ಟೋಪಿ ಧರಿಸಿದ ವಿದ್ಯಾರ್ಥಿಗೆ ಥಳಿತ: ಪಿಎಸ್ ಐ,ಉಪನ್ಯಾಸಕ ಸೇರಿ ಏಳು ಜನರ ವಿರುದ್ಧ ದೂರು ದಾಖಲು
Team Udayavani, May 28, 2022, 6:40 PM IST
ರಬಕವಿ-ಬನಹಟ್ಟಿ : ತೇರದಾಳ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನವೀದ್ ಹಸನಸಾಬ್ ಥರಥರಿ ಎಂಬ ವಿದ್ಯಾರ್ಥಿ ಫೆ. 18ರಂದು ಕಾಲೇಜಿಗೆ ಟೋಪಿ ಧರಿಸಿಕೊಂಡು ಬಂದಿದ್ದಕ್ಕೆ ಕಾಲೇಜಿನ ಉಪನ್ಯಾಸಕ ಎ.ಎಸ್. ಪೂಜಾರ ಅವರು ವಿದ್ಯಾರ್ಥಿ ಮೇಲೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಠಾಣೆಯಲ್ಲಿ ವಿದ್ಯಾರ್ಥಿಗೆ ಇದೇ ವಿಷಯವನ್ನಿಟ್ಟುಕೊಂಡು ಥಳಿಸಿಲಾಗಿತ್ತು.
ಈ ಬಗ್ಗೆ ವಿದ್ಯಾರ್ಥಿ ನವೀದ್ ಥರಥರಿ ನ್ಯಾಯಾಯಲದ ಮೆಟ್ಟಿಲೇರಿದ್ದು, ಠಾಣಾಧಿಕಾರಿ ರಾಜು ಬೀಳಗಿ, ಕಾಲೇಜಿನ ಉಪನ್ಯಾಸಕ ಎ.ಎಸ್. ಪೂಜಾರ ಸೇರಿದಂತೆ ಏಳು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಬನಹಟ್ಟಿ ಜೆಎಂಎಫ್ಸಿ ನ್ಯಾಯಾಲಯಕ್ಕೆ 2022 ರ ಮಾರ್ಚ್ 29 ರಂದು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಏಪ್ರಿಲ್ 4 ರಂದು ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಸ್ಥಳೀಯ ಠಾಣೆ ಹೆಚ್ಚುವರಿ ಪಿಎಸ್ಐ ಸಾಂಬಾಜಿ ಸೂರ್ಯವಂಶಿ ಮೇ. 24 ರಂದು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟೋಪಿ ಧರಿಸಿಕೊಂಡು ಬರಬಾರದು ಎಂದು ಸರಕಾರದ ಮತ್ತು ನ್ಯಾಯಾಲಯದ ಆದೇಶ ಇರದಿದ್ದರು ಕಾಲೇಜಿನ ಉಪನ್ಯಾಸಕ ಎ.ಎಸ್. ಪೂಜಾರ ತನ್ನನ್ನು ಕಾಲೇಜು ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ. ಹಾಗೂ ಪಿಎಸ್ಐ ರಾಜು ಬೀಳಗಿ ಹಾಗೂ ಪೇದೆಗಳಾದ ಪಿ.ಎಚ್. ಗಣಿ, ಮಲ್ಲಿಕಾರ್ಜುನ ಕೆಂಚೆನ್ನವರ, ಎಸ್.ಬಿ. ಕಲಾಟೆ, ಎಸ.ಸಿ. ಮದನಮಟ್ಟಿ, ಕೆ.ಎಚ್. ಸಣ್ಣಟ್ಟಿ ಸೇರಿಕೊಂಡು ಕಾನೂನು ಬಾಹಿರವಾಗಿ ಹಿಂಸೆ ನೀಡಿದ್ದಲ್ಲದೆ ಆತನ ಧರ್ಮಕ್ಕೆ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜೂ. 30ರಂದು ನ್ಯಾಯಾಲದಲ್ಲಿ ವಿಚಾರಣೆ ನಡೆಯಲಿದ್ದು, ಘಟನೆಯ ತನಿಖೆಯನ್ನು ಜಮಖಂಡಿ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ.