ದುಃಖಕ್ಕೆ ದುಶ್ಚಟಗಳು ಪರಿಹಾರವಲ್ಲ
Team Udayavani, Oct 26, 2021, 4:28 PM IST
ಬೀಳಗಿ: ದುಃಖ, ನೋವು ದುಮ್ಮಾನಗಳಿಗೆ ದುಶ್ಚಟಗಳು ಪರಿಹಾರವಲ್ಲ. ಮದ್ಯಪಾನ, ದುಶ್ಚಟಗಳ ದಾಸರಾದರೆ ಆರೋಗ್ಯ ಕುಟುಂಬ ನೆಮ್ಮದಿ ಹಾಳಾಗುತ್ತದೆ. ಪಾನಮುಕ್ತರಾಗಿ ಮುಂದಿನ ಬದುಕು ಕಟ್ಟಿಕೊಳ್ಳುವ ಮೂಲಕ ಕುಟುಂಬದಲ್ಲಿ ನೆಮ್ಮದಿ ತರಬೇಕು. ಸಮಾಜ ದಲ್ಲಿ ಒಳ್ಳೆಯವರಾಗಿ ಬದುಕಿದಾಗ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದು ಹುಚ್ಚೇಶ್ವರ ಮಠದ ಫಕೀರಯ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ನಡೆದ ಮದ್ಯವರ್ಜನ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಡಾ| ಎಂ. ಜಿ. ಕಿತ್ತಲಿ ಶಿಬಿರ ಉದ್ಘಾಟಿಸಿ ಮಾತನಾಡಿ, ಮದ್ಯವ್ಯಸನಿಗಳಾದವರು ಶಿಬಿರದಲ್ಲಿ ಪಾಲ್ಗೊಂಡು ದುಶ್ಚಟದಿಂದ ಹೊರಬಂದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸ್ವಸ್ಥ, ದುಶ್ಚಟ ಮುಕ್ತ ಸಮಾಜ ಕಟ್ಟೋಣ ಎಂದು ಹೇಳಿದರು.
ಶಿಬಿರಾಧಿಕಾರಿ ನಂದಕುಮಾರ ಮಾತನಾಡಿ, ಮದ್ಯವ್ಯಸನಿಗಳ ಮನಪರಿವರ್ತನೆ ಮಾಡಿ ಮತ್ತೆ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಬದುಕು ಸುಂದರವಾಗಲು ಈ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಸಂಚಾರಿ ವಾಹನದಲ್ಲಿ ಶಸ್ತ್ರ ಚಿಕಿತ್ಸೆ ತರಬೇತಿ!
ಪಿಎಸ್ಐ ಕೇಶವ ಟಿ. ಮಾನೆ, ಆರೋಗ್ಯಾಧಿಕಾರಿ ಡಾ| ದಯಾನಂದ ಕರೆಣ್ಣವರ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿ.ಜಿ. ರೇವಡಿಗಾರ, ಯೋಜನಾಧಿಕಾರಿಗಳಾದ ಮಾಧವ ನಾಯಕ, ಜ್ಯೋತಿ ಜೋಳದ ಮಾತನಾಡಿದರು.
ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಯಲ್ಲಪ್ಪ ಮೇಟಿ, ಉಪಾಧ್ಯಕ್ಷ ಸಿದ್ದು ಸಾರಾವಾರಿ, ಕೋಶಾಕಾರಿ ರವಿಕುಮಾರ ನಾಗನಗೌಡರ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಡಿ.ಎಂ. ಸಾಹುಕಾರ, ಸಿದ್ದು ಮೇಟಿ ಶಶಿ ಕೊಡತಗೇರಿ, ಮನೊಜ ಹಾದಿಮನಿ ಇದ್ದರು. ಆರೋಗ್ಯ ಸಹಾಯಕ ವೆಂಕಟೇಶ ಸ್ವಾಗತಿಸಿದರು. ಭೀಮಪ್ಪ ಚಿಗರಟ್ಟಿ ನಿರೂಪಿಸಿದರು. ನಂದಕುಮಾರ ವಂದಿಸಿದರು.