ಬೀಳಗಿ ಕ್ಷೇತ್ರದಲ್ಲಿ ಕೋವಿಡ್ ಕಾಟ ಕಡಿಮೆ
ಜನರ ಸಹಕಾರ-ನಿರಾಣಿ ಫೌಂಡೇಶನ್ ಕೈಗೊಂಡ ಕ್ರಮಗಳಿಂದ ತಗ್ಗಿದ ಕೊರೊನಾ ಸೋಂಕಿತರ ಸಂಖ್ಯೆ
Team Udayavani, May 17, 2021, 4:54 PM IST
ವರದಿ : ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಜಿಲ್ಲೆಯಲ್ಲೇ ಅತಿದೊಡ್ಡ ವಿಧಾನಸಭೆ ಕ್ಷೇತ್ರವೆಂಬ ಖ್ಯಾತಿ ಪಡೆದ ಬೀಳಗಿ ಕ್ಷೇತ್ರದಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳು ಅಷ್ಟೊಂದು ಪತ್ತೆಯಾಗಿಲ್ಲ. ಇಲ್ಲಿ ಸಾವು-ನೋವು ಪ್ರಮಾಣವೂ ಕಡಿಮೆ.
ಕೊರೊನಾ ವಿಷಯದಲ್ಲಿ ಹಲವು ರೀತಿಯ ಮುಂಜಾಗ್ರತಾ ಕ್ರಮ, ಜನರ ಸಹಕಾರ ಹಾಗೂ ನಿರಾಣಿ ಫೌಂಡೇಶನ್ದಿಂದ ಕೈಗೊಂಡ ಹಲವು ಸಾಮಾಜಿಕ ಕಾರ್ಯಗಳು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈ ದಿಟ್ಟ ಕ್ರಮಗಳು ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಿವೆ. ಬೀಳಗಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬೀಳಗಿ, ಬಾಗಲಕೋಟೆ ಹಾಗೂ ಬಾದಾಮಿ ತಾಲೂಕು ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲೂ ಹೈಫೂಕ್ಲೋರೈಡ್ ಸಿಂಪಡಿಸಲಾಗುತ್ತಿದೆ. ಇದರಿಂದ ಸೋಂಕು ಒಂದು ಏರಿಯಾದಿಂದ ಇನ್ನೊಂದು ಏರಿಯಾ ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ನಿಯಂತ್ರಿಸುತ್ತದೆ. ಹೈಫ್ಲೋಕ್ಲೋರೈಡ್ ಸಿಂಪಡಣೆ ಕಾರ್ಯ ಇನ್ನೂ ಒಂದು ವಾರ ಮುಂದುವರಿಯಲಿದೆ. ಸೋಂಕು ನಿಯಂತ್ರಣಕ್ಕೆ ಇದು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಉಚಿತ ಆಕ್ಸಿಜನ್ ಪೂರೈಕೆ: ಕೊರೊನಾ ತುರ್ತುಪರಿಸ್ಥಿತಿಯಲ್ಲಿ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯೇ ಬಹುಮುಖ್ಯ. ಇದನ್ನು ಸವಾಲಾಗಿ ಸ್ವೀಕರಿಸಿದ ನಿರಾಣಿ ಫೌಂಡೇಶನ್ ಜಿಲ್ಲೆಯ ಬೀಳಗಿ ಮತ್ತು ಜಮಖಂಡಿ ಕೋವಿಡ್ ಆಸ್ಪತ್ರೆಗಳಿಗೆ ಉಚಿತ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ನಿರಾಣಿ ಶುಗರ್ ಸಹಿತ ವಿವಿಧ ಕಾರ್ಖಾನೆಗಳಿಗೆ ಹಂಚಿಕೆಯಾದ ಎಲ್ಲ ಆಕ್ಸಿಜನ್ ಸಿಲಿಂಡರ್ಗಳನ್ನು ಆಸ್ಪತ್ರೆಗಳಿಗೆ ನೀಡಿ ಕೊರೊನಾ ಸೋಂಕಿತರಿಗೆ ನೆರವಾಗುವ ಕಾರ್ಯ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದನ್ನು ಜಿಲ್ಲೆಯ ಇನ್ನಷ್ಟು ಕೊರೊನಾ ಆಸ್ಪತ್ರೆಗಳಿಗೆ ವಿಸ್ತರಿಸಲು ಫೌಂಡೇಶನ್ ನಿರ್ಧರಿಸಿದೆ ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಸಂಗಮೇಶ ನಿರಾಣಿ “ಉದಯವಾಣಿ’ಗೆ ತಿಳಿಸಿದರು.
ಸೋಂಕಿತರಿಗೆ ಧೈರ್ಯ ತುಂಬುವ ವೈದ್ಯರು: ಬೆಂಗಳೂರಿನ ನಾರಾಯಣ ಹೃದಯಾಲಯದ ಹೃದ್ರೋಗ ತಜ್ಞ ವೈದ್ಯ ಡಾ| ದಯಾನಂದ ಬಿ. ಯಲಿಗಾರ ಅವರು ವಾರಕ್ಕೆ 2 ದಿನ ಬೀಳಗಿ ತಾಲೂಕಾಸ್ಪತ್ರೆಗೆ ಆಗಮಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಲಿದ್ದಾರೆ. ಇನ್ನುಳಿದ 5ದಿನ ಆನ್ಲೈನ್ ಕನ್ಸ್ಲ್ಟೆನ್ಸಿ ನೀಡಲಿದ್ದಾರೆ. ನಿರಾಣಿ ಫೌಂಡೇಶನ್ ಆರೋಗ್ಯಾಧಿಕಾರಿ ಡಾ|ಶಿವಕುಮಾರ ವಿರಕ್ತಮಠವರು ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆ ವೈದ್ಯರಿಗೆ ಸಹಕಾರ ನೀಡುತ್ತಾರೆ ಎಂದರು.
ಉಚಿತ ಟ್ಯಾಕ್ಸಿ-ಆಂಬ್ಯುಲೆನ್ಸ್ ಸೇವೆ: ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲು ನಿರಾಣಿ ಫೌಂಡೇಶನ್ ಹಾಗೂ ಬಿಜೆಪಿ ಘಟಕದಿಂದ ಸೋಂಕಿತರು, ಕೊವಿಡ್ ಕೇರ್ ಸೆಂಟರ್ಗೆ ದಾಖಲಾಗಲು ಮತ್ತು ಗುಣಮುಖರಾದವರನ್ನು ಮನೆಗೆ ತಲುಪಿಸಲು 5 ಟ್ಯಾಕ್ಸಿಗಳು ಒದಗಿಸಲಾಗಿದೆ. ಉಸಿರಾಟ-ಗಂಭೀರ ಸಮಸ್ಯೆ ಹೊಂದಿದ ಸೋಂಕಿತರ ತುರ್ತು ವೈದ್ಯಕೀಯ ನೆರವಿಗಾಗಿ 2 ಆಂಬ್ಯುಲೆನ್ಸ್ಗಳ ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ಪ್ರತ್ಯೇಕ ಸಹಾಯವಾಣಿ ಆರಂಭಿಸಿದ್ದು, ಅದಕ್ಕೆ ಕರೆ ಮಾಡಿ, ಸೇವೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
24 ಗಂಟೆ ಆರೋಗ್ಯ ಸಹಾಯವಾಣಿ: ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು, ನಿರಾಣಿ ಫೌಂಡೇಶನ್ ಸಿಬ್ಬಂದಿ ಹಾಗೂ ಬಿಜೆಪಿ ಕಾರ್ಯಕರ್ತರನ್ನೊಳಗೊಂಡ ಸಹಾಯವಾಣಿ ಆಸ್ಪತ್ರೆ, ಕೇರ್ ಸೆಂಟರ್, ಆಂಬ್ಯುಲೆನ್ಸ್, ಎಮರ್ಜೆನ್ಸಿ ಟ್ಯಾಕ್ಸಿ ಸೇರಿದಂತೆ ಹಲವು ಸೌಕರ್ಯ ನೀಡಲು ಹಾಗೂ ಕೊರೊನಾ ಸಂಬಂಧಿ ಮಾಹಿತಿ ನೀಡಲು ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತದೆ. ತಾಲೂಕು ಆಸ್ಪತ್ರೆ ವೈದ್ಯ ಡಾ|ಕರೆನ್ನವರ- 94484 35195, ಡಾ| ವಿಲಾಸ ಕರವತಿಕರ- 91648 74231, ತಹಶೀಲ್ದಾರ್ ಶಂಕರ ಗೌಡಿ, 97399 76829 ಹಾಗೂ ನಿರಾಣಿ ಫೌಂಡೇಶನ್ ಸಂಚಾಲಕರು- 74837 49554 ಅವರನ್ನು ಸಂಪರ್ಕಿಸಬಹುದಾಗಿದೆ ಎನ್ನುತ್ತಾರೆ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ.
