ಕೋವಿಡ್-19 ಜಾಗೃತಿ ಅಭಿಯಾನಕ್ಕೆ ಚಾಲನೆ
ಮಾಸ್ಕ್ ಇಲ್ಲದೇ ಹೊರ ಬರಬೇಡಿ: ಕಲ್ಪನಾ
Team Udayavani, Oct 18, 2020, 2:18 PM IST
ಬಾಗಲಕೋಟೆ: ಮಹಾಮಾರಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕೋವಿಡ್-19 ಜನಾಂದೋಲನ ಅಭಿಯಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೋವಿಡ್ ಸೋಂಕಿಗೆ ಯಾವುದೇ ರೀತಿಯ ಲಸಿಕೆ ಇಲ್ಲದ ಕಾರಣ ಕೋವಿಡ್ಹರಡದಂತೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಇತರರಿಂದ 6 ಅಡಿ ಅಂತರ ಕಾಯ್ದುಕೊಳ್ಳಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಂತರ ಕೋವಿಡ್-19 ಜಾಗೃತಿಯ ಘೋಷಣಾಫಲಕಗಳನ್ನು ಹಿಡಿದುಕೊಂಡು ಜಾಥಾ ನಡೆಸಲಾಯಿತು. ಜಾಥಾದಲ್ಲಿ ಪ್ಯಾರಲ್ ಲಿಗಲ್ ಅಡ್ವೋಕೇಟ್, ವಾಲೆಂಟರ್ ನ್ಯಾಯಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶ ಪ್ರಕಾಶ ವಿ, 2ನೇ ಹೆಚ್ಚುವರಿ ಜಿಲ್ಲಾ ಮತ್ತುಸತ್ರ ನ್ಯಾಯಾಧೀಶ ಸಂತೋಷ ಸಿ.ಬಿ., ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ, ವಕೀಲರ ಸಂಘದ ಅಧ್ಯಕ್ಷ ವಿ.ಬಿ.ಚೌಕಿಮಠ, ನಗರಸಭೆ ಪೌರಾಯುಕ್ತ ಮುನಿಶ್ಯಾಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಂತರ ಕೋವಿಡ್-19 ಅಭಿಯಾನದ ಜಾಗೃತಿಯ ಮೂರು ವಾಹನಗಳು ನಗರದ ಬೇರೆ ಬೇರೆ ಕಡೆಗಳಲ್ಲಿ ಸಂಚರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಒಂದು ವಾಹನ ಹಳೆಯ ಬಸವೇಶ್ವರ ವೃತ್ತದಿಂದ ಪ್ರಾರಂಭಿಸಿ ಪೊಲೀಸ್ ಚೌಕ್, ವಲ್ಲಭಬಾಯಿ ಚೌಕ್ ಮಾರ್ಗವಾಗಿ ಸಂಚರಿಸಿದರೆ, ಇನ್ನೊಂದು ವಾಹನ ಜಿಲ್ಲಾ ನ್ಯಾಯಾಲಯದಿಂದ ಹೊರಟು, ಎಲ್ಐಸಿ ವೃತ್ತ, ನವನಗರದ ಬಸ್ ನಿಲ್ದಾಣದ ಮಾರ್ಗವಾಗಿ ಸಂಚರಿಸಿತು. ಮತ್ತೂಂದು ವಾಹನ ವಿದ್ಯಾಗಿರಿ ಸರ್ಕಲ್ದಿಂದ ಹೊರಡು ಗದ್ದನಕೇರಿ ಸರ್ಕಲ್ಗೆ ತೆರಳಿ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧರಿಸದವರಿಗೆ ಉಚಿತವಾಗಿ ಮಾಸ್ಕ್ ಹಾಗೂ ಕರಪತ್ರಗಳನ್ನು ವಿತರಿಸಲಾಯಿತು.