾಮಿ ಮತ್ತು ಜಮಖಂಡಿ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಸಚಿವ ಈಶ್ವರಪ್ಪ ತಡೆ ಹಿಡಿದ್ದಾರೆ. ಇಂತಹ ದ್ವೇಷದ ರಾಜಕಾರಣ ಬಹಳ ದಿನ ನಡೆಯಲ್ಲ. ಬಾದಾಮಿಯ ಅನುದಾನ ಕಡಿತ ಮಾಡಿದರೆ ಇಲ್ಲಿನ ಜನರು ಸುಮ್ಮನೆ ಇರುತ್ತಾರಾ? ಬಾದಾಮಿಗೆ ಯಡಿಯೂರಪ್ಪ ಅವರನ್ನು ಬರಲು ಜನ ಬಿಡುವುದಿಲ್ಲ. ರಾಜ್ಯದಲ್ಲಿ ಅನೈತಿಕ ಸರ್ಕಾರ ನಡೆಯುತ್ತಿದೆ. ಮೂರು ದಿನ ಮಾತ್ರ ಅಧಿವೇಶನ ನಡೆಸಿದರು. ಇಂದಿಗೂ ಅಧಿವೇಶನ ಕರೆಯುತ್ತಿಲ್ಲ. ಈ ಬಗ್ಗೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.