ಬಾದಾಮಿಯಲ್ಲಿ ಕಣ್ಣೀರಿಟ್ಟ ಚಿಮ್ಮನಕಟ್ಟಿ ಪುತ್ರ ; ಸಿದ್ದರಾಮಯ್ಯಗೆ ಸಂದೇಶ?
Team Udayavani, Dec 27, 2021, 1:44 PM IST
ಬಾದಾಮಿ: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಬಿ.ಬಿ. ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಅವರು ತಮ್ಮ ಜನ್ಮ ದಿನ ಸಮಾರಂಭದಲ್ಲಿ ಅಭಿಮಾನಿಗಳ ಎದುರು ಭಾವುಕವಾಗಿ ಕಣ್ಣೀರಿಟ್ಟ ಪ್ರಸಂಗ ಸೋಮವಾರ ನಡೆದಿದೆ.
ಪಟ್ಟಣದ ಕಾಳಿದಾಸ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ನಡೆದ ಹುಟ್ಟು ಹಬ್ಬ ಕಾಯ೯ಕ್ರಮದಲ್ಲಿ ಕ್ಷೇತ್ರದ ಜನತೆಯ ಪ್ರೀತಿ-ಅಭಿಮಾನಕ್ಕೆ ಭಾವುಕರಾಗಿ ಭೀಮಸೇನ ಕಣ್ಣೀರಿಟ್ಟು, ನನ್ನ ಜನ್ಮ ದಿನಕ್ಕೆ ಇಷ್ಟು ಜನ ಸೇರ್ತಿರಿ ಅಂತಾ ಅಂದುಕೊಂಡಿದ್ದಿಲ್ಲ.ನನಗೆ ನೀವು ಆಸರೆಯಾಗಿರಿ,ನನಗೆ ನೀವೇ ತಂದೆ-ತಾಯಿ. ನನ್ನ ತಂದೆಯವರಿಗೆ ಹೇಗೆ ಶಕ್ತಿ ತುಂಬಿದ್ದೀರಿ, ಹಾಗೇ ನನ್ನ ಜೊತೆಗೂ ನೀವು ನಿಲ್ಲಬೇಕು.ದಯಮಾಡಿ ನನಗೆ ನಿಮ್ಮ ಆಸರೆ ಬೇಕು ಎಂದು ಪ್ರಾರ್ಥಿಸಿದರು.
ನಾನೊಂದು ಮಾತು ಹೇಳುತ್ತಿದ್ದೇನೆ , ನಾನು ಯಾರಿಗೂ ಕೆಟ್ಟದ್ದು ಮಾಡದೇ ಇಂದು ಅನುಭವಿಸುವ ಹಾಗಾಗಿದೆ. ಸಾಕಷ್ಟು ಬಾರಿ ಕೇಳಿಕೊಂಡೆ, ಹೇಳಿಕೊಂಡರೂ ನನ್ನನ್ನು ದ್ವೇಷಿಸುವುದು ಬಿಡುತ್ತಿಲ್ಲ. ಅನಾವಶ್ಯಕ ನನ್ನ ಹೆಸರು ಹಾಳು ಮಾಡುತ್ತಿದ್ದಾರೆ. ನನಗೆ ಬಹಳ ಮಂದಿ ಹೇಳುತ್ತಿದ್ದಾರೆ ಸಾಹುಕಾರ ನೀವು ಗಟ್ಟಿ ಆಗಬೇಕು ಅಂತಾ.ಈಗ ನಾನು ಗಟ್ಟಿಯಾಗಿಯೇ ಬಿಟ್ಟಿದ್ದೇನೆ, ಅದು ಎಲ್ಲಿಗೆ ಹತ್ತುತ್ತೇ ಹತ್ತಲಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಭೀಮಸೇನ ಮಾತಿಗೆ ಕೇಕೆ ಹಾಕಿ ಚಪ್ಪಾಳೆ ತಟ್ಟಿದ ಬೆಂಬಲಿಗರು, ನಾವಿದ್ದೆವೆ ಸಾಹುಕಾರ್ ನೀವು ಕಣ್ಣಿರು ಹಾಕಬೇಡಿ. ಏನೇ ಬರಲಿ ನೋಡೋಣ ಎಂದು ಧೈರ್ಯ ತುಂಬಿದರು.
ನನ್ನ ಹಣೆ ಬರಹ ಏನಿದಿಯೋ ಗೊತ್ತಿಲ್ಲ, ನಿಮ್ಮ ಉಡಿಯಲ್ಲಿ ಬಿದ್ದಿದ್ದೇನೆ. ನನ್ನ ಎತ್ತಿಕೊಳ್ಳುವುದು, ಬಿಡುವುದು ನಿಮ್ಮ ಜವಾಬ್ದಾರಿ. ನನ್ನ ತಂದೆಯವರಂತೆ ನನ್ನನ್ನು ಬೆಂಬಲಿಸಿ ಉಳಿಸಿಕೊಂಡು ಹೋಗುವುದು ನಿಮ್ಮ ಜವಾಬ್ದಾರಿ ಎಂದರು.
ಇಂದು ಗೊತ್ತಾಯ್ತು ನೀವು ನನ್ನ ಜೊತೆಗೆ ನಿಂತಿದ್ದೀರಿ ಎಂದು, ಈ ಮುಖಾಂತರನೇ ತೋರಿಸಬೇಕಿತ್ತು, ಈ ಸಮಯಕ್ಕಾಗಿ ನಾನು ಕಾಯುತ್ತಿದ್ದೆ ಎಂದು ಮುಂದಿನ ವಿಧಾನ ಸಭೆಯಲ್ಲಿ ಅಭ್ಯರ್ಥಿಯಾಗುವ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ನಾಯಕರಿಗೆ ರವಾನಿಸಿದರು.
ಸಿದ್ದರಾಮಯ್ಯ ಅವರಿಗಾಗಿ ಚಿಮ್ಮನಕಟ್ಟಿ ಅವರು ಕ್ಷೇತ್ರ ಬಿಟ್ಟು ಕೊಟ್ಟಿದ್ದರು, ಕೆಲ ದಿನಗಳ ಹಿಂದೆ ಚಿಮ್ಮನಕಟ್ಟಿ ವೇದಿಕೆಯಲ್ಲೇ ಅಸಮಾಧಾನ ಹೊರ ಹಾಕಿದ್ದರು. ಆ ಘಟನೆ ಕಾಂಗ್ರೆಸ್ ನಲ್ಲಿ ಭಾರಿ ಗೊಂದಲಕ್ಕೆ ಕಾರಣವಾಗಿತ್ತು.