ನೇಕಾರರ ಜತೆ ಡಿಕೆಶಿ ಸಂವಾದ
Team Udayavani, Jul 17, 2021, 7:48 PM IST
ಬನಹಟ್ಟಿ: ರಾಜ್ಯದ ನೇಕಾರ ಸಮುದಾಯದಲ್ಲಿ ಅನೇಕ ರೀತಿಯ ನೇಕಾರರಿದ್ದು, ನೇಕಾರ ವೃತ್ತಿಗೆ ಸಂಬಂ ಧಿಸಿದ ಜ್ವಲಂತ ಸಮಸ್ಯೆಗಳ ಕುರಿತು ಜು.18 ರಂದು ಬೆಳಗ್ಗೆ 9 ಗಂಟೆಗೆ ಬನಹಟ್ಟಿ ಬಸವೇಶ್ವರ (ಬಿದರಿ) ಸಮುದಾಯ ಭವನದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಂದ ಸಂವಾದ ಕಾರ್ಯಕ್ರಮ ಜರುಗಲಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಬನಹಟ್ಟಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಭಿನ್ನ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ನೇಕಾರರು ದಯನೀಯ ಸ್ಥಿತಿ ಎದುರಿಸುತ್ತಿದ್ದಾರೆ. ನೇಕಾರ ಮತ್ತು ಮಾಲೀಕರ ಏಳ್ಗೆಗೆ ಯಾವ ರೀತಿ ಸ್ಪಂದನೆ ಅಗತ್ಯವೆಂಬುದರ ಕುರಿತು ಹಾಗೂ ನೇಕಾರಿಕೆ ಸಂಪೂರ್ಣ ನಶಿಸಿ ಹೋಗುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇದರ ಪುನಶ್ಚೇತನಕ್ಕೆ ಬೇಕಾದ ಅಗತ್ಯತೆಗಳ ಬಗ್ಗೆ ಸಂವಾದ ಪ್ರಾಮುಖ್ಯತೆ ಪಡೆಯಲಿದೆ ಎಂದರು. ಸಾಲ ಮನ್ನಾ, ಸಬ್ಸಿಡಿ ಇತರೆ ಯೋಜನೆಗಳು ನೇಕಾರರಿಗೆ ಸಾಲುತ್ತಿಲ್ಲ. ಇದರ ಸಂಪೂರ್ಣ ಪುನಶ್ಚೇತನ ಸರ್ಕಾರ ಯೋಜನೆಗಳ ಮೂಲಕ ರೂಪಿಸಬೇಕಿದೆ. ಸಾಲ ಮನ್ನಾ, ಕೆಎಚ್ಡಿಸಿ ನೇಕಾರ ಮನೆ ಸಾಲ ಮನ್ನಾ, ಹಕ್ಕುಪತ್ರ ಕುಟುಂಬಗಳಿಗೆ ಮಾಲೀಕತ್ವ ಹಕ್ಕು, ವಿದ್ಯುತ್ ಸಬ್ಸಿಡಿ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನದೊಂದಿಗೆ ಯಶಸ್ವಿ ಕಂಡಿದ್ದೇನೆ. ಆದರೆ ಈಗಿನ ಸರ್ಕಾರ ಇದನ್ನು ಉಳಿಸಿಕೊಂಡು ಹೋಗುವ ಬದಲಾಗಿ ತೆರಿಗೆ ಹೆಚ್ಚಳದೊಂದಿಗೆ ವಿದ್ಯುತ್ ಹೊರೆ ಮಾಡುತ್ತಿರುವುದು ಬೇಸರವಾಗಿದೆ ಎಂದರು.
ಒಟ್ಟಾರೆ ನೋಟು ಅಮಾನ್ಯ, ಜಿಎಸ್ಟಿ, ಕೊರೊನಾ, ಅತಿವೃಷ್ಟಿಯಿಂದ ಜವಳಿ ಉದ್ಯಮ ರಾಜ್ಯದಲ್ಲಿ ಅವನತಿಯತ್ತ ಸಾಗುತ್ತಿದೆ. ಸಣ್ಣ ತಾಂತ್ರಿಕ ಸಮಸ್ಯೆಗಳನ್ನೂ ಪರಿಹರಿಸುವಲ್ಲಿ ಸರ್ಕಾರ ವೈಫಲ್ಯತೆ ಕಂಡಿದೆ. ಕಚ್ಚಾ ವಸ್ತುಗಳ ಮೇಲೆ ಬೆಲೆ ನಿಯಂತ್ರಣವಿಲ್ಲ. ಬದಲಾಗಿ ತೆರಿಗೆ ಹೊರೆ ಇವೆಲ್ಲದರ ಕುರಿತು ಜವಳಿ ಉದ್ಯಮ ಉಳಿವಿಗಾಗಿ ಶಿವಕುಮಾರರಿಂದ ಚಿಂತನೆ ನಡೆಯಲಿದೆ. ಆದ್ದರಿಂದ ನೇಕಾರರು ಪಕ್ಷಭೇದ ಮರೆತು ಸಂವಾದದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಈ ವೇಳೆ ಚನವೀರಪ್ಪ ಹಾದಿಮನಿ, ಸಂಗಪ್ಪ ಕುಂದಗೋಳ, ಶಂಕರ ಜಾಲಿಗಿಡದ, ನೀಲಕಂಠ ಮುತ್ತೂರ, ರಾಜೇಂದ್ರ ಭದ್ರನ್ನವರ, ಮಾಳು ಹಿಪ್ಪರಗಿ, ಬಸವರಾಜ ಗುಡ್ಡೋಡಗಿ, ಓಂಪ್ರಕಾಶ ಮನಗೂಳಿ ಇದ್ದರು.