ಅದ್ಧೂರಿ ದಿಗಂಬರೇಶ್ವರ ರಥೋತ್ಸವ
Team Udayavani, Feb 24, 2020, 12:35 PM IST
ಬಾದಾಮಿ: ಹಲಕುರ್ಕಿ ಗ್ರಾಮದ ದಿಗಂಬರೇಶ್ವರ ಶ್ರೀಗಳ 77ನೇ ಜಾತ್ರಾ ಮಹೋತ್ಸವ ಅಂಗವಾಗಿ ರವಿವಾರ ಸಂಜೆ 5ಗಂಟೆಗೆ ಸಡಗರ ಸಂಭ್ರಮದಿಂದ ರಥೋತ್ಸವ ಜರುಗಿತು.
ಭಕ್ತರು ಬಾಳೆಕಂಬ, ಬಣ್ಣ-ಬಣ್ಣದ ಧ್ವಜ ಮತ್ತು ಪುಷ್ಪಗಳ ಮಾಲೆಯಿಂದ ಅಲಂಕಾರ ಮಾಡಲಾಗಿದ್ದ ರಥದಲ್ಲಿ ದಿಗಂಬರೇಶ್ವರ ಮತ್ತು ಶಂಕರಯ್ಯ ಶ್ರೀಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಆಡಗಲ್ಲ ಗ್ರಾಮಸ್ಥರಿಂದ ರಥದ ಗಾಲಿಗೆ ಪೂಜೆ ನಡೆಯಿತು. ಕಬ್ಬಲಗೇರಿಯಿಂದ ಹಗ್ಗ, ಮೇಲಿನ ಹಲಕುರ್ಕಿಯಿಂದ ಕಳಸವನ್ನು ಮೆರವಣಿಗೆ ಮೂಲಕ ತರಲಾಯಿತು. ಷಡಕ್ಷರಯ್ಯ ಸ್ವಾಮೀಜಿ ರಥಕ್ಕೆ ಚಾಲನೆ ನೀಡಿದರು.
ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿಯ ಪರಾಕಾಷ್ಟೆ ಮೆರೆದರು. ರಥವು ಮುಂದೆ ಸಾಗಿದಾಗ ಭಕ್ತರು ದಿಗಂಬರೇಶ್ವರ ಶ್ರೀಗಳಿಗೆ ಜೈಕಾರ ಹಾಕಿದರು. ಭಕ್ತರು ದಿಗಂಬರೇಶ್ವರ ಮಠಕ್ಕೆ ದರ್ಶನ ನೀಡಿ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದರು. ರಥೋತ್ಸವದಲ್ಲಿ ಹಲಕುರ್ಕಿ, ಮೇಲಿನಹಲಕುರ್ಕಿ, ಕೊಂಕೊಣಕೊಪ್ಪ, ಯಂಕಂಚಿ, ಮಣಿನಾಗರ,ಚಿಕ್ಕಮುಚ್ಚಳಗುಡ್ಡ, ಹಿರೇಮುಚ್ಚಳಗುಡ್ಡ, ಆಡಗಲ್ಲ, ಕಟಗೇರಿ, ಹಂಗರಗಿ, ಹಿರೇಬೂದಿಹಾಳ, ಖಾಜಿಬೂದಿಹಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಭಾಗವಹಿಸಿದ್ದರು.