ಸಂರಕ್ಷಣೆಯೊಂದಿಗೆ ಗುಣಮಟ್ಟದ ಆಹಾರವಿರಲಿ
Team Udayavani, May 18, 2019, 11:18 AM IST
ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತವಿರುವ ಹೋಟೆಲ್ಗಳಿಗೆ ಆಹಾರ ಸಂರಕ್ಷಣಾಧಿಕಾರಿ ಅಪ್ಪಾಜಿ ಹೂಗಾರ ಸ್ವಚ್ಛತೆ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು.
ಬನಹಟ್ಟಿ: ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಕಾಯ್ದೆಯನ್ವಯ ಆಹಾರ ಪದಾರ್ಥ ತಯಾರಿಕೆಯಲ್ಲಿ ಬಳಕೆಯಾಗುವ ಕಚ್ಚಾ ವಸ್ತುಗಳನ್ನು ವಿಕ್ರಯ ಮಾಡುವ ಸಂದರ್ಭ ಸಂರಕ್ಷಣೆ ಹಾಗೂ ಗುಣಮಟ್ಟದ ವಸ್ತು ತಯಾರಿಯೊಂದಿಗೆ ಶುದ್ಧ ಆಹಾರ ತಯಾರಿಕೆಯಲ್ಲಿ ಹೋಟೆಲ್ಗಳು ಇರಬೇಕು. ಅಡುಗೆ ಮಾಡುವ ಕೋಣೆಗಳು ಸ್ವಚ್ಛತೆಯೊಂದಿಗೆ ನಿಗದಿತ ದಿನಾಂಕದೊಳಗಿನ ಸಮಯದೊಳಗಿನ ಆಹಾರ ಬಳಕೆಯೊಂದಿಗೆ ಪರಿಶುದ್ಧ ಆಹಾರ ತಯಾರಿಕೆಯಲ್ಲಿ ತೊಡಗಿರಬೇಕೆಂದು ಆಹಾರ ಸಂರಕ್ಷಣಾ ಅಧಿಕಾರಿ ಅಪ್ಪಾಜಿ ಹೂಗಾರ ಹೇಳಿದರು.
ಶುಕ್ರವಾರ ನಗರದ ಡೆಂಪೋ ಡೇರಿ ಹಾಗೂ ಬನಹಟ್ಟಿ ಸಹಕಾರಿ ನೂಲಿನ ಗಿರಣಿಗಳ ಕ್ಯಾಂಟೀನ್ ಸೇರಿದಂತೆ ಅನೇಕ ಕಡೆಗಳ ಹೋಟೆಲ್ಗಳನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಹೊಟೇಲ್ಗಳಲ್ಲಿನ ವಸ್ತುಗಳು ಅದರಲ್ಲೂ ತರಕಾರಿಗಳನ್ನು ತಾಜಾತನದಿಂದ ಕೂಡಿ ಪ್ರತಿ ದಿನ ಬಳಕೆಯಲ್ಲಿ ಪ್ರಾಮಾಣಿಕತೆಯಿರಬೇಕು. ಆಹಾರ ವಿತರಣೆ ಸಂದರ್ಭ ಸ್ವಚ್ಛತೆಯೊಂದಿಗೆ ಗ್ರಾಹಕರಿಗೆ ಪರಿಶುದ್ಧ ಆಹಾರ ಒದಗಿಸುವಲ್ಲಿ ಹೋಟೆಲ್ಗಳು ಮುಂದಾಗಬೇಕೆಂದರು.ಈಗಾಗಲೇ ರಬಕವಿ-ಬನಹಟ್ಟಿ ಸೇರಿದಂತೆ ಅನೇಕ ಕಡೆಗಳಲ್ಲಿ ಭೆಟ್ಟಿ ನೀಡಿ ಕೆಲ ಹೋಟೆಲ್ ಹಾಗು ಖಾನಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಕೆಲ ತಿಳುವಳಿಕೆ ಪತ್ರಗಳನ್ನು ನೀಡಲಾಗಿದೆ. ಅಲ್ಲದೆ ಸ್ವಚ್ಛತೆ ಹಾಗೂ ಅಡುಗೆ ತಯಾರಿಕೆಯಲ್ಲಿ ಯಾವದೇ ರಸಾಯನಿಕ ವಸ್ತುಗಳನ್ನು ಬಳಸದಂತೆ ಎಚ್ಚರಿಕೆ ಕ್ರಮ ವಹಿಸುವಲ್ಲಿ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೂಗಾರ ತಿಳಿಸಿದರು.
ಬಣ್ಣದ ರಸಾಯನ ಬಳಕೆ: ಕೆಲ ಡಬ್ಟಾ ಅಂಗಡಿಗಳಲ್ಲಿ ಸ್ನ್ಯಾಕ್ಸ್ ಮಾರಾಟಗಾರರು ತಿನಿಸು ರುಚಿಯಾಗಲು ಕೆಲ ಬಣ್ಣದಿಂದ ಕೂಡಿದ ರಸಾಯನಿಕ ಕೆಮಿಕಲ್ ಮಿಶ್ರಣ ಮಾಡುತ್ತಿರುವುದು ತಿಳಿದು ಬಂದಿದ್ದು, ಕೂಡಲೇ ಅಂಥ ವಿಷಕಾರಿ ಪದಾರ್ಥಗಳನ್ನು ನಿಷೇಧಿಸಬೇಕು. ಈಗಾಗಲೇ ಕೆಲವೆಡೆ ಪರಿಶೀಲನೆ ನಡೆಸಿದ್ದು, ಅಂಥವರಿಗೆ ನೋಟಿಸ್ ನೀಡಿ ತಿಳಿಹೇಳಿದೆ. ಇದನ್ನೇ ಮುಂದುವರೆಸಿದ್ದಲ್ಲಿ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.