100 ಹಾಸಿಗೆಗಳ ಉಚಿತ ಕೋವಿಡ್ ಕೇರ್ ಸೆಂಟರ್: ಸೋಂಕಿನ ಲಕ್ಷಣಗಳು ಇಲ್ಲದ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ-ಆರೈಕೆ ಮಾಡಿಕೊಳ್ಳುವಂತೆ ನಿರ್ದೇಶನ ಮಾಡಿದ್ದು, ಅವರಿಗೆ ಕಾಲಕಾಲಕ್ಕೆ ಅಗತ್ಯ ಮಾರ್ಗದರ್ಶನ ನೀಡಲು ಆರೋಗ್ಯ ಇಲಾಖೆಗೆ ಜವಾಬ್ದಾರಿ ವಹಿಸಲಾಗಿದೆ. ಕಡಿಮೆ ಗುಣ ಲಕ್ಷಣ ಹೊಂದಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೀಳಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 100 ಹಾಸಿಗಳ ಸುಸಜ್ಜಿತ ಕೇರ್ ಸೆಂಟರ್ ತೆರೆದಿದ್ದು, ನಿರಾಣಿ ಫೌಂಡೇಶನ್ ದಿಂದ ಉಚಿತ ಊಟ, ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಉಸಿರಾಟ ಸಮಸ್ಯೆ ಸೇರಿದಂತೆ ಹೆಚ್ಚಿನ ಗುಣಲಕ್ಷಣಗಳನ್ನು ಹೊಂದಿದ ಸೋಂಕಿತರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲು ಬೀಳಗಿ ತಾಲೂಕು ಆಸ್ಪತ್ರೆಯನ್ನು ಪೂರ್ಣ ಪ್ರಮಾಣದ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. 50 ಆಕ್ಸಿಜನ್ ಬೆಡ್ಗಳು ಹಾಗೂ 3 ವೆಂಟಿಲೇಟರ್ಗಳ ಸೌಕರ್ಯವಿದ್ದು, ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹನಮಂತ ನಿರಾಣಿ ತಿಳಿಸಿದರು.
ಸ್ಯಾನಿಟೈಸರ್ ವಿತರಣೆ: ಕೊರೊನಾ ಸಂಕ್ರಮಣ ಘಟ್ಟದಲ್ಲಿ ಜೀವದ ಹಂಗು ತೊರೆದು ಸಮಾಜದ ಸ್ಯಾಸ್ಥ್ಯ ಕಾಪಾಡಲು, ಸೋಂಕು ಹತೋಟಿಗೆ ತರಲು ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಪೌರ ಕಾರ್ಮಿಕರಿಗೆ ಉಚಿತ ಸ್ಯಾನಿಟೈಸರ್ ವಿತರಿಸಲಾಗುತ್ತಿದೆ.