ಜೆಮ್ ಶುಗರ್ ಗೋದಾಮು ಜಪ್ತಿ
Team Udayavani, Jul 3, 2019, 12:28 PM IST
ಬೀಳಗಿ: ಕುಂದರಗಿ ಜೆಮ್ ಶುಗರ್ನ ಸಕ್ಕರೆ ಗೋದಾಮನ್ನು ತಹಶೀಲ್ದಾರ್ ಮಂಗಳವಾರ ಜಪ್ತಿ ಮಾಡಿದರು.
ಬೀಳಗಿ: ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿರುವ ತಾಲೂಕಿನ ಕುಂದರಗಿ ಜೆಮ್ ಸಕ್ಕರೆ ಕಾರ್ಖಾನೆಯ 36.68 ಕೋಟಿ ರೂ. ಮೌಲ್ಯದ 1,18,335 ಕ್ವಿಂಟಲ್ ಸಕ್ಕರೆ ದಾಸ್ತಾನು ಗೋದಾಮನ್ನು ತಹಶೀಲ್ದಾರ್ ಉದಯ ಕುಂಬಾರ ಮಂಗಳವಾರ ಜಪ್ತಿ ಮಾಡಿದ್ದಾರೆ. ಜೆಮ್ ಸಕ್ಕರೆ ಕಾರ್ಖಾನೆ 35.60 ಕೋಟಿ ರೂಪಾಯಿ ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಕ್ಕರೆ ಕಾರ್ಖಾನೆಯ ಗೋದಾಮಿನಲ್ಲಿರುವ ಸಕ್ಕರೆಯನ್ನು ಜಪ್ತಿ ಮಾಡಲಾಗಿದೆ. ಸಕ್ಕರೆ ಗೋದಾಮು ಸೀಜ್ ಮಾಡಲು ತೆರಳಿದಾಗ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕರು ವಾರದೊಳಗೆ ರೈತರ ಬಿಲ್ ಬಾಕಿ ಚುಕ್ತಾ ಮಾಡುತ್ತೇವೆ.
ಗೋದಾಮು ಜಪ್ತಿ ಮಾಡಬೇಡಿ ಎಂದು ಕೇಳಿಕೊಂಡರು. ಆದರೆ, ಜಿಲ್ಲಾಧಿಕಾರಿಗಳ ಆದೇಶದಂತೆ ಸಕ್ಕರೆ ಸೀಜ್ ಮಾಡಲಾಗಿದೆ. ಕಾರ್ಖಾನೆಯವರು ವಾರದಲ್ಲಿ ರೈತರ ಬಿಲ್ ಬಾಕಿ ನೀಡಿದರೆ ಗೋದಾಮು ತೆರವುಗೊಳಿಸಲಾಗುವುದು. ಇಲ್ಲದಿದ್ದರೆ ಸಕ್ಕರೆ ಹರಾಜು ಪ್ರಕ್ರಿಯೆ ನಡೆಯುತ್ತದೆ. ಸಕ್ಕರೆ ಹರಾಜಿನಿಂದ ಬಂದ ಹಣದಲ್ಲಿ ರೈತರ ಕಬ್ಬಿನ ಬಾಕಿ ನೀಡಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ಎಎಸ್ಐ ಸಿ.ಸಿ. ನಾಗನಗೌಡರ, ಎಂ.ಕೆ.ಹಿರೇಮಠ, ಸಿಬ್ಬಂದಿ ಭಾಗವಹಿಸಿದ್ದರು.